ಮಹಿಳಾ ಮೀಸಲು ಮಸೂದೆ ಬಿಜೆಪಿಯ ರಾಜಕೀಯ ಗಿಮಿಕ್ - ಕೋಕಿಲಾ ರಾಣಿ

KannadaprabhaNewsNetwork |  
Published : Apr 23, 2026, 01:15 AM IST
22ಕೆಆರ್ ಎಂಎನ್ 6.ಜೆಪಿಜಿಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಕೋಕಿಲಾ ರಾಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿರೋಧ ಪಕ್ಷಗಳಿಗೆ ಮಹಿಳಾ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟುವ ಸಲುವಾಗಿಯೇ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜೊತೆಗೆ ಕ್ಷೇತ್ರ ಮರು ವಿಂಗಡಣೆಯನ್ನು ಸೇರಿಸಿ ಸಂವಿಧಾನದ ತಿದ್ದುಪಡಿಗೆ ಮುಂದಾಗಿ ವಿಫಲವಾಯಿತು. ಇದೊಂದು ಬಿಜೆಪಿಯ ರಾಜಕೀಯ ಗಿಮಿಕ್ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಕೋಕಿಲಾ ರಾಣಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ರಾಮನಗರ

ವಿರೋಧ ಪಕ್ಷಗಳಿಗೆ ಮಹಿಳಾ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟುವ ಸಲುವಾಗಿಯೇ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜೊತೆಗೆ ಕ್ಷೇತ್ರ ಮರು ವಿಂಗಡಣೆಯನ್ನು ಸೇರಿಸಿ ಸಂವಿಧಾನದ ತಿದ್ದುಪಡಿಗೆ ಮುಂದಾಗಿ ವಿಫಲವಾಯಿತು. ಇದೊಂದು ಬಿಜೆಪಿಯ ರಾಜಕೀಯ ಗಿಮಿಕ್ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಕೋಕಿಲಾ ರಾಣಿ ಕಿಡಿಕಾರಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಕಾಂಗ್ರೆಸ್ ಮಹಿಳಾ ಮೀಸಲಾತಿ ಪರ‌ವೇ ಇದೆ. 2023ರಲ್ಲಿ ಸಂಸತ್‌ ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದೆ. ಅದನ್ನು ಜಾರಿ ಮಾಡಿ ತೋರಿಸಲಿ ಎಂದರು.

ಬಿಜೆಪಿಯವರು ನಿಜವಾಗಿಯೂ ಮಹಿಳೆಯರ ಹಿತೈಷಿಗಳಾಗಿದ್ದರೆ ಪ್ರಸ್ತುತ ಲೋಕಸಭೆಯ 543 ಸ್ಥಾನಗಳಲ್ಲೇ ಮೀಸಲಾತಿಯನ್ನು ಜಾರಿಗೊಳಿಸಲಿ. ಆದರೆ, ಪಂಚರಾಜ್ಯಗಳ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಮಹಿಳಾ ಮೀಸಲಾತಿ ಮಸೂದೆ ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆ ಸೇರಿಸಿದ್ದೇಕೆ. ಮಸೂದೆಗೆ ಸೋಲಾಗುತ್ತಿದ್ದಂತೆ ಬಿಜೆಪಿಗರು ಮಾಡಿದ ತಪ್ಪನ್ನು ಕಾಂಗ್ರೆಸ್ಸಿಗರ ಮೇಲೆ ಹೊರಿಸುತ್ತಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ ಕಾಂಗ್ರೆಸ್ ಪಕ್ಷ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡಿತು. ಎನ್ ಡಿಎ ಸರ್ಕಾರ 2027ರ ಜನಗಣತಿ ಆಧರಿಸಿ ಕ್ಷೇತ್ರ ಮರು ವಿಂಗಡಣೆ ಮಾಡಲಿ, ಅದನ್ನು ಬಿಟ್ಟು ತನ್ನ ಅನುಕೂಲಕ್ಕೆ ತಕ್ಕಂತೆ 2029ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಕೋಕಿಲಾ ರಾಣಿ ಕಿಡಿಕಾರಿದರು.

