ಶಿರಸಿ: ಬರಹ ಯಾನವೆನ್ನುವುದೇ ಒಂದು ಸುಂದರ ಅನುಭವ. ಹೋರಾಟದ ವೇದಿಕೆಯಲ್ಲಿ ಬದುಕು ಅರಳಿ ಬೆಳಗಬೇಕು. ಜೀವನ ಹೂದೋಟವಾಗಿ ಅರ್ಥಪೂರ್ಣವಾಗಿ ಬಾಳಿದರೆ ಅದಕ್ಕೊಂದು ಅರ್ಥ ಬಂದು ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಡಾ. ಅಜಿತ್ ಹರೀಶಿ ತಿಳಿಸಿದರು.
ನಗರದ ರಂಗಧಾಮದಲ್ಲಿ ಸಾಹಿತ್ಯ ಸಂಚಲನ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಹಾಗೂ ನೆಮ್ಮದಿ ಓದುಗರ ಬಳಗದ ಆಶ್ರಯದಲ್ಲಿ ಕೃತಿಗಳ ಅವಲೋಕನ, ಕವಿಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸೃಜನಶೀಲತೆಯು ಕಥೆ, ಕವನ, ಸಾಹಿತ್ಯಕ್ಕೆ ಪೂರಕವಾಗಿ ಒಟ್ಟಾರೆ ಫಲಶ್ರುತಿಯೊಂದಿಗೆ ಸಾಹಿತ್ಯ ಸಮೃದ್ಧ ಬರಹಗಳು ಇಂದಿಗೂ ಎಂದೆಂದಿಗೂ ವಾಸ್ತವಿಕ ಅಂಶಗಳಿಂದ ಕೂಡಿ ಸಮಾಜ ಮುಖಿಯಾಗಿ ಮನೋಲ್ಲಾಸವನ್ನು ನೀಡುವ ಪ್ರಕ್ರಿಯೆಗೆ ನಾಂದಿ ಆಗಬೇಕು ಎಂದರು.ಜೀವನ ಸಂಕಷ್ಟಗಳ ಸರಮಾಲೆಯಾದರೂ ಅದನ್ನು ನಿವಾರಿಸಿಕೊಂಡು ಹೋಗುವಲ್ಲಿ ಜಾಣತನ, ಸಂಯಮ, ಸ್ನೇಹಶೀಲ ವ್ಯಕ್ತಿತ್ವ, ಮೌಲ್ಯಯುತ ತತ್ವ, ಮಾನವೀಯತೆ, ವಿಶ್ವಬಂಧುತ್ವವನ್ನು ರೂಢಿಸಿಕೊಳ್ಳಬೇಕು. ಇವೆಲ್ಲದಕ್ಕೂ ಸಾಹಿತ್ಯ ಬೆನ್ನೆಲುಬಾಗಿರಬೇಕು. ಸಾಹಿತ್ಯ ಚಿಂತನ-ಮಂಥನದ ವಸ್ತುವಾಗಿ ಜನಮಾನಸದಲ್ಲಿ ನೆಲೆಗೊಂಡು ವ್ಯಕ್ತಿತ್ವ ವಿಕಸನವಾಗಬೇಕು ಎಂದರು.
