ಕನ್ನಡಪ್ರಭ ವಾರ್ತೆ ತುಮಕೂರು
ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಫಲಾನುಭವಿಗಳಿಗೆ ಹೊಗೆ ರಹಿತ ವಾಹನಗಳ ವಿತರಣೆ ಸಂದರ್ಭದಲ್ಲಿ ಯಾವ ಮಹಿಳೆಯೂ ವಾಹನ ಪಡೆಯಲು ಅರ್ಜಿ ಸಲ್ಲಿಸಲಿಲ್ಲ. ಮಹಿಳೆಯರು ಆಟೋ, ನಾಲ್ಕು ಚಕ್ರ ವಾಹನಗಳ ಚಾಲನೆ ಮಾಡಬಾರದೆ? ಬೆಂಗಳೂರಿನಲ್ಲಿ ಇಂತಹ ವಾಹನಗಳ ಚಾಲನೆ ಮಾಡಿಕೊಂಡು ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದಾರೆ ಎಂದರು.
ನಮ್ಮ ಮಹಿಳೆಯರು ಸ್ವ ಉದ್ಯೋಗವೆಂದರೆ ಟೈಲರಿಂಗ್, ಬ್ಯೂಟಿ ಪಾರ್ಲರ್, ಸೀರೆ ವ್ಯಾಪಾರ, ಬಳೆ ಅಂಗಡಿ ಇಷ್ಟೇ ವ್ಯವಹಾರ ಅಂದುಕೊಂಡಿದ್ದಾರೆ. ಇದರಿಂದ ಆಚೆ ಬಂದು ಬೇರೆಬೇರೆ ವ್ಯವಹಾರ ಮಾಡಲು ಸರ್ಕಾರದ ವಿವಿಧ ಯೋಜನೆಗಳಲ್ಲಿ ಮಹಿಳೆಯರಿಗೆ ಅವಕಾಶವಿದೆ. ಸಂಘಸಂಸ್ಥೆಗಳು ಸರ್ಕಾರದ ಯೋಜನೆಗಳ ಬಗ್ಗೆ ಮಹಿಳೆಯರಿಗೆ ಪ್ರಚಾರ ಮಾಡಿ ನೆರವಾಗಬೇಕು ಎಂದು ಜಾಹ್ನವಿ ಹೇಳಿದರು.ಕುಣಿಗಲ್ ಯೋಗವನದ ವೈದ್ಯೆ ಡಾ.ಪವಿತ್ರಾ ಮಾತನಾಡಿ, ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ವಿವಿಧ ಕಾಯಿಲೆಗಳ ಬಾಧಿಸುತ್ತವೆ. ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬವೂ ಆರೋಗ್ಯವಾಗಿರುತ್ತದೆ. ಬಳಸುವ ಆಹಾರ, ಆಹಾರ ಪದಾರ್ಥಗಳ ಆಯ್ಕೆ ವಿಚಾರದಲ್ಲಿ ಮಹಿಳೆಯರು ಎಚ್ಚರ ವಹಿಸಬೇಕು. ಆಹಾರವನ್ನು ಔಷಧಿಯಂತೆ ಬಳಸುವಂತಾಗಬೇಕು. ಆರೋಗ್ಯಕರ ಆಹಾರವನ್ನು ಸಿದ್ಧಮಾಡಿ ಮಹಿಳೆ ಕುಟುಂಬದ ವೈದ್ಯೆಯಂತೆ ಆಗಬೇಕು, ತನ್ನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪರಿಷತ್ತಿನ ಉಪಾಧ್ಯಕ್ಷ ಮಣಿಕಂದನ್ ಮಾತನಾಡಿ, ಈ ನೆಲದ ಕಾನೂನು, ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದು ಚಲಾಯಿಸಿಬೇಕು. ಇಂದು ಹದಿಹರೆಯರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ. ಅವರಿಗೆ ಕಾನೂನಿನ ಅರಿವು, ಭಯ ಇಲ್ಲದಿರುವುದು ಇದಕ್ಕೆಲ್ಲಾ ಕಾರಣ. ಸರ್ಕಾರ ಶಾಲಾ ಕಾಲೇಜುಗಳ ಪಠ್ಯದಲ್ಲಿ ಸಾಮಾನ್ಯ ಕಾನೂನು ತಿಳಿಸು ಪಠ್ಯ ವ್ಯವಸ್ಥೆ ಜಾರಿ ಮಾಡಬೇಕು ಎಂದು ಹೇಳಿದರು.
ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ನೂತನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಲಿಂಗಯ್ಯ, ಕಾರ್ಯಾಧ್ಯಕ್ಷ ಎಸ್.ಸಿ.ಮಂಜುನಾಥ್, ಕಾರ್ಯದರ್ಶಿ ಗಿರೀಶ್, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ಮಹಿಳಾ ಅಧ್ಯಕ್ಷೆ ಲತಾ ಮೊದಲಾದವರು ಭಾಗವಹಿಸಿದ್ದರು.