ಕಾರ್ಮಿಕರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಿರಿ

KannadaprabhaNewsNetwork | Published : Jun 1, 2025 2:25 AM
ರಾಜ್ಯ ಸರ್ಕಾರವು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಯನ್ನು ರೂಪಿಸಿದೆ

ಕನ್ನಡಪ್ರಭ ವಾರ್ತೆ ಶಿರಾ ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಯನ್ನು ರೂಪಿಸಿದೆ. ಅಸಂಘಟಿತ ಕಾರ್ಮಿಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ನಗರಸಭೆ ಸದಸ್ಯ ಜಾಫರ್ ಹೇಳಿದರು.ಅವರು ನಗರದ ಹಳೆ ಸರಕಾರಿ ಆಸ್ಪತ್ರೆಯ ಬಳಿ ಲಾರಿ ಚಾಲಕರ ಸಂಘ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ, ಅಂಗವಿಕಲರ ಸಂಘದ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕ್ಷೇಮಾಭಿವೃದ್ಧಿ ಮಂಡಳಿ ನೊಂದಣಿ ಅಭಿಯಾನ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಹನ ಚಾಲಕರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್ ಮಾಡಿಸಿಕೊಳ್ಳಬೇಕು ಎಂದ ಅವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ೧೦೦ ಮಂದಿಗೆ ತಾವು ಹಣ ಭರಿಸುವುದಾಗಿ ತಿಳಿಸಿದರು.ಮಧುಗಿರಿ ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀಕಾಂತ್ ಮಾತನಾಡಿ ಅಸಂಘಟಿತ ಕಾರ್ಮಿಕರಾದ ಚಾಲಕರು, ನಿರ್ವಾಹಕರು, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮೋಟಾರು ಗ್ಯಾರೇಜುಗಳಲ್ಲಿ ಟೈರ್ ಜೋಡಿಸುವವರು, ಬೇರ್ಪಡಿಸುವ ಘಟಕಗಳಲ್ಲಿ, ಪಂಚರ್ ದುರಸ್ತಿ ಮಳಿಗೆಗಳಲ್ಲಿ, ವೀಲ್ ಬ್ಯಾಲೆನ್ಸಿಂಗ್ ಮತ್ತು ಅಲೈನ್ಮೆಂಟ್ ಘಟಕಗಳಲ್ಲಿ, ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ, ಟಿಂಕರಿಂಗ್, ಎಲೆಕ್ಟ್ರಿಕಲ್ ಹಾಗೂ ಎಸಿ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು ೪೦ ಲಕ್ಷ ಕಾರ್ಮಿರಿದ್ದರು, ಎಲ್ಲರೂ ಈ ಯೋಜನೆಯಡಿ ನೊಂದಾಯಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. ಇದರಿಂದ ಅಪಘಾತ ಪರಿಹಾರ ಸೌಲಭ್ಯ, ಶೈಕ್ಷಣಿಕ ಸಹಾಯಧನ, ಹೆರಿಗೆ ಭತ್ಯೆ ಸೇರಿದಂತೆ ಹಲವು ಅನುಕೂಲಗಳಿಗೆ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು. ಶಿರಾ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸಿದ್ದೇಶ್ವರ್ ಮಾತನಾಡಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕ್ಷೇಮಾಭಿವೃದ್ಧಿ ಮಂಡಳಿ ಆಟೋ ಚಾಲಕರಿಗೆ ಸಂಜೀವಿನಿಯಾಗಿದೆ. ಈ ಹಿಂದೆ ಆಟೋ ಚಾಲಕರಿಗೆ ಅಪಘಾತವಾದಾಗ ಯಾವುದೇ ಸಹಾಯಧನ ಇರಲಿಲ್ಲ. ಈ ಯೋಜನೆಯಡಿ ನೊಂದಾನಿಸಿಕೊಂಡು ಅನುಕೂಲ ಪಡೆಯಿರಿ ಎಂದರು.ಈ ಸಂದರ್ಭದಲ್ಲಿ ಜೋಹಾರ್ ಗ್ರೂಪ್‌ ಅಧ್ಯಕ್ಷ ಸೈಯದ್ ಎಕ್ಬಾಲ್ ಸಾಬ್, ನಗರಸಭಾ ಸದಸ್ಯ ಇರ್ಷಾದ್ ಪಾಷಾ, ಕಟ್ಟಡ ಕಾರ್ಮಿಕರ ಸಂಘದ ಸೈಯದ್ ಸಾದತ್, ಕಾರ್ಮಿಕ ಇಲಾಖೆಯ ಹರೀಶ್, ಲಾರಿ ಚಾಲಕರ ಟ್ರೇಡ್ ಯುನಿಯನ್ ಅಧ್ಯಕ್ಷ ತಬ್ರೇಜ್, ಲಾರಿ ಚಾಲಕರ ಸಂಘದ ಅಧ್ಯಕ್ಷ ನಾಸೀರ್ ಖಾನ್, ಅಂಗವಿಕಲರ ಒಕ್ಕೂಟದ ರಿಯಾಜ್ ಪಾಷ ಸೇರಿದಂತೆ ಹಲವರು ಹಾಜರಿದ್ದರು.