ಕೊಪ್ಪಳದಲ್ಲಿ ಕಾರ್ಖಾನೆ ಮಾಲಿನ್ಯದ ಕುರಿತು ಜಂಟಿ ಸರ್ವೆ ವರದಿ ಮುಚ್ಚಿಟ್ಟಿದ್ಯಾಕೆ?

KannadaprabhaNewsNetwork |  
Published : Feb 25, 2025, 12:49 AM ISTUpdated : Feb 25, 2025, 01:05 PM IST
ಬಿಎಸ್‌ಪಿಎಲ್‌ ಕಾರ್ಖಾನೆ | Kannada Prabha

ಸಾರಾಂಶ

ಕಾರ್ಖಾನೆ ತ್ಯಾಜ್ಯದ ಕುರಿತು ಸಾಲು ಸಾಲು ದೂರುಗಳು ಬಂದಾಗ ಮತ್ತು ರೈತರು ತಮ್ಮ ಬೆಳೆಯೇ ಬರುತ್ತಿಲ್ಲ ಎಂದು ದೂರಿದಾಗ 2022ರಲ್ಲಿ ಕಾರ್ಖಾನೆ ಮಾಲಿನ್ಯ ಕುರಿತು ಜಂಟಿ ಸರ್ವೆ ಮಾಡಲಾಯಿತು. ಆದರೆ ಇದುವರೆಗೂ ಈ ವರದಿ ಬಹಿರಂಗ ಮಾಡಿಲ್ಲ. ಅದನ್ನು ಮುಚ್ಚಿಟ್ಟಿದ್ದು ಯಾಕೆ? ಎನ್ನುವುದು ಪ್ರಶ್ನೆ ಕೇಳಿಬರುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕಾರ್ಖಾನೆ ತ್ಯಾಜ್ಯದ ಕುರಿತು ಸಾಲು ಸಾಲು ದೂರುಗಳು ಬಂದಾಗ ಮತ್ತು ರೈತರು ತಮ್ಮ ಬೆಳೆಯೇ ಬರುತ್ತಿಲ್ಲ ಎಂದು ದೂರಿದಾಗ 2022ರಲ್ಲಿ ಕಾರ್ಖಾನೆ ಮಾಲಿನ್ಯ ಕುರಿತು ಜಂಟಿ ಸರ್ವೆ ಮಾಡಲಾಯಿತು. ಆದರೆ ಇದುವರೆಗೂ ಈ ವರದಿ ಬಹಿರಂಗ ಮಾಡಿಲ್ಲ. ಅದನ್ನು ಮುಚ್ಚಿಟ್ಟಿದ್ದು ಯಾಕೆ? ಎನ್ನುವುದು ಪ್ರಶ್ನೆ ಕೇಳಿಬರುತ್ತಿದೆ.

ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಖಾನೆ ವ್ಯಾಪ್ತಿಯಲ್ಲಿ ಆಗಿರುವ ಮಾಲಿನ್ಯ ಮತ್ತು ಮಾಲಿನ್ಯದಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು, ವಿಶೇಷವಾಗಿ ರೈತರ ಬೆಳೆಯ ಮೇಲೆ ಆಗಿರುವ ಪರಿಣಾಮದ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚಿಸಲಾಯಿತು. ಅದರಂತೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡು ಅಧ್ಯಯನ ವರದಿ ಸಹ ಮಾಡಲಾಯಿತು. ಅದಾದ ಮೇಲೆ ಅದನ್ನು ಇದುವರೆಗೂ ಬಹಿರಂಗ ಮಾಡಲೇ ಇಲ್ಲ. ರೈತರ ದೂರಿಗೆ ಕೇವಲ ಸಬೂಬು ನೀಡಲಾಯಿತೇ ವಿನಃ ವರದಿ ನೀಡಿ, ಏನಾಗಿದೆ ಎನ್ನುವ ಮಾಹಿತಿ ಇದುವರೆಗೂ ಜಿಲ್ಲಾಡಳಿತ ನೀಡಲೇ ಇಲ್ಲ.

ಇದಷ್ಟೇ ಅಲ್ಲ, ಕಾರ್ಖಾನೆ ತ್ಯಾಜ್ಯದಿಂದ ಕೊಪ್ಪಳ ನಗರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿಯೂ ಆಗಿರುವ ಮಾಲಿನ್ಯದ ಕುರಿತು ಸಹ ಅಧ್ಯಯನಕ್ಕಾಗಿ ಪ್ರತ್ಯೇಕ ತಜ್ಞರ ತಂಡ ಕರೆಯಿಸಿ, ಅಧ್ಯಯನ ಮಾಡಿಸಲಾಯಿತಾದರೂ ಆನಂತರ ಅದನ್ನು ಸಹ ಬಹಿರಂಗ ಮಾಡಲೇ ಇಲ್ಲ.

