ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

KannadaprabhaNewsNetwork | Published : Jun 23, 2025 11:49 PM

ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು.ಆಪ್ತ ಸಮಾಲೋಚಕಿ ಡಾ. ಮಂಜುಳಾ ರಾವ್‌ ದೀಪ ಬೆಳಗಿಸಿ ಉದ್ಘಾಟಿಸಿ, ಮಕ್ಕಳು ಮೊಬೈಲ್ ಅನ್ನು ಸ್ವಲ್ಪ ದೂರ ಇಟ್ಟು ದೈಹಿಕ ಚಟುವಟಿಕೆಗಳಿಗೆ ಜಾಸ್ತಿ ಒತ್ತು ನೀಡಬೇಕು. ದಿನಾ ಬೆಳಗ್ಗೆ ಎದ್ದು ಪ್ರಾಣಾಯಾಮ ಎಂಬ ಉಸಿರಾಟದ ಯೋಗ ಮಾಡಬೇಕು. ಇದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸಿ ಮಾನಸಿಕ ಸ್ಥಿರತೆಯನ್ನು ಪಡೆಯಬಹುದು ಎಂದರು. ವಿದ್ಯಾರ್ಥಿಗಳಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಕೆಲವು ಸರಳ ವ್ಯಾಯಾಮವನ್ನು ಈ ಸಂದರ್ಭ ತಿಳಿಸಿಕೊಟ್ಟರು.ಕ್ರೀಡಾ ಭಾರತಿ ನಿಕಟಪೂರ್ವ ಅಧ್ಯಕ್ಷ ಕರಿಯಪ್ಪ ರೈ ಮಾತನಾಡಿ, ಯೋಗ ನಮ್ಮ ಜೀವನಕ್ಕೆ ತುಂಬಾ ಮುಖ್ಯವಾದದ್ದು, ಯೋಗ ಮಾಡುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆದು ಈ ದೇಶದ ಸಂಪತ್ತು ನಾವಾಗಬೇಕು ಎಂದರು.ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ. ಮಾತನಾಡಿ, ಯೋಗ ಕೇವಲ ಒಂದೆರಡು ದಿನ ಮಾಡಿದರೆ ಸಾಲದು, ಅದನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಯೋಗದ ನಿಜವಾದ ಪ್ರಯೋಜನ ನಮಗೆ ದೊರಕಲು ಸಾಧ್ಯವಾಗುವುದು ಎಂದರು.ದೇಲಂಪಾಡಿ ಯೋಗ ಪ್ರತಿಷ್ಠಾನ ಯೋಗ ತರಬೇತುದಾರರಾದ ಸುಭದ್ರ ಹಾಗೂ ವೀಣಾ ಮಾರ್ಲ ಯೋಗವನ್ನು ನೆರವೇರಿಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ಇದ್ದರು.ಶಕ್ತಿ ವಸತಿ ಶಾಲೆಯ ಪ್ರತಿಭಾನ್ವಿತ ಪುಟಾಣಿಗಳಿಂದ ಯೋಗ ಪ್ರದರ್ಶನ ನಡೆಯಿತು.ಶಕ್ತಿ ವಸತಿ ಶಾಲೆಯ ಶಿಕ್ಷಕಿ ಭವ್ಯಶ್ರೀ ಸ್ವಾಗತಿಸಿದರು. ಕ್ರೀಡಾ ಭಾರತಿ ನಿಕಟಪೂರ್ವ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರು ವಂದಿಸಿದರು. ಶಕ್ತಿ ವಸತಿ ಶಾಲೆಯ ಶಿಕ್ಷಕ ಶರಣಪ್ಪ ನಿರೂಪಿಸಿದರು.

----------------