ಭೀಮಣ್ಣ ಗಜಾಪುರ
ಪ್ರತಿವರ್ಷ ಚಳಿಗಾಲದಲ್ಲಿ ಮಂಗೋಲಿಯಾದಿಂದ ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿ ಬೇಟೆಗಾರರು, ಪ್ರಾಕೃತಿಕ ವಿಕೋಪಗಳನ್ನೆಲ್ಲವನ್ನು ದಾಟಿಕೊಂಡು ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಕೊಟ್ಟೂರು ತಾಲೂಕಿನ ಕೆರೆಗಳು ಸೇರಿದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ, ಚಿಮ್ಮನಹಳ್ಳಿಯ ಬಳಿ ಮಾಲವಿ ಡ್ಯಾಂ ಹಿನ್ನೀರಿಗೆ ಸಾವಿರಕ್ಕೂ ಹೆಚ್ಚು ಗೀರು ತಲೆಯ ಹೆಬ್ಬಾತುಗಳು ಬರುತ್ತವೆ.
ಚಳಿಗಾಲದಲ್ಲಿ ಮಾಲವಿ ಜಲಾಶಯ ನೋಡಲು ಬರುವವರಿಗೆ ಮಂಗೋಲಿಯದ ಅತಿಥಿಗಳನ್ನು ನೋಡುವ ಅವಕಾಶ ಸಿಗುತ್ತದೆ. ಸೂರ್ಯೋದಯಕ್ಕೂ ಮುಂಚಿತವಾಗಿ ಹೊಲಗದ್ದೆಗಳಲ್ಲಿ ತನ್ನ ಆಹಾರವನ್ನು ಸೇವಿಸುತ್ತವೆ. ನಂತರ ಬೆಳಿಗ್ಗೆ 8ಕ್ಕೆ ಮಾಲವಿ ಜಲಾಶಯ ಸೇರಿದಂತೆ ಸುತ್ತಮುತ್ತಲಿನ ಕೆರೆ, ನದಿ ಹಿನ್ನೀರಿನ ನಡುವೆ ತೇಲುತ್ತಾ ವಿಶ್ರಾಂತಿ ಪಡೆಯುತ್ತವೆ. ನೀರಲ್ಲಿರುವ ಮೀನುಗಳನ್ನು ತಿನ್ನದ ಈ ಹಕ್ಕಿಗಳು ಅಪ್ಪಟ ಸಸ್ಯಹಾರಿಗಳಾಗಿವೆ ಎಂಬುದು ಆಚ್ಚರಿಯ ಸಂಗತಿ.ಮಾಲವಿ ಜಲಾಶಯದಲ್ಲಿ 2012ರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗೀರು ತಲೆಯ ಹೆಬ್ಬಾತುಗಳು ಬಂದಿದ್ದವು. ಇತ್ತೀಚಿನ ದಿನಗಳಲ್ಲಿ ಎಂತಹ ಮಳೆಗಾಲ ಬಂದರೂ ಮಾಲವಿ ಜಲಾಶಯಕ್ಕೆ ನೀರು ಬಾರದೇ ಯಾವಾಗಲೂ ಒಣಗಿದ ಸ್ಥಿತಿಯಲ್ಲಿ ಇತ್ತು. ಈ ವರ್ಷ ಯಥೇಚ್ಛ ಮಳೆಗಾಲವಾಗಿ ಡ್ಯಾಂ ತುಂಬಿದೆ. ಹೀಗಾಗಿ ಮಂಗೋಲಿಯಾದ ಹೆಬ್ಬಾತುಗಳಿಂದ ಮಾಲವಿ ಡ್ಯಾಂನಲ್ಲಿ ಮನಮೋಹಕ ದೃಶ್ಯ ನೋಡಬಹುದು.
ಮಾಲವಿ ಜಲಾಶಯದಲ್ಲಿ ಮೀನುಗಾರಿಕೆ ಟೆಂಡರ್ ಹಿಡಿದವರು ನಿರುಪದ್ರವಿ ಹಕ್ಕಿಗಳನ್ನು ಬೆದರಿಸಿ ಪಟಾಕಿ ಸಿಡಿಸಬಾರದು ಎನ್ನುವುದು ಪರಿಸರಪ್ರಿಯರ ಕಳಕಳಿಯಾಗಿದೆ. ಈ ಹಕ್ಕಿಗಳಿಗೆ ಕಾಲು ಬಲೆಹಾಕಿ ಬೇಟೆಯಾಡುವವರಿಗೇನು ಕಡಿಮೆಯಿಲ್ಲ. ಹೀಗಾಗಿ ಸುಂದರ ಹಕ್ಕಿಗಳು ಯಾವುದೇ ಆತಂಕವಿಲ್ಲದೆ ನಮ್ಮ ನಾಡಿನಿಂದ ಚಳಿಗಾಲ ಕಳೆದು ನಂತರ ಸುರಕ್ಷಿತವಾಗಿ ಪುನಃ ಮಂಗೋಲಿಯಾಕ್ಕೆ ಬೀಳ್ಕೊಡುಗೆ ಮಾಡಲು ರೈತರು ಮೀನುಗಾರರ ಸಹಕರಿಸಬೇಕು ಎನ್ನುತ್ತಾರೆ ಪಕ್ಷಿಪ್ರೇಮಿವಿಜಯ್ ಇಟ್ಟಿಗಿ.