ವರದಿ ಅಘಾತಕಾರಿ: ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಅಧ್ಯಯನ ವರದಿಯಲ್ಲಿ ಭಾರಿ ಅಘಾತಕಾರಿ ಅಂಶಗಳನ್ನು ಪತ್ತೆ ಮಾಡಿ ವರದಿ ನೀಡಿದ್ದಾರೆ ಎನ್ನಲಾಗಿದೆ.

ಅಧಿಕಾರಿಯೋರ್ವರ ಮಾಹಿತಿಯ ಪ್ರಕಾರ, ಕಾರ್ಖಾನೆ ವ್ಯಾಪ್ತಿಯಲ್ಲಿ ತೋಟಗಾರಿಕೆ ಮತ್ತು ಕೃಷಿ ಬೆಳೆ ಬೆಳೆಯದಂತೆ ಕಟ್ಟುನಿಟ್ಟಾಗಿ ಸಲಹೆ ನೀಡಲಾಗಿದೆ. ಅಷ್ಟೇ ಅಲ್ಲ, ಕಾರ್ಖಾನೆ ವ್ಯಾಪ್ತಿಯಲ್ಲಿ ಮರ ಕೃಷಿ ಮಾಡಬೇಕು ಮತ್ತು ಕಾರ್ಖಾನೆ ತ್ಯಾಜ್ಯದಿಂದಾಗುವ ದುಷ್ಪರಿಣಾಮ ನೀಗಿಸಲು ನೀರು ಸಿಂಪರಣೆ ಮಾಡುವ ಮೂಲಕ ಮರ ಕೃಷಿ ಪೋಷಿಸಬಹುದು ಎಂದು ವರದಿ ಮಾಡಿರುವುದಾಗಿ ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ಮಾಲಿನ್ಯ ನಿಯಂತ್ರಣ ಸಹಿಸಬಲ್ಲ ಹೆಬ್ಬೇವು ಬೆಳೆದರೆ ರೈತರಿಗೆ 8, 10 ವರ್ಷಗಳಲ್ಲಿ ಆದಾಯ ಬರುತ್ತದೆ ಎಂದು ಸಹ ಮಾರ್ಗದರ್ಶನ ನೀಡಲಾಗಿದೆ ಎನ್ನಲಾಗಿದೆ. ಆದರೆ, ಇದುವರೆಗೂ ವರದಿ ಬಹಿರಂಗ ಮಾಡದೆ ಇರುವುದರಿಂದ ಅದ್ಯಾವ ಮಾಹಿತಿಯೂ ಬೆಳಕಿಗೆ ಬರಲೇ ಇಲ್ಲ.

ಜಾನುವಾರು ಸಾಕದಂತೆ ಸಲಹೆ: ಇದಲ್ಲದೆ ಜಾನುವಾರುಗಳ ಸಾವು ಹೆಚ್ಚುತ್ತಿರುವುದು ಮತ್ತು ಅವುಗಳು ಗರ್ಭ ಧರಿಸದ ಕುರಿತು ರೈತರು ನೀಡಿದ ದೂರಿನ ಆಧಾರದಲ್ಲಿ ಪಶು ಸಂಗೋಪನಾ ಇಲಾಖೆ ವೈದ್ಯರೊಬ್ಬರು ನಡೆಸಿದ ಅಧ್ಯಯನ ವರದಿಯ ಪ್ರಕಾರ ಕಾರ್ಖಾನೆ ತ್ಯಾಜ್ಯ ವ್ಯಾಪ್ತಿಯಲ್ಲಿ ರೈತರು ಜಾನುವಾರುಗಳನ್ನು ಸಾಕದಿರುವಂತೆ ಸೂಚಿಸಲಾಗಿದೆ. ಆದರೆ, ಹೀಗೆ ನೀಡಿದ ವರದಿ ಆಧರಿಸಿ ಯಾವುದೇ ಕ್ರಮ ವಹಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಕಾರ್ಖಾನೆ ತ್ಯಾಜ್ಯದ ಕುರಿತು ಅಧ್ಯಯನ ವರದಿಯ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ಹೇಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