ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ವಿವಿಧ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಸ್ವಚ್ಛ ನಗರವನ್ನಾಗಿ ರೂಪಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ರು. 76 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ ಹೇಳಿದರು.ಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದ ಎದುರು, ಗೌರಿಘಟ್ಟದ ಬೀದಿ, ತೋಪಿನ ಬೀದಿಗಳಲ್ಲಿ 76 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇಗುಲಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ, ಅವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನಗರಸಭೆಯ ರಾಜ್ಯ ವಿಪತ್ತು ಉಪಶಮನ (ಎಸ್.ಡಿ.ಎಮ್.ಎಫ್) ದೇವಾಲಯದ ಆಸು -ಪಾಸಿನಲ್ಲಿರುವ ಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದ ಎದುರು 20 ಲಕ್ಷ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಎತ್ತರಿಸುವ ಕಾಮಗಾರಿಯನ್ನು ನಡೆಸಲಾಗುವುದು, ಅಲ್ಲದೆ ಗೌರಿಘಟ್ಟದ ಬೀದಿಯಲ್ಲಿ 16 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಎತ್ತರಿಸುವ ಕಾಮಗಾರಿ, ತೋಪಿನ ಬೀದಿಯಲ್ಲಿ 20 ಲಕ್ಷ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಎತ್ತರಿಸುವ ಕಾಮಗಾರಿಯನ್ನು ನಿರ್ವಹಿಸಲಾಗುವುದು ಅಲ್ಲದೆ ಹಳ್ಳದಕೇರಿ ಬಡಾವಣೆಯಲ್ಲಿ 20 ಲಕ್ಷ ವೆಚ್ಚದಲ್ಲಿ ರಿಟೇನಿಂಗ್ ವಾಲ್, ಮತ್ತು ಚರಂಡಿ ರಸ್ತೆ ಎತ್ತರಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.ಈ ಭಾಗದಲ್ಲಿ ಕಪಿಲಾ ನದಿಯ ಪ್ರವಾಹಕ್ಕೆ ತುತ್ತಾಗಿ ದೇವಾಲಯಗಳು ಮತ್ತು ದೇವಾಲಯದ ಬಡಾವಣೆಗಳು ಮುಳುಗಡೆಯಾಗುವುದನ್ನು ತಪ್ಪಿಸಲು ಈ ಕಾಮಗಾರಿಗಳು ಅನುಕೂಲವಾಗಲಿದೆ ಎಂದರು.
14ನೇ ವಾರ್ಡ್ ನಗರಸಭಾ ಸದಸ್ಯರಾದ ಪ್ರದೀಪ್, ನಾಲ್ಕನೇ ವಾರ್ಡ್ ಸದಸ್ಯ ಎನ್. ಯೋಗೀಶ್, 23ನೇ ವಾರ್ಡ್ ಸದಸ್ಯ ಎನ್.ಎಸ್. ಯೋಗೀಶ್, ಮುಖಂಡರಾದ ಶಿವಕುಮಾರ್, ಎನ್. ಶ್ರೀನಿವಾಸ್, ಪ್ರಕಾಶ್, ನಗರಸಭಾ ಮಾಜಿ ಸದಸ್ಯೆ ಮಂಗಳ ಗೌರಿ, ಸುರೇಶ್, ವೆಂಕಟೇಶ್, ನಗರಸಭಾ ಎಇಇ ಸಮಂತ್, ಎಇ ಪ್ರತಿಮಾ ಇದ್ದರು.