ಚಿತ್ರದುರ್ಗ: ಮೋದಿ 5300 ಕೋಟಿ ರು. ಕೊಡ್ತೀನಿ ಅಂದು ಮೋಸ ಮಾಡಿದ್ರಪ್ಪೋ...! ಮೋದಿ ಕೊಡ್ತಾರೆ ಅಂತ ಸಿದ್ದರಾಮಣ್ಣ ಕಣ್ ಮುಚ್ಚಿ ಕುಳಿತರೆ ಏನು ಮಾಡೋಣ್ರಪ್ಪೋ...! ದೇಶದಾಗೆ ನೀವಿಬ್ಬರೇ ಬದುಕಿ ಉಳಿದವರು ಸತ್ತು ಹೋಗಬೇಕೇನ್ರಪ್ಪೋ...?
800 ಅಡಿ ಕೊರೆದರೂ ನೀರು ಸಿಗುತ್ತಿಲ್ಲ, ಕುಡಿಯೋಕೂ ನೀರಿಲ್ಲ, ತೋಟಗಳನ್ನೆಲ್ಲ ಕಡಿಯುತ್ತಿದ್ದೇವೆ. ವಿಷ ಕುಡಿದು ಸಾಯುವ ಪರಿಸ್ಥಿತಿ ಬಂದಿದೆ ಎಂದು ಬಿಕ್ಕಿ ಬಿಕ್ಕಿ ಅತ್ತರು. ಇದ್ರೂ ಒಂದೇ ಸತ್ರೂ ಒಂದೇ ಅನ್ನೋ ಥರ ಆಗೈತೆ ನಮ್ಮ ಬದುಕು. ನಮ್ಮನ್ನು ಸಾಯಿಸಬೇಡ್ರಪ್ಪೋ, ನೀರು ಕೊಟ್ಟು ಬದುಕಿಸಿ ಎಂದು ಗೋಗರೆದರು. ನೀವು ನೀರು ಕೊಡಿ ಸಾಕು, ನಾವು ಬೆಳೆ ಬೆಳೆದು ನಿಮಗೆ ಅನ್ನ ಕೊಡ್ತೇವೆ ಎಂದು ವಿನಂತಿಸಿದರು.
ನಮಗೆ ಸರ್ಕಾರದ ಯಾವ ಗ್ಯಾರೆಂಟಿಗಳೂ ಬೇಡ, ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ಲೋಕಸಭೆ ಚುನಾವಣೆ ಬಂದೈತಿ, ಮೂರು ತಿಂಗಳೊಳಗೆ ನೀರು ಕೊಡದಿದ್ದರೆ ವೋಟೂ ಹಾಕಲ್ಲ, ನಿಮ್ಮನ್ನು ಊರೊಳಗೆ ಬಿಟ್ಟುಕೊಳ್ಳೋದಿಲ್ಲವೆಂದು ಕಾಂಗ್ರೆಸ್, ಬಿಜೆಪಿ ಮೇಲೆ ಆಕ್ರೋಶದ ಮಳೆಗರೆದರು. ಮೊಳಕಾಲ್ಮುರು ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಇದೇ ವೇಳೆ ಸ್ಥಳಕ್ಕೆ ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.ಈ ವೇಳೆ ಮಾತನಾಡಿದ ಶ್ರೀಗಳು ಭದ್ರಾ ಮೇಲ್ದಂಡೆ ಜಾರಿ ವಿಚಾರದಲ್ಲಿ ರೈತರ ಸತಾಯಿಸಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ಜಗತ್ತಿಗೆ ಅನ್ನಕೊಡುವ ರೈತನಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಕಳೆದ 19 ದಿನಗಳಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಗಮನ ಹರಿಸದಿರುವುದು ನೋವಿನ ಸಂಗತಿ. ಮಠದಲ್ಲಿ ಅನ್ನ ದಾಸೋಹ ನಡೆಯಲಿಕ್ಕೆ ರೈತರು ಭತ್ತ ಬೆಳೆದುಕೊಡುತ್ತಾರೆ. ಅದಕ್ಕಾಗಿ ಮಠಾಧೀಶರುಗಳು ಇಂತಹ ಹೋರಾಟಗಳಿಗೆ ಬೆಂಬಲ ಸೂಚಿಸಬೇಕೆಂದರು.