ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗ್ಯದ್ಲಘಟ್ಟದ ಮಹಿಳೆ ಬೋರಮ್ಮ (೪೦) ಮೃತ ದುರ್ದೈವಿ. ಭಾನುವಾರ ಎಂದಿನಂತೆ ಬೆಳಿಗ್ಗೆ ನಾಗೇಶ್ ಗೌಡ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರನೆ ಕಾಡಾನೆಯೊಂದು ಮಹಿಳೆಯನ್ನು ತುಳಿದು ಸಾಯಿಸಿದ್ದು, ಸಹ ಕಾರ್ಮಿಕ ಮೇಸ್ತ್ರಿ ನಾಗರಾಜ್ ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಶ ಪಾರಾಗಿದ್ದಾರೆ.
ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ:ಮಹಿಳೆಯ ಶವವನ್ನು ಘಟನಾ ಸ್ಥಳದಿಂದ ತರುವ ಮಾರ್ಗದ ಕಡಬಗೆರೆಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಕರ್ತರುಅಡ್ದಗಟ್ಟಿದರು. ಬಳಿಕ ಶವವನ್ನು ರಸ್ತೆ ಮಧ್ಯ ಇಟ್ಟು ತಡೆ ಮಾಡಲಾಯಿತು. ಆರಂಭದಲ್ಲಿ ಕಡಿಮೆ ಇದ್ದ ಜನಸಂಖ್ಯೆ ಸಂಜೆ ಏರಿಕೆಯಾಯಿತು.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯಾದರೂ ಎಸ್ಪಿ, ಡಿಸಿ, ಬಾರದೆ ಇದ್ದುದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತು. ಶಾಸಕ ಟಿ.ಡಿ.ರಾಜೇಗೌಡ ಪ್ರಾರಂಭದಲ್ಲಿ ಬಂದು ಸಮಾಧಾನ ಹೇಳಿದರಾದರೂ ಹೋರಾಟಗಾರರು ಅದನ್ನು ಒಪ್ಪದೆ ತಿರಸ್ಕರಿಸಿದರು.ಸಾವಿಗೆ ಅರಣ್ಯ ಇಲಾಖೆ ಹೊಣೆ:
ಆನೆ ಪ್ರವೇಶ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸದೆ ಕೇವಲ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಶಾಸಕರಿಂದಾಗುತ್ತಿದೆ. ಕಾಡಾನೆಗಳಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಜನರಿಗೆ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷಿಸುತ್ತಿದೆ. ಸತ್ತ ಬಳಿಕ ಪರಿಹಾರದ ಚೆಕ್ ನೀಡಿ ಕೈ ತೊಳೆದುಕೊಳ್ಳುವ ಪರಿಪಾಠ ಮುಂದುವರೆದಿದೆ. ಭಾನುವಾರ ರಜೆ ದಿನವಾಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತೋಟದ ಮಾಲೀಕರಿಗೆ ಆನೆಗಳ ಇರುವಿಕೆಯ ಬಗ್ಗೆ ತಪ್ಪು ಮಾಹಿತಿ ನೀಡಿರುವುದೇ ಮಹಿಳೆ ಸಾವಿಗೆ ಕಾರಣವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.ಸಾವಾದ ತಕ್ಷಣ ಕಾಡಾನೆ ಸೆರೆ!:
