ಕನ್ನಡಪ್ರಭ ವಾರ್ತೆ ಚಿಂಚೋಳಿ
ಜನ್ಮ ನೀಡಿದ ಹೆತ್ತ ತಾಯಿಯವರ ಪಾದವೇ ದೇವರೆಂದು ಪೂಜಿಸಬೇಕು. ತಾಯಿ ಪ್ರೀತಿ ಇದ್ದರೆ ಶ್ರೀರಕ್ಷೆ ಅದುವೇ ಆರ್ಶೀವಾದ. ಪರಮಾತ್ಮನು ಕೈಲಾಸದಲ್ಲಿ ಇದ್ದಾನೆ ಎಂದು ಹೇಳುತ್ತಾರೆ. ಭಕ್ತರು ಪ್ರೀತಿಯಿಂದ ಧ್ಯಾನ ಮಾಡಿದರೆ ಅವರಲ್ಲಿ ದೇವರು ಕಾಣಬಹುದು. ತನು, ಮನ ಧನದಿಂದ ದೇವರನ್ನು ಧ್ಯಾನಿಸಿದರೆ ಅವರ ಹೃದಯ ಮಂದಿರದಲ್ಲಿ ಸ್ಥಿರಸ್ಥಾಯಿ ಇರುತ್ತಾನೆ ಎಂದು ಹಾರಕೂಡ ಮಠದ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು ನುಡಿದರು.ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಡಾ. ಬಸವಲಿಂಗ ಅವದೂತರವರ ೧೨ನೇ ಜಾತ್ರೆ ಮಹೋತ್ಸವದ ಅಂಗವಾಗಿ ಜಗನ್ಮಾತೆ ಅಕ್ಕಮಹಾದೇವಿಯವರ ತೊಟ್ಟಿಲ ಕಾರ್ಯಕ್ರಮ ಉದ್ಘಾಟಿಸಿ ಭಕ್ತರಿಗೆ ಆರ್ಶೀವಚನ ನೀಡಿದರು.ಒಳ್ಳೆಯ ಕಾರ್ಯವನ್ನು ಮಾಡಿ ಜೀವನ ಸಾಗಿಸಿ. ಮಾನವ ದೇಹವು ಶಾಶ್ವತವಲ್ಲ ಪರೋಪಕಾರ ಕಾರ್ಯವನ್ನು ಮಾಡಿದರೆ ಜೀವನದಲ್ಲಿ ಬೆಲೆ ಇರುತ್ತದೆ. ಕಷ್ಟಗಳು ಬಂದರು ಸಹಾ ದೂರ ಮಾಡುವ ಶಕ್ತಿ ಸದ್ಗುರುವಿಗೆ ಇದೆ. ಜೀವನ ಮುಕ್ತಿ ಆಗಬೇಕಾದರೆ ಬೆಳಗಿನ ಜಾವ ಮುನ್ನ ಮಹಾತ್ಮರ ಭಾವಚಿತ್ರ ನೋಡಿದರೆ ೧೨ ಜ್ಯೋರ್ತಿಲಿಂಗ ನೋಡಿದಂತಾಗುತ್ತದೆ. ತನುಮನಧನದಿಂದ ಗುರುವಿನ ಧ್ಯಾನ ಮಾಡಿದರೆ ಅಲ್ಲಿ ಗುರುವಿನ ಆರ್ಶೀವಾದ ಸಿಗುತ್ತದೆ. ಪ್ರೀತಿ ಶ್ರದ್ಧೆಯಿಂದ ದೇವರ ಸ್ಮರಣೆ ಮಾಡಿದರೆ ದೇವರು ಒಲಿಯುತ್ತಾನೆ ಎಂದರು.
ಬಸವಲಿಂಗ ಅವದೂತರು ಸಾನ್ನಿಧ್ಯ ವಹಿಸಿ ಮಾತನಾಡಿ, ಜನ್ಮ ನೀಡಿದ ತಂದೆ ತಾಯಿಗಳಿಗೆ ಪ್ರೀತಿ ಮತ್ತು ಗೌರವದಿಂದ ಕಾಣಿರಿ ದುಶ್ಚಟಗಳಿಂದ ದೂರ ಇರಬೇಕು. ನಿಮ್ಮ ಜೀವನಕ್ಕೆ ನೀವೇ ಶಿಕ್ಷಕರಾಗಬೇಕು. ಮನದಲ್ಲಿ ಕೆಟ್ಟ ವಿಚಾರಗಳು ಇರಬಾರದು. ದೇಗಲಮಡಿ ಗ್ರಾಮದಲ್ಲಿ ಕಳೆದ ೧೨ವರ್ಷಗಳಿಂದ ಜಾತ್ರೆ ಸಮಾರಂಭ ನಡೆಯುತ್ತಿದೆ. ಅಕ್ಕಮಹಾದೇವಿ ತೊಟ್ಟಿಲು ಮತ್ತು ಶ್ರೀಶೈಲ ಮಲ್ಲಿಕಾರ್ಜುನ ರಥೋತ್ಸವ ನಡೆಯುತ್ತಿದೆ. ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಭಕ್ತಿ ಸೇವೆ ಸಮರ್ಪಿಸುತ್ತಿದ್ದಾರೆ. ದೇವರು ನಿಮ್ಮೆಲ್ಲರಿಗೂ ಆಶೀರ್ವಾದ ಇರಲಿ ಎಂದು ಹಾರೈಸಿದರು.