ಕೊಟ್ಟೂರು: ಕೊಟ್ಟೂರು ಮಾರ್ಗದ ಮೂಲಕ ಕಳೆದ ವರ್ಷದಿಂದ ಸಂಚರಿಸುತ್ತಿದ್ದ ಎರಡು ರೈಲುಗಳ ಸಂಚಾರವನ್ನು ಡಿಸೆಂಬರ್ ಕೊನೆಯ ವಾರದಿಂದ ಜನವರಿ ಅಂತ್ಯದವರೆಗೂ 30 ದಿನಗಳ ಕಾಲ ನೈಋತ್ಯ ರೈಲ್ವೆ ವಲಯ ಸ್ಥಗಿತಗೊಳಿಸಿ ಆದೇಶಿಸಿದೆ.
ತಾತ್ಕಾಲಿಕವಾಗಿ ಹಗಲಿನ ಎರಡು ಮಾರ್ಗಗಳ ಸಂಚಾರವನ್ನು ಹಗರಿಬೊಮ್ಮನಹಳ್ಳಿಯಲ್ಲಿ ಹಳಿ ಕಾಮಗಾರಿ ಕೈಗೊಳ್ಳುವುದರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಿಸಿದೆ.
ಕೊಟ್ಟೂರು- ಹಗರಿಬೊಮ್ಮನಹಳ್ಳಿ ನಡುವೆ ಹೆಚ್ಚಿನ ಗೇಜ್ ಲೈನ್ ಬ್ಲಾಕ್ ಮತ್ತು ಹಳಿಗಳ ನಡುವಿನ ಬೆಂಚ್ ಕಲ್ಲುಗಳನ್ನು ಸರಿಪಡಿಸುವ ಕಾಮಗಾರಿಯನ್ನು ನೈಋತ್ಯ ರೈಲ್ವೆ ವಲಯ ಕೈಗೊಂಡಿದ್ದು, ಕಾಮಗಾರಿ ನಡುವೆಯೂ ರೈಲುಗಳ ಸಂಚಾರ ನಡೆಯುತ್ತಿದ್ದರೂ ಸಮಯ ಪಾಲನೆಯಾಗುತ್ತಿಲ್ಲ. ಕಾಮಗಾರಿ ನಡೆಯುತ್ತಿರುವುದರಿಂದ ಕೊಟ್ಟೂರು ಮಾರ್ಗವಾಗಿ ಬೆಳಗ್ಗೆ 8.30ಕ್ಕೆ ಹರಿಹರದಿಂದ ಹೊಸಪೇಟೆಗೆ ತೆರಳುತ್ತಿದ್ದ ಮತ್ತು ಮಧ್ಯಾಹ್ನ 11.55 ಬಳ್ಳಾರಿಯಿಂದ ದಾವಣಗೆರೆಗೆ ಹೋಗುತ್ತಿದ್ದ ಡೆಮೋ ಹಾಗೂ ಸಂಜೆ 4 ಗಂಟೆಗೆ ದಾವಣಗೆರೆಯಿಂದ ಬಳ್ಳಾರಿ ಹೋಗುತ್ತಿದ್ದ ಡೆಮೋ ಮತ್ತು 7 ಗಂಟೆಗೆ ಹೊಸಪೇಟೆಯಿಂದ ಹರಿಹರಕ್ಕೆ ರೈಲುಗಳ ಸಂಚಾರವನ್ನು 30 ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಮಧ್ಯಾಹ್ನ ಮಾತ್ರ ಕಾಮಗಾರಿ ನಡೆಯುವುದರಿಂದ ವಿಜಯಪುರದಿಂದ ರಾತ್ರಿ 10 ಗಂಟೆಗೆ ಕೊಟ್ಟೂರು ಮೂಲಕ ಯಶವಂತಪುರಕ್ಕೆ ಹೋಗುತ್ತಿದ್ದ ಮತ್ತು ಬೆಳಗಿನ ಜಾವ 3 ಗಂಟೆಗೆ ಯಶವಂತಪುರದಿಂದ ಬರುತ್ತಿದ್ದ ವಿಜಯಪುರ ರೈಲು ಸಂಚಾರ ಎಂದಿನಂತೆ ಮುಂದುವರಿದಿದೆ.