ಕೊಪ್ಪಳ: ಮಹಿಳಾ ಮೀಸಲಾತಿಯನ್ನು ಮುಂದಿಟ್ಟುಕೊಂಡು ದೇಶದ ಮಹಿಳೆಯರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇಲ್ಲವೇ ಇಲ್ಲ. 2023ರಲ್ಲಿಯೇ ಮಹಿಳಾ ಮೀಸಲಾತಿ ಅನುಮೋದನೆಯಾಗಿದ್ದರೂ ಜಾರಿ ಮಾಡುತ್ತಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ್ ಆರೋಪಿಸಿದ್ದಾರೆ.
ದಕ್ಷಿಣದವರಿಗೆ ಅನ್ಯಾಯ ಆಗಲು ಬಿಡಲು ಸಾಧ್ಯವೇ ಇಲ್ಲ. ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲವೇ ಇಲ್ಲ. ಆದರೆ, ಅದರ ಜತೆಗೆ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸಲು ಸಂವಿಧಾನ ತಿದ್ದುಪಡಿ ಮಾಡಲು ಮುಂದಾಗಿದ್ದನ್ನು ನಾವು ವಿರೋಧಿಸಿದ್ದೇವೆ. ಅದಕ್ಕಾಗಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲಾಗಿದೆ. ನಮ್ಮ ಪಕ್ಷದ ತೀರ್ಮಾನದಂತೆ ನಾನು ಮತದಾನ ಮಾಡಿದ್ದೇನೆ. ಇಡೀ ಕಾಂಗ್ರೆಸ್ ಮತದಾನ ಮಾಡಿದೆ. ಹೀಗಿದ್ದಾಗ ನಾನೊಬ್ಬನೇ ವಿರೋಧಿಸಿದ್ದೇನೆ ಎನ್ನುವಂತೆ ಸ್ಥಳೀಯ ಬಿಜೆಪಿ ನಾಯಕರು ಬಿಂಬಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಹಾಗೆ ಹೇಳುತ್ತಿದ್ದಾರೆ ಎಂದರು.
ಮಹಿಳಾ ಮೀಸಲಾತಿಯ ಪರವಾಗಿ ನಾವೆಲ್ಲರೂ ಇದ್ದೇವೆ. ಇದನ್ನು ಎಲ್ಲರೂ ಹೇಳಿದ್ದಾರೆ. ಇರುವ ಸ್ಥಾನಗಳಿಗೆ ಮೀಸಲು ಜಾರಿ ಮಾಡುವ ಬದಲು ಅದಕ್ಕೆ ಮತ್ತೊಂದು ವಿಷಯ ಥಳುಕು ಹಾಕಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು. ದೇಶದ ಜನರು ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಯರು ಮೋಸ ಮಾಡುವುದು ಜನರಿಗೇನು ಗೊತ್ತಾಗಲ್ಲ ಎಂದುಕೊಂಡಿದ್ದಾರೆ. ಕಾಂಗ್ರೆಸ್ ಯಾವಾಗಲೂ ಮಹಿಳೆಯರ ಪರವಾಗಿಯೇ ಇದೆ. ಅದನ್ನು ಬಿಜೆಪಿಯಿಂದ ಕಲಿಯಬೇಕಾಗಿಲ್ಲ. ಅವರಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ ಇದ್ದಿದ್ದರೆ 2023ರಲ್ಲಿ ಅನುಮೋದನೆಯಾದಾಗಲೇ ಜಾರಿ ಮಾಡಬೇಕಾಗಿತ್ತು. ಅದ್ಯಾವುದನ್ನು ಮಾಡದೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.ಬಿಜೆಪಿಗೆ ನನ್ನ ಮೇಲೆ ವಿಶೇಷ ಪ್ರೀತಿ: ನಾನು ಏನೇ ಮಾಡಿದರೂ ಅದನ್ನು ಬಿಜೆಪಿಯವರು ಕೂಲಂಕಷವಾಗಿ ನೋಡುತ್ತಾರೆ. ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ ಎಂದು ಸಂಸದ ರಾಜಶೇಖರ ಹಿಟ್ನಾಳ ವ್ಯಂಗ್ಯವಾಡಿದ್ದಾರೆ.ದೇವಸ್ಥಾನದಲ್ಲಿ ಶಿವರಾತ್ರಿ ಕಾರ್ಯಕ್ರಮ ಏರ್ಪಡಿಸಿದರೂ ಪ್ರೀತಿ ತೋರಿಸುತ್ತಾರೆ. ಬಣ್ಣದ ಹಬ್ಬ ಏರ್ಪಡಿಸಿದರೂ ಪ್ರೀತಿ ತೋರಿಸುತ್ತಾರೆ. ಬಿಜೆಪಿಯ ನಾಯಕರಿಗೆ ನನ್ನ ಕಂಡರೆ ಎಲ್ಲಿಲ್ಲದ ಪ್ರೀತಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.