ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಹೃದಯ ಭಾಗದಲ್ಲಿರುವ ಚನ್ನಗಿರಿ ರಸ್ತೆ, ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಮಾಧವಚಾರ್ ವೃತ್ತದಿಂದ ಹಾಲಪ್ಪ ವೃತ್ತದವರೆಗೆ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕೆಲವು ವರ್ಷಗಳ ಹಿಂದೆಯೇ ರಸ್ತೆ ಅಗಲೀಕರಣ ಕಾರ್ಯಕ್ಕೆ ನಗರಸಭೆ ಆಡಳಿತ ಮುಂದಾಗಿದ್ದು, ರಸ್ತೆಯ ಮಧ್ಯ ಭಾಗದಿಂದ ಎರಡು ಕಡೆ ಅಳತೆ ಗುರುತು ಮಾಡಲಾಗಿದೆ. ರಸ್ತೆಯ ಎರಡೂ ಬದಿ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯ ಕೈಗೊಳ್ಳಬೇಕಾಗಿದೆ. ಆದರೆ ಇದಕ್ಕೆ ಸ್ಥಳೀಯರು ಹಾಗೂ ವರ್ತಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹಲವು ಬಾರಿ ಗುರುತು ಕಾರ್ಯ ಕೈಗೊಂಡಿದ್ದರೂ ಸಹ ವಿರೋಧದಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಇದೀಗ ಕಾರ್ಯಾಚರಣೆ ಕೈಗೊಂಡಿದ್ದು, ಸಾರ್ವಜನಿಕ ಶೌಚಾಲಯ, ಬಸ್ ತಂಗುದಾಣ ಸೇರಿದಂತೆ ಕೆಲವು ಕಟ್ಟಡಗಳನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಲಾಗಿದೆ.
ಬಹಳಷ್ಟು ಅಂಗಡಿ ಮುಂಗಟ್ಟುಗಳ ಹೆಚ್ಚಿನ ಜಾಗ ತೆರವುಗೊಳಿಸಬೇಕಾಗಿದ್ದು, ಇದರಿಂದಾಗಿ ವರ್ತಕರಲ್ಲಿ ಒಂದೆಡೆ ಆತಂಕ ಮನೆ ಮಾಡಿದೆ. ವರ್ತಕರಿಂದ ಕಾರ್ಯಾಚರಣೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಬಾರಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲೇಬೇಕೆಂದು ನಿರ್ಧರಿಸಿರುವ ನಗರಸಭೆ ಆಡಳಿತ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿದೆ.