ಕಡಹಿನಬೈಲು ಗ್ರಾಮದ ಜೇನುಕಟ್ಟೆ ಸರ ಭಾಗದಲ್ಲಿ ಕಾಡಾನೆಗಳು ಪ್ರತ್ಯಕ್ಷ

KannadaprabhaNewsNetwork | Published : Jan 8, 2025 12:17 AM

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಕಡಹಿನಬೈಲು ಗ್ರಾಮದ ಜೇನುಕಟ್ಟೆಸರ, ಭೀಮನರಿ, ಚೆನ್ನಮಣಿ ಭಾಗದಲ್ಲಿ ಮಂಗಳವಾರ 5 ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

- ಗ್ರಾಮಸ್ಥರಿಗೆ ಭೀತಿ । ಅರಣ್ಯ ಇಲಾಖೆ, ಎಲಿಫಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿ ಕಾರ್ಯಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಕಡಹಿನಬೈಲು ಗ್ರಾಮದ ಜೇನುಕಟ್ಟೆಸರ, ಭೀಮನರಿ, ಚೆನ್ನಮಣಿ ಭಾಗದಲ್ಲಿ ಮಂಗಳವಾರ 5 ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಶೆಟ್ಟಿಕೊಪ್ಪದಿಂದ 2 ಕಿ.ಮೀ. ದೂರದಲ್ಲಿರುವ ಜೇನು ಕಟ್ಟೆಸರ, ಭೀಮನರಿ, ಚೆನ್ನಮಣೆಯು ಆರಂಬಳ್ಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡೇ ಇದ್ದು ಜೇನುಕಟ್ಟೆ ಸರದಲ್ಲಿ 12 ಎಕರೆ ಜಾಗದಲ್ಲಿ ದೊಡ್ಡ ಕೆರೆ ಇದೆ. ಆರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿ ಕೊಂಡಿರುವ 4 ಕಾಡಾನೆ ಹಾಗೂ 1 ಮರಿ ಆನೆ ಸೇರಿ ಒಟ್ಟು 5 ಕಾಡಾನೆಗಳು ಹಗಲು ಹೊತ್ತಿನಲ್ಲಿ ಮೀಸಲು ಅರಣ್ಯಕ್ಕೆ ಸೇರಿಕೊಳ್ಳುತ್ತಿದೆ. ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ಜೇನುಕಟ್ಟೆ ಕೆರೆಗೆ ಬಂದು ನೀರು ಕುಡಿದು ಹೋಗುತ್ತಿದೆ.

ಅಲ್ಲದೆ ಭದ್ರಾ ಮುಳುಗಡೆ ಪ್ರದೇಶದ ಕೆಲವು ರೈತರಿಗೆ ಈ ಭಾಗದಲ್ಲಿ ಜಮೀನು ನೀಡಿದ್ದು ಅವರು ಅಲ್ಲಿ ಮಾಡಿರುವ ಬಾಳೆ ತೋಟಕ್ಕೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಕಳೆದ 2- 3 ದಿನಗಳಿಂದಲೂ ಈ ಭಾಗದಲ್ಲಿ ಕಾಡಾನೆಗಳು ಓಡಾಟ ಮಾಡುತ್ತಿದ್ದು ಮಂಗಳವಾರ ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನೆ ಶೆಟ್ಟಿಕೊಪ್ಪ- ಮಾಕೋಡು ರಸ್ತೆಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದೆ. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಸಬಾ ಶಾಖೆ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಅರಣ್ಯ ರಕ್ಷಕ ಮಂಜಯ್ಯ ಹಾಗೂ ಮೂಡಿಗೆರೆ ಎಲಿಫಂಟ್ ಟಾಸ್ಕ್ ಪೋರ್ಸನ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಆನೆಗಳನ್ನು ಆರಂಬಳ್ಳಿ ಮೀಸಲು ಅರಣ್ಯಕ್ಕೆ ಅಟ್ಟಿದ್ದಾರೆ. ಸಂಜೆಯ ನಂತರ ಗ್ರಾಮಸ್ಥರ ರಸ್ತೆಯಲ್ಲಿ ಓಡಾಡದಂತೆ ಅರಣ್ಯ ಇಲಾಖೆಯವರು ಎಚ್ಚರಿಕೆ ನೀಡಿದ್ದಾರೆ.

Share this article