ಪ್ರದಾನ । ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಕ್ಷಣ ಸೇವಾ ಪ್ರಶಸ್ತಿ । ಅಂತಾರಾಷ್ಟ್ರೀಯ ಮಹಿಳಾ ದಿನ
ಮಹಿಳೆಯರ ಹಕ್ಕನ್ನು ಹೋರಾಟದಿಂದ ಪಡೆಯಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆರಂಭಿಸಲಾಯಿತು. ಆದರೆ ಇಂದಿಗೂ ಮಹಿಳೆಯರು ಶೇಕಡ ಒಂದರಷ್ಟು ಮಾತ್ರ ತಮ್ಮ ಹಕ್ಕನ್ನು ಚಲಾಯಿಸುವಲ್ಲಿ ಸಫಲವಾಗಿದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ಹೆಣ್ಣು ಮಕ್ಕಳಿಗೆ ಸೂಕ್ತವಾದ ಸುರಕ್ಷತೆ ದೊರಕುತ್ತಿಲ್ಲ. ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ಒಬ್ಬಂಟಿಯಾಗಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಸಾಹಿತಿ ಶೈಲಜಾ ಹಾಸನ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ದೇವಸ್ಥಾನ ರಸ್ತೆಯಲ್ಲಿರುವ ಶ್ರೀಮತಿ ಪುಟ್ಟಮ್ಮ ಶ್ರೀ ಚನ್ನಕೇಶವೇ ಗೌಡರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶಿಕ್ಷಣ ಕಸ್ತೂರಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ತನ್ನನ್ನು ಇಷ್ಟಪಡುತ್ತಿಲ್ಲ ಎಂಬ ಸಿಟ್ಟಿನಲ್ಲಿ ಶಾಲೆಗೆ ಹೋಗುವ ಹುಡುಗಿಯ ಮೇಲೆ ಆಸಿಡ್ ಎರಚುವ ವಿಕೃತ ಮನೋಭಾವನೆಯವರ ಆರ್ಭಟ ಹೆಚ್ಚಾಗುತ್ತಿದೆ. ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಇಂತಹ ದುಷ್ಕೃತ್ಯವನ್ನು ತಡೆಯುವ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 24 ಶಿಕ್ಷಕರಿಗೆ ಶಿಕ್ಷಣ ಕಸ್ತೂರಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಶಿವಮರಿಯಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪೂರ್ಣೇಶ್, ನಿರ್ದೇಶಕ ಗಂಗಾಧರ್, ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಬಿ.ಎಂ. ಆನಂದ್ ಭದ್ರೆಗೌಡ, ನಿರ್ದೇಶಕರಾದ ಲಕ್ಷ್ಮಣ್, ಲೋಕೇಶ್, ಸುಧಾಮಣಿ ಧರ್ಮಾಭೋವಿ, ಶಿಕ್ಷಕ ಕೇಶವೇ ಗೌಡ, ನಿವೃತ್ತ ಶಿಕ್ಷಕ ಮಂಜೇಗೌಡ ಜಯಶ್ರೀ ಇತರರು ಉಪಸ್ಥಿತರಿದ್ದರು. ಜಯಶ್ರೀ ಸ್ವಾಗತಿಸಿದರು, ಸುಧಾಮಣಿ ಹಾಗೂ ಪೂರ್ಣಿಮಾ ಪರಮೇಶ್ ನಿರೂಪಿಸಿದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶಿಕ್ಷಣ ಕಸ್ತೂರಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಾಹಿತಿ ಶೈಲಜಾ ಹಾಸನ್ ಉದ್ಘಾಟಿಸಿದರು. ಬಿ.ಆರ್.ಸಿ ಶಿವಮರಿಯಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪೂರ್ಣೇಶ್, ನಿರ್ದೇಶಕ ಗಂಗಾಧರ್ ಇತರರು ಇದ್ದರು.