ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಎಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲಬದಲಾದಂತೆ ಭಾರತೀಯ ಸಮಾಜ ಮಹಿಳೆಯರನ್ನು ಶೋಷಣೆ ಮಾಡುತ್ತಿರುವುದನ್ನು ತಪ್ಪಿಸಲು ಸಂವಿಧಾನದ ಆಶಯದಂತೆ ಅನೇಕ ಬಿಗಿ ಕಾನೂನುಗಳನ್ನು ಮತ್ತು ಅವಕಾಶಗಳನ್ನು ಕೊಡುತ್ತಾ ಬಂದಿದೆ. ಆದರೆ, ನಮ್ಮನ್ನಾಳುವ ಸರ್ಕಾರಗಳು ಮಾತ್ರ ಮಹಿಳಾ ಮೀಸಲಾತಿ ಜಾರಿಗೆ ಇನ್ನೂ ಮೀನಾಮೇಷ ಎಣಿಸುತ್ತಿರುವುದು ಈ ವ್ಯವಸ್ಥೆಯ ದುರಂತ ಎಂದರು.
ಮಹಿಳೆಯರಿಗೆ ಎಲ್ಲಿ ಅಧಿಕಾರ ಸಿಕ್ಕರೂ ಅಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಪಿತೃ ಪ್ರಧಾನ ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಸಾಧನೆಯ ಶಿಖರವನ್ನು ಮಹಿಳೆ ಏರುತ್ತಿದ್ದಾಳೆ ಎಂದು ಬಣ್ಣಿಸಿದರು.ವರ್ಷಕ್ಕೊಮ್ಮೆ ಆಚರಣೆ ಮಾಡುವ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರು ಮತ್ತು ಅವರ ಸಾಧನೆಗಳನ್ನು ಹೇಳುವ ಬದಲಾಗಿ ಇನ್ನಷ್ಟು ಉತ್ತೇಜನ ನೀಡಲು, ಶಿಕ್ಷಣ ನೀಡಿ ಉದ್ಯೋಗ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಎಲ್ಲಾ ವಲಯಗಳಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ ಎಂದು ಹೇಳಿದರು.
ಪ್ರತಿಯೊಬ್ಬ ಮಹಿಳೆಯೂ ತಮ್ಮ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಬಂದಾಗ ಮಾತ್ರ ಮಹಿಳೆಯರಲ್ಲಿ ಆತ್ಮವಿಶ್ವಾಸ, ಧೈರ್ಯದಿಂದ ತಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ಬಿ. ನಾಗಶ್ರಿ, ಜಿ.ಟಿ. ಶಶಿಕಲಾ, ಪ್ರೊ.ಎನ್. ಶಿಲ್ಪಾ, ಪ್ರೊ.ವಿ.ಬಿ. ನಾಗವೇಣಿ, ಪ್ರೊ. ಮಂಜುನಾಥ್, ಪ್ರೊ. ಪೈರೂಜ್, ಪ್ರೊ. ಜೆ.ಆರ್.ಜೆ. ರಾಜ್ ಕುಮಾರ್, ಪ್ರೊ. ಜಗನ್ನಾಥ್, ಪ್ರೊ. ಶಿವಾನಂದಯ್ಯ, ಪ್ರೊ. ವಿಜಯ್ ಕುಮಾರ್, ಪ್ರೊ. ನಾಗರಾಜ್, ಪ್ರೊ. ಧನಂಜಯ ಉಪಸ್ಥಿತರಿದ್ದರು.