ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿದಿನ ೩ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ೫ ಲಕ್ಷ ಲೀಟರ್ ಹಾಲು ಬೇಡಿಕೆ ಇರುವುದರಿಂದ, ಹೆಚ್ಚುವರಿ ಹಾಲನ್ನು ಬೇರೆ ಜಿಲ್ಲೆಯಿಂದ ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ದ.ಕ. ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಇನ್ನೂ ಹೆಚ್ಚಿನ ಶ್ರಮವಹಿಸಿ, ಹೈನುಗಾರರನ್ನು ಉತ್ತೇಜಿಸಿ ಹೆಚ್ಚು ಹಾಲು ಸಂಗ್ರಹವಾಗುವಂತೆ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸಲಹೆ ನೀಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ. ಕ. ಜಿಲ್ಲಾ ಸಹಕಾರ ಯೂನಿಯನ್ ನಿ., ಮಂಗಳೂರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ., ಮಂಗಳೂರು ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇದರ ಅಧಿಕಾರಿಗಳಿಗೆ ಇಲ್ಲಿನ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ದ.ಕ. ಸಹಕಾರಿ ಹಾಲು ಒಕ್ಕೂಟ ಇದರ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ದ.ಕ. ಹಾಲು ಒಕ್ಕೂಟವು ಕರ್ನಾಟಕದಲ್ಲಿ ಮಾದರಿ ಹಾಲು ಒಕ್ಕೂಟವಾಗಿದೆ. ಇದಕ್ಕೆ ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸರಿಯಾದ ಮಾಹಿತಿ, ತರಬೇತಿ ನೀಡುವುದರಿಂದ ಇನ್ನೂ ಹೆಚ್ಚಿನ ಹಾಲು ಉತ್ಪಾದನೆಯಾಗಲು ಪರಿಣಾಮ ಬೀಳುತ್ತದೆ ಎಂದು ಹೇಳಿದರು ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಹಾಲು ಉತ್ಪಾದನೆ ಹೆಚ್ಚಾಗಲು ಪ್ರತಿ ಗ್ರಾಮಗಳಲ್ಲಿ ಹೈನುಗಾರರಿಗೆ, ರೈತ ಸಮಾವೇಶ ನಡೆಸಿ ಹೈನುಗಾರಿಕೆಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಕೆಲಸಗಳು ಆಗಬೇಕು. ಸಿಬ್ಬಂದಿ ವರ್ಗದವರು ಪ್ರಸ್ತುತ ಇರುವ ಹೈನುಗಾರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಪರಿಶೀಲಿಸುವ ಪ್ರಯತ್ನ ಮಾಡಬೇಕು ಎಂದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್ ರಮೇಶ್, ಯೂನಿಯನ್ ಉಪಾಧ್ಯಕ್ಷ ನಿಲಯ ಎಂ ಅಗರಿ, ನಿರ್ದೇಶಕರಾದ ಡಾ. ಎಸ್.ಆರ್. ಹರೀಶ್ ಆಚಾರ್ಯ, ಚಿತ್ತರಂಜನ್ ಬೋಳಾರ್, ಸುಧಾಕರ ಶೆಟ್ಟಿ, ಸಂಜೀವ ಪುಜಾರಿ, ಸವಿತಾ ಎನ್. ಶೆಟ್ಟಿ, ದ.ಕ. ಸಹಕಾರಿ ಹಾಲು ಒಕ್ಕೂಟ ಇದರ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ವ್ಯವಸ್ಥಾಪಕ ರವಿರಾಜ್ ಉಡುಪ ಇದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರ ಇಲಾಖೆ ಅಧೀಕ್ಷಕ ಎನ್.ಜೆ. ಗೋಪಾಲ್, ಉಪನ್ಯಾಸಕ ಗಣನಾಥ ಶೆಟ್ಟಿ ಎಕ್ಕಾರು ಇವರು ತರಬೇತಿ ನೀಡಿದರು. ಯೂನಿಯನ್ನಿನ್ ನಿರ್ದೇಶಕ ಡಾ. ಎಸ್. ಆರ್. ಹರೀಶ್ ಆಚಾರ್ಯ ಸ್ವಾಗತಿಸಿದರು. ಸವಿತಾ ಎನ್. ಶೆಟ್ಟಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ್ ನಿರೂಪಿಸಿದರು.----------------