ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಕಾರ್ಮಿಕ ಮಹಿಳೆ ಪಾರು

KannadaprabhaNewsNetwork |  
Published : Jun 26, 2026, 03:00 AM IST
ಮಹಿಳೆ | Kannada Prabha

ಸಾರಾಂಶ

ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ಮೇಲೆ ಒಂಟಿ ಸಲಗವೊಂದು ಏಕಾಏಕಿ ದಾಳಿಗೆ ಮುಂದಾಗಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ನಡೆದಿದೆ.

ಮಡಿಕೇರಿ: ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ಮೇಲೆ ಒಂಟಿ ಸಲಗವೊಂದು ಏಕಾಏಕಿ ದಾಳಿಗೆ ಮುಂದಾಗಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ನಡೆದಿದೆ.

ಎಂದಿನಂತೆ ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭ ಪ್ರತ್ಯಕ್ಷವಾದ ಆನೆಯೊಂದು ಕಾರ್ಮಿಕರನ್ನು ಅಟ್ಟಾಡಿಸಿದೆ. ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಎದ್ದುಬಿದ್ದು ಓಡಿದ್ದು, ಗಿಡಗಳ ನಡುವೆ ಓಡುವ ಸಂದರ್ಭ ಮಹಿಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಮಹಿಳೆಯ ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳೀಯ ನಿವಾಸಿ ನಾಗರಾಜು ಎಂಬುವವರ ಪತ್ನಿ ಸೌಮ್ಯ ಗಾಯಗೊಂಡಿರುವ ಮಹಿಳೆ. ಗಾಯಾಳುವನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆಯಿಂದ ಸುತ್ತಮುತ್ತಲ ಪ್ರದೇಶದ ಕಾರ್ಮಿಕರಲ್ಲಿ ಭೀತಿ ಹೆಚ್ಚಾಗಿದ್ದು , ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಕೂಡ ಕಾವೇರಿ ನದಿ ದಾಟಿ 20 ಕ್ಕೂ ಅಧಿಕ ಆನೆಗಳು ಪಳ್ಳಕೆರೆ ವ್ಯಾಪ್ತಿಗೆ ಬಂದಿವೆ. ಆನೆಗಳು ಬಂದಾಗ ಕಾರ್ಯಾಚರಣೆ ಮಾಡುತ್ತೇವೆ ಎಂದು ಬರುವ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಅರಣ್ಯಕ್ಕೆ ಅಟ್ಟದೆ ಬೇರೊಂದು ಕಾಡಿಗೆ (ತೋಟಕ್ಕೆ) ತಾತ್ಕಾಲಿಕವಾಗಿ ಅಟ್ಟುವ ಮೂಲಕ ಯಶಸ್ವಿ ಕಾರ್ಯಾಚರಣೆ ಆಗಿದೆ ಎಂದು ಹೇಳಿ ತೆರಳುತ್ತಾರೆ ಎಂದು ಆರೋಪಿಸಿದ್ದಾರೆ.ಇದರಿಂದಾಗಿ ಬೇರೆ ತೋಟದಲ್ಲಿ ಬೀಡುಬಿಟ್ಟಿದ ಆನೆಗಳ ಹಿಂಡು ಮತ್ತೆ ಹಿಂತಿರುಗಿ ಇದೆ ಕಡೆ ವಾಪಸಾಗುತ್ತಿವೆ. ಇದು ಕೇವಲ ಇಲ್ಲಿ ಮಾತ್ರವಲ್ಲ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದೆ ಪರಿಸ್ಥಿತಿಯಿದೆ. ಈ ಸಮಸ್ಯೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಸಚಿವರು, ಸ್ಥಳೀಯ ಶಾಸಕರು ಗಂಭೀರವಾಗಿ ಪರಿಗಣಿಸಿ, ಭಾರಿ ಅನಾಹುತ, ಮತ್ತೊಂದು ಪ್ರಾಣಹಾನಿ ಸಂಭವಿಸುವ ಮೊದಲು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಬಿಎಚ್‌ಐಎಂ ಘಟಕ ಉದ್ಘಾಟನೆ
ಕುಶಾಲನಗರ: ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಪ್ರಗತಿ ಪರಿಶೀಲನೆ