ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಕುರುಬರಹುಂಡಿ ಬಳಿ ರೈತರ ಜಮೀನುಗಳಿಗೆ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿದ್ದನ್ನು ಖಂಡಿಸಿ ಗುಂಡ್ಲುಪೇಟೆ ಎಸಿಎಫ್, ಡಿಆರ್ಎಫ್ಒಗೆ ರೈತರು ದಿಗ್ಬಂದನ ವಿಧಿಸಿದ ಘಟನೆ ಬುಧವಾರ ನಡೆದಿದೆ. ಗ್ರಾಮದ ರೈತರ ಜಮೀನಿಗೆ ಇತ್ತೀಚೆಗೆ ಕಾಡಾನೆ ದಾಳಿ ಮಾಡಿ ಜಮೀನಿನ ಗುಡಿಸಲು ಹಾಗೂ ಬೈಕ್ನನ್ನು ಜಖಂ ಗೊಳಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಓಂಕಾರ ವಲಯ ಉಪ ಅರಣ್ಯಾಧಿಕಾರಿ ಶಶಿಕುಮಾರ್ ಅವರನ್ನು ರೈತರು ದಿಗ್ಬಂಧನ ಹಾಕಿದರು.ಬಳಿಕ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಆಗಮಿಸಿದಾಗ ರೈತರು ಧಿಕ್ಕಾರದ ಘೋಷಣೆ ಕೂಗಿದ ರೈತರಿಗೆ ಕಂಠಕವಾಗಿರುವ ಒಂಟಿಯಾನೆ ಸೆರೆ ಹಿಡಿಯಬೇಕು. ಸೋಲಾರ್ ಸರಿಪಡಿಸಬೇಕು, ಕಂದಕ ಹೂಳೆತ್ತಬೇಕು. ಡಿಆರ್ಎಫ್ ಒ ಶಶಿಕುಮಾರ್ ಬದಲಿಸಬೇಕು ಎಂದು ಆಗ್ರಹಿಸಿ,ಸ್ಥಳಕ್ಕೆ ಬಂಡೀಪುರ ಸಿಎಫ್ ಬರಬೇಕು ಎಂದು ರೈತರು ಕೂಗಾಡಿದರು.
ಪ್ರತಿಭಟನಾಕಾರರ ಜೊತೆ ಎಸಿಎಫ್ ಸುರೇಶ್ ಮಾತನಾಡಿ, ರೈತರ ಭರವಸೆಯಾದ ಕಂದಕ ಹೂಳೆತ್ತುವುದು, ಸೋಲಾರ್ ದುರಸ್ತಿ, ಕಾಡಾನೆ ಬರದಂತೆ ಕಾವಲಿಗೆ ನೇಮಿಸುವುದು ಹಾಗೂ ಒಂಟಿ ಆನೆ ಸೆರೆ ಹಿಡಿಯುವ ಭರವಸೆ ನೀಡಿದಾಗ ರೈತರು ಡಿಆರ್ಎಫ್ಒ ಶಶಿಕುಮಾರ್ ಬದಲಾಗಬೇಕು ಎಂದು ಪಟ್ಟು ಹಿಡಿದರು. ಎಸಿಎಫ್ ಸುರೇಶ್ ಮಾತನಾಡಿ, ಡಿಆರ್ಎಫ್ಒ ಬದಲಿಸಲು ಅಧಿಕಾರ ನನಗೆ ಇಲ್ಲ, ಅರಣ್ಯ ಸಂರಕ್ಷಣಾಧಿಕಾರಿ ಜೊತೆ ಮಾತನಾಡಿ ಡಿಆರ್ಎಫ್ ಒ ಬದಲಿಸಲು ಕ್ರಮ ವಹಿಸುವೆ ಕೆಲ ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು.ಅದು ಸಾಧ್ಯವಿಲ್ಲ, ನಿಮ್ಮ ಭರವಸೆ ಬೇಡ, ಸಿಎಫ್ ಕರೆಯಿಸಿ ಎಂದು ಪಟ್ಟು ಹಿಡಿದು ಎಸಿಎಫ್ ಜೀಪ್ ಮುಂದೆ ರೈತರು ಅಡ್ಡಲಾಗಿ ಧರಣಿ ನಡೆಸಿ ಧಿಕ್ಕಾರದ ಘೋಷಣೆ ಮೊಳಗಿಸಿದರು.
ಆ ಸಮಯಕ್ಕೆ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ ಕೋತಿಗಳ ಮಾರಣ ಹೋಮವಾಗಿದೆ. ಕೋತಿಗಳ ಶವ ಬಿದ್ದ ಸ್ಥಳ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ಎಸಿಎಫ್ ಸುರೇಶ್ ಹೇಳಿದಾಗ ನೀವು ಹೋಗಿ, ಜೀಪು ಇಲ್ಲೇ ಇರಲಿ ಎಂದು ಧರಣಿ ಮುಂದುವರಿಸಿದರು.ಕೆ.ಪಿ.ಕುಮಾರ್,ಕೆ.ಎಂ.ಮಹದೇವಸ್ವಾಮಿ,ಕೆ.ಪಿ.ಶಿವರಾಜು,ಪ್ರದೀಪ್,ಸತೀಶ್,ಕೆ.ಜಿ.ಮಹೇಶ್,ಈಶ್ವರ,ಮಹೇಶ್,ಹಂಚೀಪುರ ಕೆಂಪಣ್ಣ,ಮಂಚಹಳ್ಳಿ ಹರೀಶ್,ಪ್ರಕಾಶ್ ಇದ್ದರು.
>< ೨ಜಿಪಿಟಿ೬ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿ ಬಳಿ ಎಸಿಎಫ್ ಸುರೇಶ್ ಅಡ್ಡಗಟ್ಟಿ ರೈತರು ದಿಗ್ಬಂಧನ ಹಾಕಿದರು.