ಮಂಗೋಲಿಯಾದಿಂದ ಬಂದ ಚಳಿಗಾಲದ ಅತಿಥಿಗಳು

KannadaprabhaNewsNetwork |  
Published : Jan 02, 2025, 12:30 AM IST
ಮಂಗೋಲಿಯಾದಿಂದ ಮಾಲವಿಗೆ ಬಂದ ಚಳಿಗಾಲದ ಅತಿಥಿಗಳಿಂದ ಮಾಲವಿ ಜಲಾಶಯದ ಸೌಂದರ್ಯ ಹೆಚ್ಚಿದೆ.   | Kannada Prabha

ಸಾರಾಂಶ

ಮಾಲವಿ, ಚಿಮ್ಮನಹಳ್ಳಿಯ ಬಳಿ ಮಾಲವಿ ಡ್ಯಾಂ ಹಿನ್ನೀರಿಗೆ ಸಾವಿರಕ್ಕೂ ಹೆಚ್ಚು ಗೀರು ತಲೆಯ ಹೆಬ್ಬಾತುಗಳು ಬರುತ್ತವೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಪರ್ವತದ ಹಕ್ಕಿ, ತಾಡಿಗ್ಯಾ, ಪಟ್ಟೆತಲೆಯ ಹೆಬ್ಬಾತು, ಗೀರು ತಲೆಯ ಬಾತು... ಹೀಗೆ ಹಲವು ಹೆಸರುಗಳಿಂದ ಕರೆಯುವ ವಿಶ್ವದಲ್ಲೇ ಅತ್ಯಂತ ಎತ್ತರದಲ್ಲಿ ಹಾರುವ ಹಕ್ಕಿಗಳು ಇದೀಗ ಮಂಗೋಲಿಯಾದಿಂದ ಇಲ್ಲಿಯ ಮಾಲವಿ ಕಿರು ಜಲಾಶಯಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದಿವೆ.

ಪ್ರತಿವರ್ಷ ಚಳಿಗಾಲದಲ್ಲಿ ಮಂಗೋಲಿಯಾದಿಂದ ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿ ಬೇಟೆಗಾರರು, ಪ್ರಾಕೃತಿಕ ವಿಕೋಪಗಳನ್ನೆಲ್ಲವನ್ನು ದಾಟಿಕೊಂಡು ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಕೊಟ್ಟೂರು ತಾಲೂಕಿನ ಕೆರೆಗಳು ಸೇರಿದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ, ಚಿಮ್ಮನಹಳ್ಳಿಯ ಬಳಿ ಮಾಲವಿ ಡ್ಯಾಂ ಹಿನ್ನೀರಿಗೆ ಸಾವಿರಕ್ಕೂ ಹೆಚ್ಚು ಗೀರು ತಲೆಯ ಹೆಬ್ಬಾತುಗಳು ಬರುತ್ತವೆ.

ಚಳಿಗಾಲದಲ್ಲಿ ಮಾಲವಿ ಜಲಾಶಯ ನೋಡಲು ಬರುವವರಿಗೆ ಮಂಗೋಲಿಯದ ಅತಿಥಿಗಳನ್ನು ನೋಡುವ ಅವಕಾಶ ಸಿಗುತ್ತದೆ. ಸೂರ್ಯೋದಯಕ್ಕೂ ಮುಂಚಿತವಾಗಿ ಹೊಲಗದ್ದೆಗಳಲ್ಲಿ ತನ್ನ ಆಹಾರವನ್ನು ಸೇವಿಸುತ್ತವೆ. ನಂತರ ಬೆಳಿಗ್ಗೆ 8ಕ್ಕೆ ಮಾಲವಿ ಜಲಾಶಯ ಸೇರಿದಂತೆ ಸುತ್ತಮುತ್ತಲಿನ ಕೆರೆ, ನದಿ ಹಿನ್ನೀರಿನ ನಡುವೆ ತೇಲುತ್ತಾ ವಿಶ್ರಾಂತಿ ಪಡೆಯುತ್ತವೆ. ನೀರಲ್ಲಿರುವ ಮೀನುಗಳನ್ನು ತಿನ್ನದ ಈ ಹಕ್ಕಿಗಳು ಅಪ್ಪಟ ಸಸ್ಯಹಾರಿಗಳಾಗಿವೆ ಎಂಬುದು ಆಚ್ಚರಿಯ ಸಂಗತಿ.

