ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಳಕೇರಿ ಗ್ರಾಮದ ಕೋಟೇರಿಯ ಕಾಫಿ ತೋಟಗಳಲ್ಲಿ ಶುಕ್ರವಾರ ರಾತ್ರಿ ಅಡ್ಡಾಡಿದ ಕಾಡಾನೆ ಇಲ್ಲಿಯ ಅಪ್ಪಾರಂಡ ಸುಧೀರ್ ಅಪ್ಪಯ್ಯ ಅವರ ಕಾಫಿ ತೋಟಗಳಲ್ಲಿದ್ದ ತೆಂಗು, ಬಾಳೆ, ಅಡಕೆ, ಕಾಫಿ ನಾಶಪಡಿಸಿದೆ. ಕಬ್ಬಿಣದ ಗೇಟನ್ನು ಮುರಿದು ಹಾಕಿ ನಷ್ಟಪಡಿಸಿದೆ.
ಇದೇ ರೀತಿ ಇಲ್ಲಿಯ ಅಪ್ಪಾರಂಡ ಅಪ್ಪಯ್ಯ ಹಾಗೂ ಸಮೀಪದ ಇನ್ನಿತರ ತೋಟಕ್ಕೂ ದಾಳಿ ಮಾಡಿ ನಷ್ಟ ಸಂಭವಿಸಿದ್ದು ಕಾಡಾನೆ ಆಸು ಪಾಸಿನಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.ಚೇಲಾವರ, ಕಕ್ಕಬೆ ಬೆಟ್ಟ ಸಾಲಿನಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳು ಇದೀಗ ನಾಡಿಗೆ ಲಗ್ಗೆ ಇಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಇದೀಗ ಕಾಫಿ ಕೊಯ್ಲು ಮುಗಿಯುವ ಹಂತ ತಲುಪಿದ್ದು ತೋಟಗಳಿಗೆ ನೀರು ಹಾಯಿಸುವ ಕೆಲಸಕ್ಕೆ ಬೆಳೆಗಾರರು ಮುಂದಾಗಿದ್ದು ಕಾಡಾನೆ ತೋಟಗಳಲ್ಲಿ ಸುತ್ತಾಡುತ್ತಿರುವುದರಿಂದಾಗಿ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಬೆಳೆಗಾರರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದ್ದು ಗ್ರಾಮಸ್ಥರು ಎಚ್ಚರಿಕೆಯಲ್ಲಿರುವಂತೆ ಮನವಿ ಮಾಡಿಕೊಂಡಿದ್ದಾರೆ.