ಸಮಸ್ಯೆಆಲಿಕೆ । ಕಟ್ಟಡ ಕಾರ್ಮಿಕರ ಸಂಘ ದೂರು ಹಿನ್ನೆಲೆ ಆಯೋಜನೆ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಕಾರ್ಮಿಕ ನಿರೀಕ್ಷಕರ ವೃತ್ತ ಕಚೇರಿಯಲ್ಲಿ ಕಾರ್ಮಿಕರ ಕುಂದುಕೊರತೆಗಳ ಸಭೆಯನ್ನು ಏರ್ಪಡಿಸಲಾಗಿತ್ತು.
ತಾಲೂಕಿನ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗು ಅಸಂಘಟಿತ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕು ಕನ್ನಡ ನಾಡು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬೋಜಕುಮಾರ್ ಮುಖ್ಯಮಂತ್ರಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದ ಹಿನ್ನೆಲೆ ಕಾರ್ಮಿಕರ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು.ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಗುರು ಪ್ರಸಾದ ಎಚ್.ಎಲ್. ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಭೇಟಿ ನೀಡಿ ಕಾರ್ಮಿಕರ ಹಾಗು ವಿವಿದ ಕಾರ್ಮಿಕ ಸಂಘದ ಕುಂದುಕೊರತೆಗಳ ಬಗ್ಗೆ ಆರೋಪ, ಪ್ರತ್ಯಾರೋಪವನ್ನು ಆಲಿಸಿದರು.
ಕನ್ನಡ ನಾಡು ಕಾರ್ಮಿಕ ಸಂಘದ ಅಧ್ಯಕ್ಷರು ಕೆಲ ಕಾರ್ಮಿಕ ವರ್ಗದವರು ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರೆ, ಬಹುಪಾಲು ಕಾರ್ಮಿಕ ವರ್ಗದವರು ಹಾಗೂ ಸಂಘದ ಪದಾಧಿಕಾರಿಗಳು ಎಲ್ಲಾ ರೀತಿಯಲ್ಲೂ ಉತ್ತಮವಾಗಿ ಸ್ಪಂದಿಸುತ್ತಿದ್ದು ಇಂತಹ ಪ್ರಾಮಾಣಿಕ ಅಧಿಕಾರಿಗಳು ಹೀಗೆ ಮುಂದುವರೆಯಬೇಕು ಎಂದು ಪ್ರತ್ಯಾರೋಪ ಮಾಡಿದರು.ಈ ವೇಳೆ ಮಲೆನಾಡು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಮುಮ್ತಾಜ್, ಖಜಾಂಚಿ ವಿಜಯ್ ಆಚಾರ್ಯ, ಕೆಡಿಪಿ ಸದಸ್ಯರಾದ ಸುಹಿಲ್ ಪಾಷ, ನಂದೀಶ್, ನವೀನ್, ಜ್ಯೋತಿ, ಸವಿತಾ ಸಮಾಜದ ಪದಾಧಿಕಾರಿಗಳು, ಹೊಯ್ಸಳ ಪೈಂಟರ್ಸ್ ಸಂಘದ ಅಧ್ಯಕ್ಷ ಭರತ್, ವಿವಿದ ಕಾರ್ಮಿಕ ಸಂಘದ ಪದಾಧಿಕಾರಿಗಳು, ಕಾರ್ಮಿಕರು ಹಾಜರಿದ್ದರು.
ಅರ್ಹ ಕಾರ್ಮಿಕರಿಗೆ ಸವಲತ್ತು ಸಿಗಬೇಕುಅನರ್ಹ ಕಾರ್ಮಿಕರ ಕಾರ್ಡುಗಳನ್ನು ಪತ್ತೆ ಹಚ್ಚಿ ಅಂಥವರ ವಿರುದ್ಧ ಶಿಸ್ತು ಕ್ರಮಗಳನ್ನು ಕೈಗೊಂಡು ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಪಡಬೇಕು, ಈಗಾಗಲೇ ನಮಗೆ ತಿಳಿದಿರುವಂತೆ ತಾಲೂಕಿನಲ್ಲಿ ಬಹುತೇಕ ಅನರ್ಹರು ಕಾರ್ಡುಗಳನ್ನು ಪಡೆಯುತ್ತಿದ್ದು ಅಂಥವರ ಬಗ್ಗೆ ಕೂಲಂಕಷವಾಗಿ ದಾಖಲೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ಕಾರ್ಡುಗಳನ್ನು ರದ್ದುಪಡಿಸಬೇಕು. ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾರ್ಮಿಕರ ಮಾಹಿತಿಯನ್ನು ಪ್ರಕಟಿಸಿದ್ದಲ್ಲಿ ಬಹುತೇಕ ಅನರ್ಹ ಕಾರ್ಡುದಾರರ ಮಾಹಿತಿ ಸುಲಬವಾಗಿ ಪತ್ತೆಯಾಗುತ್ತದೆ ಎಂದು ಕೆಡಿಪಿ ಸದಸ್ಯರು ಅಧಿಕಾರಿಗಳಿಗೆ ಸಲಹೆ ನೀಡಿದರು.