ಮಾಲವಿ ಜಲಾಶಯದಲ್ಲಿ 2012ರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗೀರು ತಲೆಯ ಹೆಬ್ಬಾತುಗಳು ಬಂದಿದ್ದವು. ಇತ್ತೀಚಿನ ದಿನಗಳಲ್ಲಿ ಎಂತಹ ಮಳೆಗಾಲ ಬಂದರೂ ಮಾಲವಿ ಜಲಾಶಯಕ್ಕೆ ನೀರು ಬಾರದೇ ಯಾವಾಗಲೂ ಒಣಗಿದ ಸ್ಥಿತಿಯಲ್ಲಿ ಇತ್ತು. ಈ ವರ್ಷ ಯಥೇಚ್ಛ ಮಳೆಗಾಲವಾಗಿ ಡ್ಯಾಂ ತುಂಬಿದೆ. ಹೀಗಾಗಿ ಮಂಗೋಲಿಯಾದ ಹೆಬ್ಬಾತುಗಳಿಂದ ಮಾಲವಿ ಡ್ಯಾಂನಲ್ಲಿ ಮನಮೋಹಕ ದೃಶ್ಯ ನೋಡಬಹುದು.

ನಮ್ಮ ಮಾಲವಿ, ಚಿಮ್ಮನಹಳ್ಳಿ ಸೇರಿದಂತೆ ಹತ್ತಾರು ಕಡೆ ಈ ಹಕ್ಕಿಗಳು ಮಂಗೋಲಿಯಾದಿಂದ ಚಳಿಗಾಲಕ್ಕೆ ಬರುತ್ತಿರುವುದು ನೋಡಿದರೆ ನಮಗೆ ಖುುಷಿಯಾಗುತ್ತದೆ. ಇಂತಹ ಹಕ್ಕಿಗಳ ಉಳಿವಿಗೆ ರೈತರು, ಎಲ್ಲರ ಸಹಕಾರ ಅಗತ್ಯವಿದೆ ಎನ್ನುತ್ತಾರೆ ಮಾಲವಿ ರೈತ ಕೊಟ್ರೇಶ್.

ಮಾಲವಿ ಜಲಾಶಯದಲ್ಲಿ ಮೀನುಗಾರಿಕೆ ಟೆಂಡರ್ ಹಿಡಿದವರು ನಿರುಪದ್ರವಿ ಹಕ್ಕಿಗಳನ್ನು ಬೆದರಿಸಿ ಪಟಾಕಿ ಸಿಡಿಸಬಾರದು ಎನ್ನುವುದು ಪರಿಸರಪ್ರಿಯರ ಕಳಕಳಿಯಾಗಿದೆ. ಈ ಹಕ್ಕಿಗಳಿಗೆ ಕಾಲು ಬಲೆಹಾಕಿ ಬೇಟೆಯಾಡುವವರಿಗೇನು ಕಡಿಮೆಯಿಲ್ಲ. ಹೀಗಾಗಿ ಸುಂದರ ಹಕ್ಕಿಗಳು ಯಾವುದೇ ಆತಂಕವಿಲ್ಲದೆ ನಮ್ಮ ನಾಡಿನಿಂದ ಚಳಿಗಾಲ ಕಳೆದು ನಂತರ ಸುರಕ್ಷಿತವಾಗಿ ಪುನಃ ಮಂಗೋಲಿಯಾಕ್ಕೆ ಬೀಳ್ಕೊಡುಗೆ ಮಾಡಲು ರೈತರು ಮೀನುಗಾರರ ಸಹಕರಿಸಬೇಕು ಎನ್ನುತ್ತಾರೆ ಪಕ್ಷಿಪ್ರೇಮಿವಿಜಯ್ ಇಟ್ಟಿಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