ಹನೂರು: ತಾಲೂಕಿನ ಕುರುಬರದೊಡ್ಡಿ ಗ್ರಾಮದ ನಿವಾಸಿಯೋರ್ವ ತನ್ನ ಪತ್ನಿಯನ್ನೇ ನೀರಿನ ಸಂಪಿನೊಳಗೆ ಮುಳುಗಿಸಿ ಹತ್ಯೆ ಮಾಡಿರುವ ಘಟನೆ ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಘಟನೆ ವಿವರ: ಮೃತ ಮಹಿಳೆ ರಾಜಮ್ಮ ಹಾಗೂ ಪತಿ ಕಜ್ಜಾಯರಾಜು ನಡುವೆ ಕೌಟುಂಬಿಕ ಕಲಹ ನಡೆದು ಇವರಿಬ್ಬರ ಜಗಳ ತಾರಕಕ್ಕೇರಿ ಯಾರೂ ಇಲ್ಲದ ಸಮಯದಲ್ಲಿ ನೀರಿನ ಸಂಪಿಗೆ ಹಾಕಿ ಮುಳುಗಿಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಘಟನೆ ಬೆನ್ನಲ್ಲೆ ಮೃತ ರಾಜಮ್ಮ ಪುತ್ರ ಬಸವರಾಜು ತಾಯಿಯ ಮೃತ ದೇಹವನ್ನು ಸಂಪಿನಿಂದ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನೆಯ ನಂತರ ಪತಿ ಪರಾರಿಯಾಗಿದ್ದು, ರಾಮಪುರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುರುಬರ ದೊಡ್ಡಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ನೀರಿನ ಸಂಪಿಗೆ ಹಾಕಿ ಹತ್ಯೆ ಮಾಡಲಾಗಿರುವ ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತಾ, ಇನ್ಸ್ಪೆಕ್ಟರ್ ಶೇಷಾದ್ರಿ ಹಾಗೂ ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆಯ ಸಂಬಂಧ ಮೃತ ರಾಜಮ್ಮ ಪುತ್ರ ಬಸವರಾಜ್ ರಿಂದ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಯ ಸಂಬಂಧ ತಲೆ ಮರೆಸಿಕೊಂಡಿರುವ ರಾಜು ಪತ್ತೆಗೆ ಈಗಾಗಲೇ ಬಲೆ ಬೀಸಲಾಗಿದೆ ಎಂದು ತಿಳಿದುಬಂದಿದೆ.