ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರುನಾಡ ವಿಜಯಸೇನೆಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಮರಣ ಶಾಸನ, ರಾಜಕಾರಣಿಗಳಲ್ಲಿನ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ಅಸಡ್ಡೆಯಿಂದ ಕನ್ನಡ ಸೊರಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕೆಂದು ಅನೇಕ ಹೋರಾಟಗಾರರು ಚಿಂತಕರು, ಸಾಹಿತಿಗಳು ಹಿಂದಿನಿಂದಲೂ ಚಳುವಳಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೂ ಕನ್ನಡ ಪೂರ್ಣ ಪ್ರಮಾಣದಲ್ಲಿ ಆಡಳಿತ ಭಾಷೆಯಾಗಿಲ್ಲ. ಇಂಗ್ಲಿಷ್ನಲ್ಲಿ ಷರಾ ಬರೆಯುವುದು ಇನ್ನು ನಿಂತಿಲ್ಲ. ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯನ್ನು ಬಳಸಲು ಏನು ಕಷ್ಟ. ದೊಡ್ಡ ದೊಡ್ಡ ದೇಶಗಳಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಅದು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಕನ್ನಡ ಭಾಷೆಗೆ ಸುಪ್ರೀಂಕೋರ್ಟ್ ಅಡ್ಡ ಬಂದಿದೆ. ಬೆಂಗಳೂರಿನಲ್ಲಿ ಮೆಟ್ರೋ ಉದ್ಘಾಟನೆಯಲ್ಲಿ ಹಿಂದಿಯನ್ನು ಬಳಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಕನ್ನಡಪರ ಸಂಘಟನೆಗಳು ಉಗ್ರ ಹೋರಾಟ ಮಾಡಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಕನ್ನಡದ ಮೇಲೆ ಹೇರಲಾಗುತ್ತಿದೆ. ಹೋರಾಟಗಾರರ ಮೇಲೆ ನೂರಾರು ಕೇಸುಗಳು ಬಿದ್ದಿವೆ. ಶ್ರೀಮಂತ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಆಗ್ರಹಿಸಿದರು.ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು, ಆಸ್ಪತ್ರೆಗಳಲ್ಲಿ ಶೇ.60ರಷ್ಟು ಕನ್ನಡ ನಾಮ ಫಲಕವಿರಬೇಕೆಂದು ಸರ್ಕಾರ ಆದೇಶಿಸಿದ್ದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾಕಷ್ಟು ಹೋರಾಟ ಮಾಡಿ ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿದು ಬೋರ್ಡ್ಗಳನ್ನು ಕಿತ್ತು ಹಾಕಿದ್ದೇವೆ. ನಮ್ಮ ಪ್ರಾಣ ಹೋದರು ಸರಿ ಹೋರಾಟದಿಂದ ಮಾತ್ರ ಹಿಂದೆ ಸರಿಯುವುದಿಲ್ಲ. ನಗರಸಭೆಯವರು ಟ್ರೇಡ್ ಲೈಸೆನ್ಸ್ ಕೊಡುವಾಗ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಬೇಕೆಂದು ಸೂಚಿಸಬೇಕು. ಇನ್ನು ಎರಡು ತಿಂಗಳು ಗಡುವು ನೀಡುತ್ತೇವೆ. ಇಂಗ್ಲಿಷ್ ಮಯವಾಗಲು ಬಿಡಲ್ಲ. ಎಲ್ಲಾದರೂ ಆಂಗ್ಲ ನಾಮ ಫಲಕಗಳು ಕಂಡು ಬಂದರೆ ಮಸಿ ಬಳಿಯುವುದಾಗಿ ಎಚ್ಚರಿಸಿದರು.
ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿ ಸರ್ಕಾರದಿಂದಲೇ ಗೈಡ್ಗಳ ನೇಮಕವಾಗಬೇಕು. ಇದರಿಂದ ಹೊರಗಿನಿಂದ ಬರುವ ಪ್ರವಾಸಿಗರಿಗೆ ಕೋಟೆಯ ಬಗ್ಗೆ ಮಾಹಿತಿ ನೀಡಲು ಸುಲಭವಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಹೋರಾಟಗಾರರನ್ನು ತಿರಸ್ಕರಿಸಬಾರದು ಎಂದರು.