ಪಕ್ಷದ ಶಾಸಕರ ನಿಯೋಗದ ನೇತೃತ್ವ ವಹಿಸಿದ ಸಂಸದ ಪ್ರಜ್ವಲ್ ರೇವಣ್ಣ ಕನ್ನಡಪ್ರಭ ವಾರ್ತೆ ಅರಸೀಕೆರೆ
ಬೆಂಗಳೂರಿನಿಂದ ಹುಬ್ಬಳ್ಳಿ, ಧಾರವಾಡಕ್ಕೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಅರಸೀಕೆರೆ ನಿಲ್ದಾಣದಲ್ಲಿ ನಿಲುಗಡೆ ಕೊಡಿಸುವ ಸಂಬಂಧ ಜಿಲ್ಲೆಯ ಜೆಡಿಎಸ್ ಶಾಸಕರ ನಿಯೋಗದೊಂದಿಗೆ ಸಂಸದ ಪ್ರಜ್ವಲ್ ರೇವಣ್ಣ ಮಂಗಳವಾರ ಹುಬ್ಬಳ್ಳಿಗೆ ತೆರಳಿದರು.ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಇಲ್ಲಿನ ರೈಲು ನಿಲ್ದಾಣದ ಅಭಿವೃದ್ಧಿಗೆ ಅಂದಾಜು ೩೭ ಕೋಟಿ ರು.ಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಸುಸಜ್ಜಿತ ಪ್ಲಾಟ್ಫಾರ್ಮ್, ಎಸ್ಕುಲೇಟರ್, ಕ್ಯಾಂಟೀನ್, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ಬಗೆಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪ್ರತಿನಿತ್ಯ ನೂರಕ್ಕೂ ಹೆಚ್ಚಿನ ರೈಲುಗಾಡಿಗಳ ಸಂಚಾರವಿದ್ದು ಪ್ರಯಾಣಿಕರ ಹಿತಕಾಯುವುದು ನನ್ನ ಮೊದಲ ಆದ್ಯತೆಯಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿ, ಧಾರವಾಡಕ್ಕೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಅರಸೀಕೆರೆ ನಿಲ್ದಾಣದಲ್ಲಿ ನಿಲುಗಡೆ ಕೊಡಿಸುವ ಸಂಬಂಧ ಜಿಲ್ಲೆಯ ಜೆಡಿಎಸ್ ಶಾಸಕರೊಂದಿಗೆ ಹುಬ್ಬಳ್ಳಿಗೆ ತರಳಿ ಮನವಿ ಸಲ್ಲಿಸಲಾಗುತ್ತದೆ ಎಂದು ಪ್ರಜ್ವಲ್ ರೇವಣ್ಣ ಮಾಹಿತಿ ನೀಡಿದರು.
ಲಕ್ಷ್ಮೀಪುರ ಹಾಗೂ ಸುಬ್ರಮಣ್ಯ ನಗರ ಬಡಾವಣೆಯ ನಿವಾಸಿಗಳ ಅನುಕೂಲಕ್ಕೆ ರೈಲ್ವೆ ಮಲ್ಸೇತುವೆ ನಿರ್ಮಿಸುವಂತೆ ಮಾಡಿದ್ದಾರೆ. ಅಲ್ಲದೆ ಮತ್ತೊಂದು ಹೆಚ್ಚುವರಿ ಟಿಕೆಟ್ ಕೌಂಟರ್ ಅನ್ನು ಲಕ್ಷ್ಮೀಪುರ ಬಡಾವಣೆಯಲ್ಲಿ ತೆರೆಯುವಂತೆ ಪ್ರಯಾಣಿಕರು ಕೋರಿದ್ದು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.ಶಾಸಕ ಸ್ವರೂಪ್ ಪ್ರಕಾಶ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್, ದಂದೂರು ರವಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿಕಂದರ್, ರಮೇಶ್ ನಾಯ್ಡು, ಹರ್ಷವರ್ಧನ್, ಪುಟ್ಟಸ್ವಾಮಿ, ಯೋಗೀಶ್, ಗಣೇಶ್, ಬಿ.ಜಿ.ನಿರಂಜನ್, ಕುಮಾರ್, ರಮೇಶ್, ಲೋಕೇಶ್, ಮಂಜುನಾಥ್, ಪ್ರವೀಣ್ ಹಾಜರಿದ್ದರು.
ಅರಸೀಕೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಚಹಾ ಸೇವಿಸಿ ಗಮನಸೆಳೆದರು. ಸ್ವರೂಪ್ ಪ್ರಕಾಶ್, ಸಿ.ಗಿರೀಶ್,ಗಂಗಾಧರ್, ಸಿಕಂದರ್, ರಮೇಶ್ ನಾಯ್ಡು, ಪುಟ್ಟಸ್ವಾಮಿ, ಯೋಗೀಶ್, ಗಣೇಶ್, ಬಿ.ಜಿ.ನಿರಂಜನ್, ರವಿ ಇದ್ದಾರೆ.