ಕಳೆದೆರಡು ದಿನಗಳಿಂದ ಉಪ್ಪಿಂಗಡಿ ಸಮೀಪದ ಬಂದಾರು ಗ್ರಾಮದ ಬಟ್ಕಡ ಮಸೀದಿ ಬಿಬಿ ಮಜಲು ಪರಿಸರದಲ್ಲಿ ಆನೆಗಳು ಕಾಣಿಸಿಕೊಂಡು ಘೀಳಿಡುತ್ತಿವೆ. ಈ ಮಧ್ಯೆ ಗ್ರಾಮದ ಬಿಬಿ. ಮಜಲು ತಿಮ್ಮಯ್ಯ ಗೌಡ ಎಂಬವರ ತೋಟದಲ್ಲಿ ಅಡಕೆ, ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡಿದ್ದು, ಅಪಾರ ನಷ್ಟಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಳೆದರಡು ದಿನಗಳಿಂದ ಬೆಳ್ತಂಗಡಿ ತಾಲೂಕಿನ ನೆರೆಂಕಿಮಲೆ ಕಾಡಿನಿಂದ ಕಾಡಾನೆಗಳು ನೇತ್ರಾವತಿ ನದಿ ಕಿನಾರೆಯತ್ತ ಧಾವಿಸಿ ಕೃಷಿಬೆಳೆಗಳನ್ನು ಹಾನಿಗೊಳೀಸುತ್ತಿರುವ ಘಟನಾವಳಿಗಳ ನಡುವೆ ಜೀವ ಭಯದಿಂದ ದಿನ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದೆರಡು ದಿನಗಳಿಂದ ಬಂದಾರು ಗ್ರಾಮದ ಬಟ್ಕಡ ಮಸೀದಿ ಬೀಬಿ ಮಜಲು ಪರಿಸರದಲ್ಲಿ ಆನೆಗಳು ಕಾಣಿಸಿಕೊಂಡು ಘೀಳಿಡುತ್ತಿದ್ದು, ಎಲ್ಲಿ ಮನೆಗೆ ದಾಳಿ ಮಾಡಿ ಜೀವ ಹಾನಿಗೆ ಕಾರಣವಾಗುವುದೋ ಎಂಬ ಭೀತಿ ಸ್ಥಳೀಯ ಜನರನ್ನು ಕಾಡತೊಡಗಿದೆ.
ಈ ಮಧ್ಯೆ ಗ್ರಾಮದ ಬಿಬಿ. ಮಜಲು ತಿಮ್ಮಯ್ಯ ಗೌಡ ಎಂಬವರ ತೋಟದಲ್ಲಿ ಅಡಕೆ, ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡಿದ್ದು, ಅಪಾರ ನಷ್ಟಕ್ಕೆ ಕಾರಣವಾಗಿದೆ. ಉಪ್ಪಿನಂಗಡಿ ವಲಯ ಅರಣಾಧಿಕಾರಿಗಳ ಸಹಿತ ಸಿಬ್ಬಂದಿ ಪರಿಸರದಲ್ಲಿ ಬೀಡುಬಿಟ್ಟಿದ್ದು ನಾಗರಿಕರು ರಾತ್ರಿ ಆನೆಯ ಸದ್ದು ಕೇಳಿದೊಡನೆ ಜಮಾವಣೆಗೊಂಡು ಆನೆ ಚಲನವಲನ ಬಗ್ಗೆ ನಿಗಾ ಇರಿಸಿದ್ದಾರೆ.
ಕೋವಿ ಠೇವಣಿ:
ಒಂದೆಡೆ ಚುನಾವಣಾ ನೀತಿ ಸಂಹಿತೆಯ ವಿಧಿ ನಿಯಮಾವಳಿಯಂತೆ ಕೃಷಿ ರಕ್ಷಣೆಗಾಗಿ ನೀಡಲಾದ ಕೋವಿಯನ್ನು ಕೃಷಿಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಬೇಕಾದ ಅನಿವಾರ್ಯತೆ ಇದ್ದು, ಬಹುತೇಕ ಮಂದಿ ಠೇವಣಿ ಇರಿಸಿದ್ದಾರೆ. ಇದೇ ಸಂದರ್ಭವನ್ನು ಕಳ್ಳರು ದರೋಡೆಕೋರರು ದುರ್ಬಳಕೆ ಮಾಡಿಕೊಂಡಿರುವ ಘಟನಾವಳಿಗಳು ಈ ಹಿಂದೆ ನಡೆದಿದ್ದು, ಇದೀಗ ಕಾಡು ಪ್ರಾಣಿಗಳೂ ಕೂಡಾ ಕೋವಿಗಳಿಲ್ಲದ ಸಂದರ್ಭದಲ್ಲಿ ಜನವಸತಿ ಪ್ರದೇಶಗಳಿಗೆ ಲಗ್ಗೆ ಇರಿಸುತ್ತಿರುವುದು ಕೃಷಿಕರನ್ನು ಕಂಗೆಡಿಸುವಂತೆ ಮಾಡಿದೆ.
ಈ ಮಧ್ಯೆ ಸಮಾಜಘಾತಕ ಚಟುವಟಿಕೆಯ ಹಿನ್ನೆಲೆ ಹೊಂದಿಲ್ಲದ ಕೋವಿ ಪರವಾನಿಗೆದಾರರಿಗೆ ಕೋವಿಯನ್ನು ಚುನಾವಣೆಯ ಸಮಯದಲ್ಲೂ ಹೊಂದಲು ಅವಕಾಶ ನೀಡಬೇಕೆಂದು ಕೃಷಿಕ ಚಾಲಚಂದ್ರ ಗೌಡ ಅಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.