ಕೆಪಿಸಿಸಿ ಸದಸ್ಯೆ ಕಲ್ಪನಾ ಶಿವಣ್ಣ ಮಾತನಾಡಿ, 2023ರಲ್ಲೇ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಪಾಸಾಗಿ ರಾಷ್ಟ್ರಪತಿಯಿಂದ ಅನುಮೋದನೆಗೊಂಡು ಗೆಜೆಟ್ಟಾದ ಕಾಯ್ದೆಯನ್ನು 2026ರ ಏಪ್ರಿಲ್ 16ರ ತನಕ ನೋಟಿಫಿಕೇಶನ್ ಮಾಡಲಿಲ್ಲವೇಕೆ. ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡುವ ಉದ್ದೇಶದಿಂದಲೇ 2026ರ ಸಂವಿಧಾನ ತಿದ್ದುಪಡಿ ಮಸೂದೆ ತಂದಿದ್ದಲ್ಲಿ ಅದಕ್ಕೆ 2011ರ ಜನಗಣತಿ ಆಧರಿಸಿ ಡಿಲಿಮಿಟೇಷನ್ ಮಾಡುವ ಕುತಂತ್ರದ ಉಪ ಷರತ್ತುಗಳನ್ನು ಸೇರಿಸಿದ್ದೇಕೆ ಎಂದು ಪ್ರಶ್ನಿಸಿದರು.

ಮಹಿಳಾ ಮೀಸಲಾತಿಯ ಪ್ರಸ್ತಾವಗಳು ಸಂಸತ್ತಿನಲ್ಲಿ ಮಂಡನೆಯಾಗುತ್ತಲೇ ಬಂದಿವೆ. ಮಹಿಳಾ ಮೀಸಲಾತಿಯೊಳಗೆ ಒಬಿಸಿಗಳಿಗೆ ಒಳಮೀಸಲಾತಿ ಇಲ್ಲವೆಂಬ ಆಕ್ಷೇಪಗಳಿಂದಾಗಿ ಮಹಿಳಾ ಮೀಸಲಾತಿ ಅನುಮೋದನೆಗೊಳ್ಳುತ್ತಿರಲಿಲ್ಲ. ಇದು ಗೊತ್ತಿದ್ದರೂ ಬಿಜೆಪಿ ಸರ್ಕಾರ , ಒಬಿಸಿ ಒಳಮೀಸಲಾತಿ ಕೊಟ್ಟು ಮಹಿಳಾ ಮೀಸಲಾತಿ ಜಾರಿಗೆ ತರುವ ಪ್ರಯತ್ನವನ್ನು ಮಾಡಲಿಲ್ಲ. ಆದರೆ, ಮಹಿಳಾ ಮೀಸಲು ಮಸೂದೆ ಜೊತೆಗೆ ಕ್ಷೇತ್ರ ಮರು ವಿಂಗಡಣೆ ಸೇರಿಸಿ ದೇಶವನ್ನು ಒಡೆಯುವ ಹುನ್ನಾರ ಮಾಡಿತು. ಅದನ್ನು ವಿಫಲಗೊಳಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ದೇಶದ ಐಕ್ಯತೆಯನ್ನು ಕಾಪಾಡಿತು ಎಂದು ಹೇಳಿದರು.

ಪಂಚ ರಾಜ್ಯಗಳ ಚುನಾವಣಾ ನಡೆಯುತ್ತಿರುವಾಗ ಬಿಜೆಪಿ ಸರ್ಕಾರ, ಕ್ಷೇತ್ರ ಮರು ವಿಂಗಡಣೆ ಷರತ್ತು ಸೇರಿಸಿ ದುರುದ್ದೇಶದಿಂದ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಿ ಸೋಲಿಸಿದೆ. ಆ ಸೋಲಿಗೆ ವಿರೋಧ ಪಕ್ಷಗಳೇ ಕಾರಣವೆಂಬ ಸುಳ್ಳು ಮತ್ತು ದ್ವೇಷಪೂರಿತ ಚುನಾವಣಾ ಪ್ರಚಾರ ನಡೆಸುತ್ತಿದೆ. ಈ ಕೂಡಲೇ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕಲ್ಪನಾ ಶಿವಣ್ಣ ಒತ್ತಾಯಿಸಿದರು.

ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು‌ , ಕೆಡಿಪಿ ಸದಸ್ಯೆ ಸುಕನ್ಯಾ, ಅನಿತಾ, ಭೂ ನ್ಯಾಯ ಮಂಡಳಿ ಸದಸ್ಯೆ ಲೇಖಾ, ಗ್ಯಾರಂಟಿ‌ ಸಮಿತಿ‌ ಸದಸ್ಯರಾದ ವಾಣಿ, ಪುಷ್ಪಲತಾ, ನಾಗರಾಜು, ಆರಾಧನಾ ಸಮಿತಿ ಸದಸ್ಯೆ ಪದ್ಮಾವತಿ, ನಗರಸಭಾ ಮಾಜಿ ಸದಸ್ಯೆ ಹಸಿನಾ ಬಾನು ಇದ್ದರು.

-------

ಕೋಟ್ ....

ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ ನೀಡಿದ ಪರಿಣಾಮ ಇಂದು ಮಹಿಳೆಯರು ಚುನಾಯಿತ ಪ್ರತಿನಿಧಿಗಳಿದ್ದಾರೆ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಪ್ರಮುಖ ಕಾರಣ. ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆ ಜೊತೆಗೆ ಕ್ಷೇತ್ರ ಮರು ವಿಂಗಡಣೆ ಸೇರಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವ ಪ್ರಯತ್ನಕ್ಕೆ ಸೋಲಾಗಿದೆ. ಕಾಂಗ್ರೆಸ್ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧಿಸಿದೆಯೇ ಹೊರತು ಮಹಿಳಾ ಮೀಸಲಾತಿಯನ್ನು ಅಲ್ಲ.

ಕೋಕಿಲಾ ರಾಣಿ, ಜಿಲ್ಲಾಧ್ಯಕ್ಷರು, ಮಹಿಳಾ ಕಾಂಗ್ರೆಸ್ , ಬೆಂ.ದಕ್ಷಿಣ.

2023ರಲ್ಲಿಯೇ ಕಾಂಗ್ರೆಸ್ ಸೇರಿದಂತೆ ಸರ್ವ ಪಕ್ಷಗಳ ಸರ್ವಾನುಮೋಧನೆಯೊಂದಿಗೆ ಸಂವಿಧಾನಕ್ಕೆ ತಿದ್ದುಪಡಿ ತಂದು ಮಹಿಳಾ ಮೀಸಲಾತಿಯನ್ನು ಕಾನೂನು ಮಾಡಿದ ಮೇಲೆ ಹೊಸ ಸಂವಿಧಾನ ತಿದ್ದುಪಡಿಯ ಅಗತ್ಯವೇನಿತ್ತು? ಆ ಕಾಯ್ದೆಯನ್ನು ನೋಟಿಫಿಕೇಶನ್ ಏಕೆ ಮಾಡಿಲ್ಲ? ತಮ್ಮನ್ನು ನಾರಿ ರಕ್ಷಕರು ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿಯವರು ಮಣಿಪುರ, ಕಥುವಾ, ಉನ್ನಾವ್ ಗಳಲ್ಲಿ ಹಾಗೂ ಮಹಿಳಾ ಪೈಲ್ವಾನರಿಗೆ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಬಿಜೆಪಿ ನಾಯಕರೇ ಮಹಿಳಾ ಪೀಡಕರಾಗಿದ್ದರೂ ಮೌನ ವಹಿಸಿದ್ದೇಕೆ?

ಪುಟ್ಟರಾಜು, ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಕಾರ್ಮಿಕ ಘಟಕ, ಬೆಂ.ದಕ್ಷಿಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಫೇಸಿ ಕಾಯ್ದೆ ಕುರಿತು ದಿನಕ್ಕೊಂದು ಸುಳ್ಳು: ಆಕ್ರೋಶ
ಸಿಇಟಿ: ನಗರದ 8 ಕೇಂದ್ರಗಳಲ್ಲಿ ಇಂದು ಪರೀಕ್ಷೆ