ಇದೇ ವೇಳೆ ಡಾ. ಅಜಿತ ಹರೀಶಿರ "ಉಪರಿ " ಕೃತಿಯ ಅವಲೋಕನ ಮಾಡಿದ ಅಪರ್ಣ ಹೆಗಡೆ ಇಟಗುಳಿ, ಮನುಷ್ಯ ತನ್ನೆಲ್ಲ ಆಸೆ-ಆಕಾಂಕ್ಷೆ, ಕಾಮನೆಗಳನ್ನು ಈಡೇರಿಸಿಕೊಳ್ಳಲು ತಿಳಿವಳಿಕೆ ರಹಿತವಾದ ಮಾರ್ಗದಲ್ಲಿ ಉಪಕ್ರಮಿಸಿ ಅನಾಹುತದ ಪರಂಪರೆಯನ್ನು ಸೃಷ್ಟಿಸುತ್ತಾನೆ. ಅರಿವು ಮುಖ್ಯ. ಅದು ಯಾವುದೇ ವಿಷಯದಲ್ಲಿ ಹೆಚ್ಚಾದರೂ ಹುಚ್ಚಿಗೆ ಕಾರಣ. ಇದನ್ನು ಕೃತಿಕಾರರು ತಮ್ಮ ಕಥೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಎಂಟು ಕಥೆಗಳಿದ್ದ ಕೂಡಿದ ಈ ’ಉಪರಿ’ ಕೃತಿ ಕೆಲವು ವೈವಿಧ್ಯತೆ, ವೈಶಿಷ್ಟ್ಯತೆಗಳಿಂದ ಹೂಡಿದ್ದು, ಓದುಗರ ಗಮನವನ್ನು ತನ್ನತ್ತ ಸೆಳೆಯಬೆಲ್ಲುದಾಗಿದೆ ಎಂದರು.ಜಿ.ಎನ್. ಬಣಗಿರ ಬಾಳ ನರ್ತಕ ಕವನ ಸಂಕಲನದ ಅವಲೋಕವನ್ನು ಚಿಂತಕ ಗಣಪತಿ ಭಟ್ಟ ವರ್ಗಾಸರ ನಡೆಸಿ, ಕವಿತ್ವ ಗುಣವೇ ಪ್ರೇರಣೆಗೆ ಕಾರಣ ಎಂದು ಹೇಳಿ, ೩೫ ಕವನಗಳಿಂದ ಅಲಂಕೃತವಾದ ಈ ಕವನ ಸಂಕಲನ ಕೃಷಿ, ಬೇಸಾಯ, ಸಾಮಾಜಿಕ ಅಂಶಗಳಿಂದ ಕೂಡಿದ್ದ ಗುಣಗ್ರಾಹ್ಯವಾಗಿದ್ದು ಸಾಹಿತ್ಯದ ದೃಷ್ಟಿಯಿಂದ ಉನ್ನತ ಸ್ಥಾನದಲ್ಲಿದೆ ಎಂದರು.
ಕಥೆಗಾರ ನಿವೃತ್ತ ಶಿಕ್ಷಕ ಜಿ.ಎನ್. ಹೆಗಡೆ ಬಣಗಿಯವರು ೧೪ ವರ್ಷಗಳ ನಂತರ ಈ ನನ್ನ ಕವನ ಸಂಕಲನ ಅವಲೋಕನೆಯಾಗಿದ್ದು ನನಗೆ ಸಂತೋಷ ತಂದಿದೆ ಎಂದರು.ಹಿರಿಯ ಕಥೆಗಾರ ಡಿ.ಎಸ್. ನಾಯ್ಕ ಗಿಡಕ್ಕೆ ನೀರೆರೆದು ಚಾಲನೆ ನೀಡಿದರು. ಡಿ.ಎಂ. ಭಟ್ ಕುಳವೆ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಜಲಜಾಕ್ಷಿ ಶೆಟ್ಟಿ, ಸುವರ್ಣ ಭಟ್, ಯಶಸ್ವಿನಿ ಶ್ರೀಧರಮೂರ್ತಿ, ಮನೋಹರ ಮಲ್ಮನೆ, ಲತಾ ಹೆಗಡೆ ಮಂಗಳಗೌರಿ ಭಟ್, ಉಮೇಶ, ದೈವಜ್ಞ, ಹನುಮಂತ ಸಾಲಿ, ಜಗದೀಶ್ ಭಂಡಾರಿ, ಅಪರ್ಣ ಹೆಗಡೆ, ಡಿ.ಎಂ.ಭಟ್ ಇವರುಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಡಾ. ಶೈಲಜಾ ಮಂಗಳೂರು ಅವರು ಜಗದೀಶ ಭಂಡಾರಿ ಅವರು ರಚಿಸಿದ ದೇವಿ ಸ್ತೋತ್ರವನ್ನು ಪ್ರಸ್ತುತಪಡಿಸಿದರು. ಸಾಹಿತ್ಯ ಸಂಚಲನದ ಅಧ್ಯಕ್ಷ ಕೃಷ್ಣ ಪದಕಿ ಸ್ವಾಗತಿಸಿದರು. ರೋಹಿಣಿ ಹೆಗಡೆ ನಿರೂಪಿಸಿದರು.