ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜದಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಸ್ವಯಂ ಆತ್ಮರಕ್ಷಣೆಗೆ ಕರಾಟೆ ಕಲಿಯಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.ಮೈವಿವಿ ಸ್ಪೋರ್ಟ್ ಪೆವಿಲಿಯನ್ ನಲ್ಲಿ ಮೈಸೂರು ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ ವಿಶ್ವ ಕರಾಟೆ ದಿನದ ಸಮಾರಂಭದಲ್ಲಿ ಮಾತನಾಡಿ, ಸಾಂಸ್ಕೃತಿಕ ನಗರಿ, ಮಹಾರಾಜರು ಕಟ್ಟಿರುವ ಸುಂದರವಾದ ನಗರದಲ್ಲಿ ವಿಶ್ವ ಕರಾಟೆ ದಿನ ಆಯೋಜಿಸಿರುವುದು ಸಂತೋಷವಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳ ಜತೆಗೆ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಪ್ರಮುಖ ಕ್ರೀಡೆಯಾದ ಕರಾಟೆ ಕಲಿಸಬೇಕು ಎಂದರು.
ಸಮಾಜದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಜನರು ಕೆಲವೊಮ್ಮೆ ಪುಂಡರ ಹಾವಳಿಯಿಂದ ಅಶಕ್ತರಾಗಿ ಬಿಡುತ್ತಾರೆ. ಭಯೋತ್ಪಾದಕರ ವಿರುದ್ಧ ಹೋರಾಟ ಮಾಡಿದ ಸಿಂಧೂರದಂತೆ ಸ್ವಯಂರಕ್ಷಣೆಗೆ ಕರಾಟೆ ಕಲಿಯಬೇಕು. ಇದರಿಂದಾಗಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ದೇಶಿಯ ಕ್ರೀಡೆಯಾಗಿರುವ ಕರಾಟೆ ಅಭ್ಯಾಸ ಮಾಡಿದರೆ ಜೀವನದಲ್ಲಿ ಶಿಸ್ತು, ಶಕ್ತಿ, ಆರೋಗ್ಯ, ಶಿಕ್ಷಣ ದೊರೆಯಲಿದೆ ಎಂದರು.ಕರಾಟೆಯನ್ನು ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಸಮಾಜದಲ್ಲಿ ಪುಂಡರ ಹಾವಳಿ, ನಿಶ್ಯಕ್ತರಾಗಿದ್ದಾರೆ. ಸಿಂಧೂರ ಸ್ವಯಂ ರಕ್ಷಣೆಗೆ ಕರಾಟೆ ಕಲಿಯಬೇಕು. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಟಿವಿ, ಪೇಪರ್ ನೋಡಿದರೆ ದರೋಡೆ, ಕಳ್ಳತನದ ಅಪರಾಧಗಳನ್ನು ನೋಡುತ್ತಿದ್ದೇವೆ. ಸಣ್ಣ ಸಣ್ಣ ವಿಚಾರಗಳಲ್ಲೂ ವಂಚನೆ ನಡೆಯುತ್ತವೆ. ಇಂದು ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಅವರು ಹೇಳಿದರು.
ದಸರಾ ಮಹೋತ್ಸವದ ವೇಳೆ ನಡೆಯುವ ಕ್ರೀಡಾ ದಸರೆಯಲ್ಲಿ ಕರಾಟೆ ಸ್ಪರ್ಧೆ ಆಯೋಜಿಸಿ ರಾಷ್ಟ್ರದ ಗಮನ ಸೆಳೆಯಬೇಕು. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದು ಮೈಸೂರಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು.ಯದುವೀರ್ ಬಗ್ಗೆ ಶಹಬ್ಬಾಸ್ ಗಿರಿ
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚುನಾವಣೆಯಲ್ಲಿ ನಿಂತಾಗ ಅನೇಕರು ಕುಹಕದ ಮಾತುಗಳನ್ನಾಡಿದರು. ಅರಮನೆ ಒಳಗೆ ಇರುವ ಮಹಾರಾಜರು ಎಲ್ಲಿ ಬರುತ್ತಾರೆಂದು ಚುನಾವಣೆಯಲ್ಲಿ ಹೇಳುತ್ತಿದ್ದರು. ಮನೆಗೆ ಬರುವುದು ಇರಲಿ, ನಿಮ್ಮ ಊರಿಗೆ ಬರುವುದಿಲ್ಲ ಎನ್ನುತ್ತಿದ್ದರು. ಆದರೆ, ಈಗ ಒಬ್ಬ ರಾಜಕಾರಣಿಯಾಗಿ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ ರಾಜ್ಯ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆದರೂ ಭಾಗಿಯಾಗುತ್ತಾರೆ ಎಂದರು.ಸಮಾರಂಭ ಉದ್ಘಾಟಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕರಾಟೆ ಎಂಬುದು ಒಂದು ಶಿಸ್ತು ಬದ್ದ ಕ್ರೀಡೆಯಾಗಿದೆ. ವಿಶ್ವಮಟ್ಟದಲ್ಲಿ ಕರಾಟೆ ಅತಿ ಪ್ರಖ್ಯಾತವಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಮಲ್ಲಿಕ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ವೆಂಕಟೇಶ್, ಉಪ ನಿರ್ದೇಶಕ ಕೃಷ್ಣಯ್ಯ, ಜೆಡಿಎಸ್ ಮುಖಂಡ ಸುರೇಶ್, ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಎಸ್. ಸುನಿಲ್ ಕುಮಾರ್, ಕಾರ್ಯದರ್ಶಿ ಭಾರತಿ, ಆನಂದ್ ಇದ್ದರು.