ಕನ್ನಡಪ್ರಭ ವಾರ್ತೆ ಮೈಸೂರುಹೋರಟಗಾರ್ತಿ ಡಾ. ವಿಜಯಾ ದಬ್ಬೆ ಅವರ ಬದುಕನ್ನು ಅರಿಯುವುದು ಸ್ಫೂರ್ತಿ ಹೊಂದುವ ಮಾರ್ಗ. ಅವರ ಚಿಂತನೆಗಳು ಸದಾ ಜೀವಪರವಾಗಿತ್ತು ಎಂದು ಕವಯತ್ರಿ ಪ್ರತಿಭಾ ನಂದಕುಮಾರ್ ತಿಳಿಸಿದರು.ನಗರದ ಗೋಕುಲಂನಲ್ಲಿರುವ ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್ ಸಭಾಂಗಣದಲ್ಲಿ ಸಮತಾ ಅಧ್ಯಯನ ಕೇಂದ್ರವು ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕಿ ಅನುಪಮಾ ಪ್ರಸಾದ್ ಅವರಿಗೆ (‘ಚೋದ್ಯ’ ಕಥಾ ಸಂಕಲನಕ್ಕೆ) ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಯನ್ನು ಅವರು ಪ್ರದಾನ ಮಾಡಿ ಮಾತನಾಡಿದರು.ವಿಜಯಾ ದಬ್ಬೆ ಅವರ ಹೆಸರಿನಲ್ಲಿ ಪ್ರಶಸ್ತಿ, ಸಾಹಿತ್ಯ ಸ್ಪರ್ಧೆ ಆಯೋಜಿಸುವ ಮೂಲಕ ಸಮತಾ ಅಧ್ಯಯನ ಕೇಂದ್ರವು ಉತ್ತ ಮ ಕೆಲಸ ಮಾಡುತ್ತಿದೆ. ಸಮಾಜ ಪರಿವರ್ತನೆಯ ಹೋರಾಟವನ್ನು ಮುಂದುವರಿಸಿದೆ. ಹೊಸ ತಲೆಮಾರನ್ನು ಸಜ್ಜುಗೊಳಿಸುತ್ತಿದೆ ಎಂದು ಅವರು ಶ್ಲಾಘಿಸಿದರು.ಪ್ರಶಸ್ತಿ ಪುರಸ್ಕೃತರಾದ ಅನುಪಮಾ ಪ್ರಸಾದ್ ಮಾತನಾಡಿ, ವಿಜಯಾ ದಬ್ಬೆ ಅವರ ಬರವಣಿಗೆಯು ನನ್ನ ಮೇಲೆ ಪ್ರಭಾವ ಬೀರಿದೆ, ಅನುಭವವನ್ನು ಹೊಂದುವ, ಕಥನ ಪ್ರಕ್ರಿಯೆ ರೂಪಿಸುವ ಸಾಮರ್ಥ್ಯವನ್ನು ನನ್ನಲ್ಲಿ ಬೆಳೆಸಿದೆ. ಇವತ್ತಿನ ಕಾಲದಲ್ಲಿ ನಾವು ಹೆಚ್ಚು ಎಚ್ಚರದಿಂದ ಸಮಾಜವನ್ನು ಅವಲೋಕಿಸಬೇಕು, ಸ್ಪಂದಿಸಬೇಕು ಎಂದರು. ಬಹುಮಾನ ವಿತರಣೆಇದೇ ವೇಳೆ ವಿಜಯಾ ದಬ್ಬೆ ನೆನಪಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಕೇರಳ ಕೇಂದ್ರೀಯ ವಿವಿ ವಿದ್ಯಾರ್ಥಿಗಳಾದ ದರ್ಶನ್ ಕುಮಾರ್(ಪ್ರಥಮ), ಜ್ಯೋತಿರ್ಲಕ್ಷ್ಮಿ(ದ್ವಿತೀಯ), ಬೆಂಗಳೂರಿನ ಅಚಲ ಬಿ. ಹೆನ್ಲಿ(ತೃತೀಯ) ಹಾಗೂ ಅಥಣಿಯ ಸೀಮಾ ಶಿರಗುಪ್ಪಿ, ಬೆಂಗಳೂರಿನ ವೈ.ಎಸ್. ಸುಪ್ರಿಯಾ(ತೀರ್ಪುಗಾರರ ಮೆಚ್ಚುಗೆ), ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಅಚಲ ಬಿ. ಹೆನ್ಲಿ(ಪ್ರಥಮ) ಮತ್ತು ಕುಂದಾಪುರದ ಎಸ್. ರಾಧಿಕಾ(ದ್ವಿತೀಯ) ಸ್ಥಾನ ಪಡೆದಿದ್ದು, ಇವರಿಗೆ ಕೇಂದ್ರದ ಟ್ರಸ್ಟಿ ರಾಮಕೃಷ್ಣ ಜೋಶಿ ಬಹುಮಾನ ವಿತರಿಸಿದರು.ಪ್ರಶಸ್ತಿ ತೀರ್ಪುಗಾರ, ಕಥೆಗಾರ ಆರ್.ಎಸ್. ಸ್ವಾಮಿ ಪೊನ್ನಾಚಿ, ಕೇಂದ್ರದ ಅಧ್ಯಕ್ಷೆ ಪ್ರೊ. ಸಬಿಹಾ ಭೂಮಿಗೌಡ, ಟ್ರಸ್ಟಿ ಎಂ.ಎಸ್. ಸುಮನಾ ಮೊದಲಾದವರು ಇದ್ದರು.-----------------eom/mys/shekar/