ಕನ್ನಡಪ್ರಭ ವಾರ್ತೆ ಹಾಸನ
ಹೆಣ್ಣು ಅಬಲೆಯಲ್ಲ ಸಬಲೆಯರು ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಕುರುಹಿನಶೆಟ್ಟಿ ಸಮುದಾಯದ ಮಹಿಳಾ ಒಕ್ಕೂಟವೂ ಕೂಡ ಹೆಜ್ಜೆ ಇಟ್ಟಿದೆ ಎಂದು ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್ ಸಂತಸ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘ ಮತ್ತು ಜಿಲ್ಲಾ ನೇಕಾರ ಸಮುದಾಯಗಳ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ೮ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಜಿಲ್ಲಾ ನೇಕಾರ ಸಮುದಾಯಗಳ ಮಹಿಳಾ ಒಕ್ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಹೆಣ್ಣು ಮಗಳು ಅಬಲೆಯರು ಎನ್ನಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಅಬಲೆಯಲ್ಲ ಸಬಲೆಯರು ಎನ್ನುವುದನ್ನು ಹಾಸನದ ಮಹಿಳಾ ಒಕ್ಕೂಟ ತೋರಿಸಿದೆ. ಹೆಣ್ಣು ಎಂದರೇ ಸಮಾಜದಲ್ಲಿ ಒಂದು ಶಕ್ತಿ. ಸಂಸಾರದಲ್ಲಿ ಹೆಣ್ಣಿನ ಪಾತ್ರವೇ ಹೆಚ್ಚು ಇರುತ್ತದೆ. ಹೆಣ್ಣಿನ ಛಾಯೆ ಇಲ್ಲದೆ ಹೋದರೇ ಖಂಡಿತವಾಗಿಯೂ ಸಂಸಾರ ಅಗೋಚರವಾಗಿರುತ್ತದೆ. ಹೆಣ್ಣಿನ ಶಕ್ತಿಯಿಂದಲೇ ಅನೇಕ ಕೆಲಸಗಳು ಆಗಿದೆ ಎಂದರು.ವಿಶೇಷವಾಗಿ ರಾಜ್ಯದಲ್ಲಿ ನಾವೆಲ್ಲಾ ಹಿಂದುಳಿದ ವರ್ಗಗಳಿಗೆ ಬರುತ್ತೇವೆ. ಹಿಂದುಳಿದ ವರ್ಗದಲ್ಲಿ ೧೦೨ ಸಮಾಜಗಳು ಬರುತ್ತದೆ. ನೇಕಾರ ಸಮಾಜದಲ್ಲಿಯೇ ೨೯ ಸಮುದಾಯಗಳು ಬರುತ್ತದೆ. ಅಷ್ಟನ್ನು ಒಟ್ಟಾಗಿ ಬೆಳೆಯುವ ವಾತಾವರಣ ತರುವ ಬಗ್ಗೆ ಚಿಂತನೆ ಮಾಡಿದಾಗ ಮಹಿಳಾ ಶಕ್ತಿಗೂ ಕೂಡ ಅವಕಾಶ ಕೊಡಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ೨೯ ಸಮುದಾಯಗಳು ಇದೆ ಎಂದು ಅಧಿಕೃತವಾಗಿ ದಾಖಲೆ ಇದ್ದರೂ ಸಹ ನಮಗೆ ಕರ್ನಾಟಕದಲ್ಲಿ ೧೧ ಸಮುದಾಯಗಳು ಮಾತ್ರ ಲೆಕ್ಕಕ್ಕೆ ಸಿಕ್ಕಿವೆ. ಉಳಿದ ೧೮ ಸಮುದಾಯಗಳು ಎಲ್ಲಿದೆ ಎಂದು ಕೇಳಿದರೂ ಸಹ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಕಾಮಮೂರ್ತಿ ಅಂಬಾದಾಸ್, ಅಖಿಲ ಭಾರತ ಕುರುಹಿನಶೆಟ್ಟಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ದೇವಿಕಾ ಭೂಷಣ್, ಹಾಸನ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ ರಂಗಶೆಟ್ಟಿ, ನೇಕಾರರ ಸಮುದಾಯಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಾಗವೇಣಿ, ರಾಜ್ಯ ನೇಕಾರ ಸಮುದಾಯಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಮಾ ಜಗದೀಶ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ಕೃಷ್ಣಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಲತಾ ಇಂದ್ರೇಶ್, ಬೆಳ್ಳಿಚುಕ್ಕಿ ವೀರೇಂದ್ರ, ಯಶೋಧ ಟ್ರಸ್ಟ್ ಅಧ್ಯಕ್ಷೆ ವಾಣಿಶೆಟ್ಟಿ, ಡಾ. ಶೈಲಜಾ ಉಪನ್ಯಾಸಕಿ ಬಿ.ಆರ್. ಮಾಲತಿ, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ರುಕ್ಮಿಣಿ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಸುನೀತ ಮನೋಜ್ ಕುಮಾರ್, ಸ್ವ-ಸಹಾಯ ಸಂಘದ ಅಧ್ಯಕ್ಷೆ ನಮಿತ ಪ್ರಸಾದ್, ಕಾರ್ಯದರ್ಶಿ ಕೆ.ಎಚ್. ಪ್ರೇಮ, ಸಹ ಕಾರ್ಯದರ್ಶಿ ತ್ರಿವೇಣಿ, ಖಜಾಂಚಿ ಇಂದ್ರ ಮಂಜುನಾಥ್, ವೀಣಾ, ಕುಮಾರಿ, ತುಳಸಿ, ಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.