ಶಿಕಾರಿಪುರ: ಒನಕೆ ಓಬವ್ವ ಈ ನಾಡಿನ ಮಹಿಳೆಯರ ಸ್ವಾಭಿಮಾನ, ಶೌರ್ಯ, ಕರ್ತವ್ಯ ಪ್ರಜ್ಞೆಯ ಪ್ರತೀಕವಾಗಿದ್ದು, ಆಕೆಯ ಜೀವನ ಚರಿತ್ರೆ ಎಲ್ಲರಿಗೂ ತಿಳಿಸುವ ಕಾರ್ಯ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ, ಪುರಸಭೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಛಲವಾದಿ ಸಮಾಜದಿಂದ ನಡೆದ ವೀರರಾಣಿ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಒನಕೆ ಓಬವ್ವ ಶೌರ್ಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಜನಾಂಗವನ್ನು ಪ್ರೀತಿಸುವ ಮಾದರಿ ಹೆಣ್ಣು ಮಗಳಾಗಿದ್ದರು. ಕೇವಲ ರಾಜ್ಯದಲ್ಲಿಯೇ ಹೆಸರಾಗದೆ ದೇಶದಲ್ಲಿಯೇ ಹೆಚ್ಚು ಪ್ರಚಲಿತವಾಗಿರುವ ಧೀರ ಮತ್ತು ದಿಟ್ಟ ಮಹಿಳೆಯಾಗಿದ್ದರು. ನಮ್ಮ ದೇಶದ ಪ್ರಥಮ ಪ್ರಜೆ ದ್ರೌಪದಿ ಮರ್ಮು ಸಹ ಬುಡಕಟ್ಟು ಜನಾಂಗಕ್ಕೆ ಸೇರಿದವರು ಎನ್ನುವುದು ನಾವೆಲ್ಲರೂ ಹೆಮ್ಮೆಪಡುವಂತಹದ್ದು ಹಾಗೆಯೇ ಒನಕೆ ಓಬವ್ವ ದೇಶದ ಎಲ್ಲ ಜಾತಿ ಜನಾಂಗಕ್ಕೆ ಮಾದರಿಯಾಗುವಂತಹ ವ್ಯಕ್ತಿತ್ವ ಹೊಂದಿದ್ದು, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಆಗಬಾರದು. ಛಲವಾದಿ ಸಮಾಜ ಮಾತ್ರವಲ್ಲ ಎಲ್ಲ ಸಮಾಜದವರೂ ಒಟ್ಟಾಗಿ ಸೇರಿ ಜಯಂತಿ ಆಚರಣೆ ಮಾಡಬೇಕಿದೆ ಎಂದರು.
ತಾ. ಛಲವಾದಿ ಸಮಾಜದ ಅಧ್ಯಕ್ಷ ಮಾಲತೇಶ ಸರ್ಕಾರ್ ಮಾತನಾಡಿ, ಛಲವಾದಿ ಸಮಾಜ ತಾಲೂಕಿನಲ್ಲಿ ಸಣ್ಣ ಸಮಾಜವಾಗಿದ್ದು ಸಂಘಟಿತರಾಗಿ ಬದುಕಲು ಒನಕೆ ಓಬವ್ವ ಜಯಂತಿ ಕಾರಣವಾಗಿದೆ ಎಂದ ಅವರು, ತಾಲೂಕಿನಲ್ಲಿ ಸಮಾಜಕ್ಕೆ ನಿವೇಶನದ ಜತೆಗೆ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.ಇದೇ ವೇಳೆ ಮಾಜಿ ಶಾಸಕ ಡಿ.ಎಸ್.ವೀರಯ್ಯ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷೆ ಸುನಂದ ಮಂಜುನಾಥ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ರಾಜ್ಕುಮಾರ್, ತಹಸೀಲ್ದಾರ್ ಮಂಜುಳಾ ಭಜಂತ್ರಿ, ತಾ.ಪಂ. ಇಒ ಎನ್.ಜಿ.ನಾಗರಾಜ್ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.ಸಭೆಯ ಆರಂಭದಲ್ಲಿ ಒನಕೆ ಓಬವ್ವರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.