ಸಿದ್ದಾಪುರ: ಮಹಿಳೆಯರು ಮೈಕ್ರೊ ಫೈನಾನ್ಸ್ ಅಥವಾ ಮೀಟರ್ ಬಡ್ಡಿಯಲ್ಲಿ ಸಾಲಪಡೆಯಬೇಡಿ ಎಂದು ಜಿಲ್ಲಾ ಅಗ್ರಗಣ್ಯ ಬ್ಯಾಂಕ್ನ ಜಿಲ್ಲಾ ವ್ಯವಸ್ಥಾಪಕಿ ಭಾರತಿ ವಸಂತ್ ಹೇಳಿದರು.
ಬ್ಯಾಂಕುಗಳು ಶೇ.೧೧ ಬಡ್ಡಿದರಲ್ಲಿ ಸಾಲ ನೀಡುತ್ತಿವೆ. ಸ್ವ ಉದ್ಯೋಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಸಾಲದ ಕಂತನ್ನು ಪಾವತಿಸಿ, ನಿರ್ಲಕ್ಷಿಸಿದರೆ ಸಿಬಿಲ್ ಸ್ಕೋರ್ ಹಿಸ್ಟರಿ ಆಧಾರದ ಮೇಲೆ ಬೇರೆ ಬ್ಯಾಂಕುಗಳಲ್ಲಿ ಸಾಲ ದೊರೆಯುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ವರ್ಷದಿಂದ ವರ್ಷಕ್ಕೆ ಮಹಿಳಾ ಸಮಾವೇಶಕ್ಕೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿದ್ದು, ಇದು ಸಂತಸದ ವಿಚಾರವಾಗಿದೆ. ಭಾರತದಲ್ಲಿ ದುಡಿಯುವ ಜನತೆಯ ಸರಾಸರಿ ವಯಸ್ಸು ೩೫ ಆಗಿದ್ದು, ಇದರ ಸದುಪಯೋಗವನ್ನು ಸರಿಯಾಗಿ ಬಳಸಿಕೊಂಡಾಗ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.ಕಾರ್ಯಕ್ರಮದ ಅತಿಥಿ ರಾಣೆಬೆನ್ನೂರು ತಾಲೂಕಿನ ವನಸಿರಿ ಸಂಸ್ಥೆಯ ಸಂಸ್ಥಾಪಕ ಎಸ್.ಡಿ. ಬಳಿಗಾರ ಮಾತನಾಡಿ, ಮಹಿಳೆಯರು ಕೇವಲ ಯೋಜನೆಯಗಳಿಗೆ ಮಾತ್ರ ಹೋರಾಟ ಮಾಡದೇ ಹಕ್ಕುಗಳಿಗೆ ಹೋರಾಡಬೇಕಿದೆ. ನರೇಗಾ ಸರಿಯಾಗಿ ಅನುಷ್ಠಾನ ಮಾಡಿದರೆ ವಲಸೆ ಹೋಗುವುದನ್ನು ತಪ್ಪಿಸಬಹುದು ಎಂದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದ ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಕೆಲ ಯೋಜನೆಯ ಮಾಹಿತಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುತ್ತಿಲ್ಲ. ಮಾಹಿತಿ ಪಡೆಯಲು ಜನರು ಮುಂದಾಗಬೇಕಿದೆ. ಜನರು ಹಣಕಾಸು ವ್ಯವಸ್ಥೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಸಾಲದ ಹಣ ಪಡೆದಾಗ ಅದರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿಬೇಕು ಮಹಿಳೆಯರಿಗೆ ಉದ್ಯಮಶೀಲತೆ ಗುಣವನ್ನು ಬೆಳೆಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚಿನ ಸ್ವ ಸಹಾಯ ಸಂಘವನ್ನು ಹಾಗೂ ಸ್ವ ಉದ್ಯಮದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಿಲಾಯಿತು.ದೇಶಪಾಂಡೆ ರುಡ್ ಸೆಟ್ ನ ಮಾಬ್ಲೇಶ್ವರ ನಾಯ್ಕ, ಗ್ರೀನ್ ಕೇರ್ ಸಂಸ್ಥೆಯ ಜಿತೇಂದ್ರ ಕುಮಾರ್ , ಸಾಮಾಜಿಕ ಕಾರ್ಯಕರ್ತ ಉಮೇಶ್ ನಾಯ್ಕ್, ಪೂರ್ಣಿಮಾ ಹಾಗೂ ೧೦೦೦ ಕ್ಕೂ ಹೆಚ್ಚಿನ ಮನುವಿಕಾಸ ಸ್ವ ಸಹಾಯ ಸಂಘದ ಮಹಿಳೆಯರು ಉಪಸ್ಥಿತಿರಿದ್ದರು.