ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡುವ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಎಲ್ಲಾ ಮಹಿಳೆಯರು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿ ಆರ್ಥಿಕವಾಗಿ ಸಬಲರಾಗಬೇಕೆಂದು ಸಮಾಜ ಸೇವಕಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರಿ ಅನುಸೂಯ ಮಂಜುನಾಥ್ ಹೇಳಿದರು.ಮಂಗಳವಾರ ಪಟ್ಟಣದ ರೈತ ಭವನದಲ್ಲಿ ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮಾಡಿದ ಸಾಧನೆಗೆ ಗೌರವ ಸಿಕ್ಕರೆ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಬದುಕಿಗೆ ಪುರುಷ ಆಧಾರ ಸ್ತಂಭವಾದರೆ, ಮಹಿಳೆ ಚಾವಣಿ ಇದ್ದಂತೆ. ಹಾಗಾಗಿ ಪುರುಷರು ಹಾಗೂ ಮಹಿಳೆಯರ ನಡುವೆ ಯಾವ ಕೀಳರಿಮೆ ಇರಬಾರದು. ತನ್ನ ತಂದೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಶೇ.35 ಮೀಸಲಾತಿ ನೀಡುವ ಬಗ್ಗೆ ಉಲ್ಲೇಖಿಸಿದ್ದು, ಅದನ್ನು ಈಗಿನ ಪ್ರಧಾನಿ ನರೇಂದ್ರ ಮೋದಿ ಅನುಷ್ಠಾನಕ್ಕೆ ತಂದಿದ್ದಾರೆ. ಇದರ ಸದ್ಬಳಕೆ ಮಹಿಳೆಯರು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸಾಮಾನ್ಯ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿದ್ದಾರೆ. ನಿರ್ಮಲಾ ಸೀತಾರಾಮ್ ಕೇಂದ್ರದ ಹಣಕಾಸು ಸಚಿವೆಯಾಗಿದ್ದಾರೆ. ಈ ರೀತಿ ಸಾಧನೆ ಮಾಡಿದ ಅನೇಕ ಮಹಿಳೆಯರನ್ನು ಸ್ಪೂರ್ತಿದಾಯಕವನ್ನಾಗಿ ಮಾಡಿಕೊಂಡರೆ ನಮ್ಮಲ್ಲಿರುವ ಚೈತನ್ಯ ಹೊರ ತಂದು ಇತರರಿಗೆ ಸ್ಪೂರ್ತಿಯಾಗುವ ಮಾಣಿಕ್ಯರಾಗಬೇಕು. ಯಾವುದೇ ಕಾರಣಕ್ಕೂ ಪ್ರಕೃತಿಗೆ ವಿರುದ್ಧವಾಗಿ ಈಜಲು ಮುಂದಾಗಬಾರದು. ಬದುಕಿನ ಸರಣಿಯಲ್ಲಿ ತಮ್ಮ ಆರೋಗ್ಯದ ಜತಗೆ ಸಂಸಾರದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು. ಯಾವುದೇ ಸಮಸ್ಯೆಗೆ ಮಾನಸಿಕವಾಗಿ ಕುಗ್ಗಬಾರದು. ದೈಹಿಕ, ಶೈಕ್ಷಣಿಕ ಮತ್ತು ಮಾನಸಿಕವಾಗಿ ಸದೃಢರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರೆ ಈ ಸಮಾಜ ಸುಭದ್ರವಾಗುತ್ತದೆ ಎಂದು ಹೇಳಿದರು.ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ಅಧ್ಯಕ್ಷೆ ಭಾರತಿ ಶಂಕರ್ ಮಾತನಾಡಿ, ಪುರುಷ ಮತ್ತು ಮಹಿಳೆ ಒಟ್ಟಾಗಿ ನಡೆದಾಗ ಮಾತ್ರ ಉತ್ತಮವಾದ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಅದರಂತೆ ಶ್ರೀ ಬಾಲಗಂಗಾಧರ ಸ್ವಾಮಿ ಮಹಿಳೆಯರಿಗೆ ಕೌಶಲ್ಯ ತರಬೇತಿ ಪ್ರಾರಂಭಿಸಿದ್ದರಿಂದ ಎಷ್ಟೋ ಮಂದಿ ಮಹಿಳೆಯರು ಸ್ವ ಉದ್ಯೋಗ ನಡೆಸುವ ಮೂಲಕ ಸ್ಥಾನಮಾನ ಪಡೆದಿದ್ದಾರೆ ಎಂದರು.ಸಮಾಜ ಸೇವಕಿ ಪಲ್ಲವಿ ಸಿ.ಟಿ.ರವಿ, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರಾದ ಪಾವನ ಬಾಲಕೃಷ್ಣ, ಯುಕ್ತಾ, ಶಾಲಿನಿ ಸುಮಿತ್ರೇಗೌಡ, ಮಹಿರಾ ಎಂ.ಎನ್.ಗೌಡ, ಲಕ್ಷ್ಮೀಪ್ರಜ್ಞಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.