ಈಗಾಗಲೇ ಕಾಡುಕೋಣ, ಕಾಡಾನೆ ದಾಳಿಯಿಂದ 13 ಜನರ ಬಲಿಯಾಗಿದೆ. ಮೃತ ಮಹಿಳೆಗೆ 50 ಲಕ್ಷ ರೂ ಪರಿಹಾರ ನಿಡುವುದರ ಜತೆಗೆ ಮುಂದೆ ಇಂಥಹಾ ಸಮಸ್ಯೆ ಮರುಕಳಿಸದಂತೆ ಸರಕಾರ ಮುಂಜಾಗರೂಕತಾ ಕ್ರಮ ಅನುಸರಿಸದೆ ಇದ್ದುದು ಈ ಘಟನೆಗೆ ಮುಖ್ಯ ಕಾರಣವಾಗಿದೆ. ಇದಕ್ಕೆ ಶಾಸಕ ಟಿ.ಡಿ.ರಾಜೇಗೌಡರೇ ನೇರ ಹೊಣೆಗಾರರಾಗಿದ್ದಾರೆ. ಇದೊಂದು ಅರಣ್ಯ ಇಲಾಖೆಯ ಮಾಡಿದ ಕೊಲೆ ಎನ್ನಬಹುದು. ಬೆಳಗ್ಗೆ ಎಂಟುವರೆಗೆ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಒಂಭತ್ತುವರೆಗೆ ಪುರ, ಬೆರಣಗೋಡಿನಲ್ಲಿ ಕಾಡಾನೆ ಸೆರೆಯಾದದ್ದು ಹೇಗೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಪ್ರಶ್ನಿಸಿದರು.ಪುತ್ರನಿಗೆ ಸರ್ಕಾರಿ ಕೆಲಸ ಕೊಡಿಸಿ:
ದೇಹ ದಂಡಿಸಿ ದುಡಿದು ಜೀವನ ನಿರ್ವಹಿಸುವ ಅಮಾಯಕ ಕಾರ್ಮಿಕ ಮಹಿಳೆ ಸಾವು ದುರದೃಷ್ಟಕರವಾಗಿದೆ. ಸರಕಾರವು ಅವರ ಕುಟುಂಬಕ್ಕೆ ೫೦ ಲಕ್ಷ ರೂ ಪರಿಹಾರ ಕೊಡುವುದರ ಜತೆಗೆ ಅವರ ಪುತ್ರನಿಗೆ ಸರಕಾರಿ ಉಧ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ಸಂಚಾರಕ್ಕೆ ಸಂಚಕಾರ
ಬೆಳಿಗ್ಗೆ 9 ಗಂಟೆಯಿಂದಲೇ ಕಡಬಗೆರೆಯಲ್ಲಿ ರಸ್ತೆತಡೆ ಮಾಡಿದ್ದರಿಂದ ಚಿಕ್ಕಮಗಳೂರು, ಶೃಂಗೇರಿ ಮಾರ್ಗದ ನೂರಾರು ಬಸ್ ಗಳು ಸಾಲಾಗಿ ಸಂಜೆವರೆಗೆ ನಿಂತಿದ್ದು, ಪ್ರಯಾಣಿಕರು ಪ್ರತಿಭಟನೆಯ ಪ್ರೇಕ್ಷಕರಾದರು. ಸಂಚಾರ ಅಸ್ತವ್ಯಸ್ತವಾದ್ದರಿಂದ ಪ್ರಯಾಣಿಕರು ದಿನವಿಡೀ ಪರದಾಡಿದರು.ಆಶಿಕ್ ಬಂಧನ, ಬಿಡುಗಡೆ?:
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಶಿಕ್ ಎಂಬ ಯುವಕ ಟೈರ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ ಎಎಸ್ಪಿ ಜಯಕುಮಾರ್ ತಂಡ ಆತನನ್ನು ಎಳೆದುಕೊಂಡು ಹೋಗಿ ಪೊಲೀಸ್ ವಾಹನದೊಳಗಿರಿಸಿದರು. ಮಧ್ಯ ಪ್ರವೇಶಿಸಿದ ಖಾಂಡ್ಯ ಪ್ರವೀಣ್ ಮತ್ತಿತರರು, ಪೊಲೀಸರ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಬಿಗಿ ಪಟ್ಟು ಹಿಡಿದ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಶಾಸಕರು ಆತನನ್ನು ಬಿಡುಗಡೆಗೊಳಿಸಿದ್ದೇನೆ ಎನ್ನುವ ನಾಟಕೀಯ ಸನ್ನಿವೇಶ ಸೃಷ್ಟಿಯಾಯಿತು.ಸೂತಕದ ಮನೆಯಲ್ಲಿ ಸಂಭ್ರಮಾಚರಣೆ?:
ಒಂದೆಡೆ ಮಹಿಳೆಯ ಶವವಿಟ್ಟು ಸೂತಕದ ವಾತಾವರಣದಲ್ಲಿಜನ ಕಡಬಗೆರೆಯಲ್ಲಿ ಪ್ರತಿಭಟಿಸುತ್ತಿದ್ದರೆ ಪುರ, ಹ್ಯಾರಂಬಿಯಲ್ಲಿ ಹಿಡಿದ ಕಾಡಾನೆ ಹಾಗೂ ಸಿಬ್ಬಂದಿ, ಅಧಿಕಾರಿಗಳ ಜತೆಗೆ ಶಾಸಕರು ಸಂಭ್ರಮಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.ಅನುಮಾನ ಮೂಡಿಸಿದ ಮುರಿದ ದಂತ:
ವ್ಯಕ್ತಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಕಾಡಾನೆ ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ತಪ್ಪಿಸಿಕೊಂಡಿತ್ತು. ಅದಕ್ಕೆ ಎರಡೂ ಉದ್ದದ ದಂತಗಳಿದ್ದವು ಎನ್ನಲಾಗುತ್ತಿದ್ದು, ಭಾನುವಾರ ಸೆರೆ ಹಿಡಿದ ಕಾಡಾನೆಯ ದಂತಗಳನ್ನು ತುದಿ ತುಂಡರಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಯಿತು.ಲಾಟಿ ಚಾರ್ಜ್, ಪ್ರತಿಭಟನಾಕಾರರ ಬಂಧನ:
ಸಂಜೆ ಹೊತ್ತಿಗೆ ಎಸ್ಪಿ, ಡಿಸಿ, ಡಿಎಫ್ಒ ಬಂದು ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದು, ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು, ಮಹಿಳೆಗೆ 50 ಲಕ್ಷ ರು. ಪರಿಹಾರ, ಸರ್ಕಾರಿ ಉಧ್ಯೋಗ ನೀಡಬೇಕು. ಇದು ಈಡೇರದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು. ಯಾವ ಕಾರಣಕ್ಕೂ ಶವ ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.ಮೃತ ಮಹಿಳೆಯ ಊರಾದ ಕೂಡ್ಲಿಗಿ ತಾಲೂಕಿನ ಅನೇಕರು ಆಗಮಿಸಿದ್ದು, ಶವ ಬಿಟ್ಟು ಕೊಡುವಂತೆ ಒತ್ತಾಯಿಸಿದರು. ಆ ಸಮಯದಲ್ಲಿ ತೀವ್ರ ಗೊಂದಲಗಳಾದವು. ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, ಚುನಾವಣೆ ಒತ್ತಡಗಳಿಂದ ಸ್ಥಳಕ್ಕೆ ಬರುವುದು ವಿಳಂಬವಾಗಿದೆ. ಮಹಿಳೆ ಮೃತಪಟ್ಟಿರುವುದು ವಿಷಾದದ ಸಂಗತಿ. ಸಮಸ್ಯೆ ಬಗೆಹರಿಸುವಂತೆ ಸರ್ಕಾರದೊಂದಿಗೆ ಚರ್ಚಿಸುವೆ. ಮಹಿಳೆಯ ಕುಟುಂಬಕ್ಕೆ ಪ್ರತಿ ತಿಂಗಳಿಗೆ ಐದು ಸಾವಿರ ರೂ ಮಾಸಾಶನ ನೀಡಲಾಗುವುದು. ಪರಿಹಾರ ಕಾರ್ಯಗಳ ಬಗ್ಗೆ ಆಯಾ ಜನ ಪ್ರತಿನಿಧಿಗಳಿಗೆ ಅರಿವಿದ್ದು, ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು. ಇದಕ್ಕೊಪ್ಪದ ಪ್ರತಿಭಟನಾಕಾರರು ಪ್ರತಿಭಟನೆ ತೀವ್ರಗೊಳಿಸಿದರು.
