ಕನಕಗಿರಿ: 2026ರ ಕನಕಗಿರಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳು ಹಾಗೂ ಜವಾಬ್ದಾರಿ ವಹಿಸಿರುವ ಸಮಿತಿಯವರು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಸೂಚಿಸಿದರು.
ಉತ್ಸವಕ್ಕೆ ಕಳೆ ತರುವ ಕಲಾವಿದರಿಗೆ ಗೌರವ ಸಮರ್ಪಣೆಗೆ ಬೇಕಾದ ಎಲ್ಲ ಸಾಮಗ್ರಿ ಹೊಂದಿಸಿಕೊಳ್ಳಬೇಕು. ಕಾರ್ಯಕ್ರಮ ನಡೆಯುವಾಗ ಗೊಂದಲ ಮಾಡಿಕೊಳ್ಳಬಾರದು. ಉತ್ಸವದಲ್ಲಿ ಭಾಗಿಯಾದ ಎಲ್ಲ ಕಲಾವಿದರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಬೇಕು ಎಂದು ಸಾಂಸ್ಕೃತಿಕ ಸಮಿತಿಗೆ ಆದೇಶಿಸಿದರು.
ಇನ್ನೂ ಸಮಿತಿವಾರು ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅತಿಥಿಗಳ ಸ್ವಾಗತ, ವಸತಿ, ಊಟ, ಸಾರಿಗೆ, ಗಣ್ಯರಿಗೆ ಸನ್ಮಾನ, ಶಿಷ್ಟಾಚಾರದ ಬಗ್ಗೆ ಗಮನ ಹರಿಸಲು ಸಹಾಯಕ ಆಯುಕ್ತರ ಅಧ್ಯಕ್ಷತೆಯ ಸ್ವಾಗತ ಸಮಿತಿಗೆ ಸೂಚನೆ ನೀಡಿದರು. ಜನಸಂದಣಿ ನಿಯಂತ್ರಣಕ್ಕಾಗಿ ನಗರದ ಅಲ್ಲಲ್ಲಿ ಬ್ಯಾರಿಕೆಡ್ ಹಾಕಬೇಕು. ಜತೆಗೆ ಮುಖ್ಯ ವೇದಿಕೆಯ ಮುಂಭಾಗ, ಅಕ್ಕ-ಪಕ್ಕದಲ್ಲಿ ವ್ಯವಸ್ಥೆ ಮಾಡಬೇಕು ಎಂದು ವೇದಿಕೆ ಸಮಿತಿಗೆ ಸೂಚನೆ ನೀಡಿದರು.ಎಪಿಎಂಸಿ ಆವರಣದ ಓಪನ್ ಶೆಡ್ ನಲ್ಲಿ ಉತ್ಸವ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಆಹಾರ ತಯಾರಿಸುವಾಗ ಜಾಗೃತಿವಹಿಸಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು. ಆಹಾರ ಶುಚಿ, ರುಚಿಯ ಬಗ್ಗೆ ಕಾಳಜಿ ವಹಿಸಬೇಕು. ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ತಂಡಗಳ ರಚಿಸಿ ಎಲ್ಲರಿಗೂ ಊಟ ಬಡಿಸುವಂತಾಗಬೇಕು ಎಂದು ಆಹಾರ ಸಮಿತಿಗೆ ಸೂಚಿಸಿದರು.
ಇನ್ನೂ ಹೆಲಿಕ್ಯಾಪ್ಟರ್ ರೈಡಿಂಗ್ ಕಾರ್ಯವು ಸುರಕ್ಷಿತ ಕ್ರಮಗಳೊಂದಿಗೆ ಹಾರಾಟ ನಡೆಸಲು ಮುಂದಾಗಬೇಕು. ಇನ್ನೂ ವೇದಿಕೆಯ ಮುಂಭಾಗದಲ್ಲಿ ತಾತ್ಕಾಲಿಕ ಒಪಿಡಿ ತೆರೆಯಬೇಕು. ನಗರದ ಸ್ವಚ್ಛತೆ ಮತ್ತು ವೇದಿಕೆ ಪ್ರದೇಶದಲ್ಲಿ ಮರಮು ಹಾಕಿಸಿ ನೆಲ ಸಮತಟ್ಟುಗೊಳಿಸಬೇಕು. ದುರಸ್ಥಿಗೊಂಡ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು. ಸಾರ್ವಜನಿಕರಿಗಾಗಿ ನಳ ಹಾಗೂ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲು ಸೂಚಿಸಿದರು.
35 ಸಾವಿರ ಚೇರ್ ವ್ಯವಸ್ಥೆ: ಮುಖ್ಯ ವೇದಿಕೆಯಾಗಿರುವ ರಾಜಾ ಉಡಚಪ್ಪ ನಾಯಕ ವೇದಿಕೆಯ ಮುಂಭಾಗದಲ್ಲಿ 35 ಸಾವಿರ ಆಸನ ಹಾಕಬೇಕು. ಕಳೆದ ಬಾರಿ 25 ಸಾವಿರ ಹಾಕಲಾಗಿತ್ತು. ಈ ಬಾರಿ 10 ಸಾವಿರಕ್ಕೂ ಹೆಚ್ಚು ಮಾಡಬೇಕು. ವೇದಿಕೆ ಸಂಪೂರ್ಣವಾಗಿ ಬೆಳಕಿನಿಂದ ಕೂಡಿರಬೇಕು ಎಂದು ವೇದಿಕೆ ಸಮಿತಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.