ಕೊನೆಗೆ ಪೊಲೀಸರು ಜನರನ್ನು ಚದುರಿಸಿ ಶವವೆತ್ತಲು ಮುಂದಾದರು. ಆ ಸಮಯದಲ್ಲಿ ಹೋರಾಟಗಾರರು ಪೊಲೀಸ್ ವಾಹನ ತಡೆಯಲು ಮುಂದಾದಾಗ, ಲಾಟಿ ಚಾರ್ಜ್ ಮಾಡಿದರು. ಆ ಸಮಯದಲ್ಲಿ ಕೆಲವರು ಕಟ್ಟಡದಿಂದ ಕಲ್ಲು ತೂರಿದ ಘಟನೆಯೂ ನಡೆಯಿತು. ಮಹಿಳೆ ಸೇರಿದಂತೆ ಇಬ್ಬರಿಗೆ ಗಾಯಗಳಾದವು. ಪೊಲೀಸರು ಪ್ರತಿಭಟನಾಕಾರರನ್ನು ಹುಡುಕಿ ಹುಡುಕಿ ಎಳೆದು ತಂದು ಜೀಪಿನೊಳಗೆ ತುಂಬಿಸಿದರು. ಡಿ.ಎನ್.ಜೀವರಾಜ್, ಸುಧಾಕರ ಶೆಟ್ಟಿ, ಕೊಪ್ಪ ತಾಲೂಕು ಯುವ ರೈತ ಮೋರ್ಚಾ ಅಧ್ಯಕ್ಷ ಎ.ಸಿ.ಸಂತೋಷ್ ಅರನೂರು ಸೇರಿ 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಾಳೆಹೊನ್ನೂರು ಠಾಣೆಗೆ ಕರೆದೊಯ್ದರು.ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ, ರಂಜಿತ್ ಶೃಂಗೇರಿ, ಹೊಸಳ್ಳಿ ಅಭಿಷೇಕ್, ಸಂದೀಪ್, ಚಂದ್ರಶೇಖರ ರೈ, ಬಿಜೆಪಿ ನ.ರಾ.ಪುರ ಮಾಜಿ ಅಧ್ಯಕ್ಷ ಅರುಣ್ ಮತ್ತಿತರರು ಪಾಲ್ಗೊಂಡಿದ್ದರು.
ಇಂದು ಶೃಂಗೇರಿ ಕ್ಷೇತ್ರ ಬಂದ್ಆನೆ ದಾಳಿಯಿಂದ ಸಾವನ್ನಪ್ಪಿರುವ ವ್ಯಕ್ತಿಯ ಹಾಗೂ ಮಲೆನಾಡಿನ ಪರವಾಗಿ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಿರುವ ರೈತರು ಹಾಗೂ ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಹಾಗೂ ಹೋರಾಟಗಾರರನ್ನು ಬಂಧಿಸಿರುವ ಕ್ರಮ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಸೋಮವಾರ ಶೃಂಗೇರಿ ಕ್ಷೇತ್ರ ಬಂದ್ಗೆ ಕರೆ ನೀಡಿದೆ. ಕ್ಷೇತ್ರದ ಎಲ್ಲಾ ರೈತರು ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲಿಸಿ, ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಜನಪರ, ರೈತಪರವಾಗಿ ನಿಲ್ಲಬೇಕು ಎಂದು ಸಮಿತಿ ಕೋರಿದೆ. ಸೋಮವಾರ ಬಾಳೆಹೊನ್ನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಿದೆ.