ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ಕುವೆಂಪು ಕಲಾಮಂದಿರದಲ್ಲಿ ಯಕ್ಷಸಿರಿ ನಾಟ್ಯ ವೃಂದ, ಲಯನ್ಸ್ ಸಂಸ್ಥೆ, ಬಿಂಡಿಗ ಶ್ರೀ ದೇವೀರಮ್ಮ ದೇವಸ್ಥಾನ ಸಮಿತಿ ಜಂಟಿಯಾಗಿ ಡಾ.ಜೆ.ಪಿ.ಕೃಷ್ಣೇಗೌಡರ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ‘ಮಾಯಾ ಶೂರ್ಪನಕಿ’ ತೆಂಕು ತಿಟ್ಟು ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಚಿಕ್ಕಮಗಳೂರಿನಲ್ಲಿ ಡಾ.ಜೆ.ಪಿ.ಕೃಷ್ಣೇಗೌಡರ ಸಾರಥ್ಯದಲ್ಲಿ ಸಾಂಸ್ಕೃತಿಕ ವಲಯ ತುಂಬಾ ಶ್ರೀಮಂತವಾಗಿದೆ. ಕಳೆದ 45 ವರ್ಷಗಳಿಂದ ಯಕ್ಷಗಾನಕ್ಕೆ ಪಾತ್ರಧಾರಿ ವೇಷಧಾರಿಯಾಗಿ ದುಡಿದ ಹಿರಿಯ ಕಲಾವಿದ ಶಿವಕುಮಾರ್ ಬೇಗೂರ್ ಅವರನ್ನು ಸನ್ಮಾನಿಸಿ ಗೌರವಿಸಿರುವುದು ಈ ಮೂರು ಸಾಂಸ್ಕೃತಿಕ ಸಂಘಟನೆಗಳ ಗೌರವ ಹೆಚ್ಚಳವಾಗಿದೆ ಎಂದರು.ಯಕ್ಷಗಾನ ದಶಾವತಾರ ಕಥೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಉದ್ದೇಶದಿಂದ ಹುಟ್ಟಿರುವ ಜಾನಪದ ಕಲೆಯಾಗಿದ್ದು, ಹೊಸತನಗಳಿಗೆ ಪ್ರವೇಶ ಪಡೆದುಕೊಳ್ಳುತ್ತ, ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವ ಕಲೆಯಾಗಿದೆ ಎಂದು ಹೇಳಿದರು.
ಒಂದು ವಸ್ತುವಿನ ವೈವಿದ್ಯತೆಗಳನ್ನು ಸಿಂಗಾರ ಮಾಡಿಕೊಂಡಿರುವ ಕಲೆ ಯಕ್ಷಗಾನವಾಗಿದೆ. ಜನಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಈ ಕಲೆ ಪ್ರಸಿದ್ಧಿಯಾಗಿದೆ. ಧೂಮಪಾನ, ಮದ್ಯಪಾನ, ಸಾಕ್ಷರತೆ ಮುಂತಾದವುಗಳ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಈ ಯಕ್ಷಗಾನ ಕಲೆಯನ್ನು ಬಳಸಲಾಗುತ್ತಿದೆ ಎಂದು ಹೇಳಿದರು.ಕಥೆ ಒಳಗೊಳ್ಳುವಿಕೆಯನ್ನು ಮೈಗೂಡಿಸಿಕೊಂಡು ಅಪರೂಪದ ಕಲೆಯ ಮೂಲಕ ಮಾಯಾ ಶೂರ್ಪನಕಿ ಯಕ್ಷಗಾನ ಪ್ರದರ್ಶನವಾಗುತ್ತಿದೆ ಎಂದು ಶ್ಲಾಘಿಸಿದರು.
ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, 16ನೇ ಶತಮಾನದಲ್ಲಿದ್ದ ಬಹುಮುಖ್ಯವಾದ ಕಲೆ ಯಕ್ಷಗಾನ. ಇದರಲ್ಲಿ ಗಾನ, ನಾಟ್ಯ, ಮಾತುಕತೆಯನ್ನು ಹೊಂದಿರುವ ಅದ್ಭುತವಾದ ಕಲೆಯಾಗಿದೆ ಎಂದು ಹೇಳಿದರು.ಸಾಹಿತಿ ಡಾ.ಶಿವರಾಮ್ ಕಾರಂತರು ಈ ಕಲೆಯ ಪಿತಾಮಹರಾಗಿದ್ದು, ಈ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಅಂತಹ ಅದ್ಭುತ ಕಲೆಯ ಪ್ರದರ್ಶನದಲ್ಲಿ ಸ್ಥಳೀಯ 9 ಮಹಿಳೆಯರು ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದರು.
ತಬಲ, ವಾದ್ಯ, ಹಿನ್ನೆಲೆ, ನೃತ್ಯ, ಸಂಗೀತ ಎಲ್ಲವನ್ನೂ ಮೀರಿದ ಕಲೆ ಯಕ್ಷಗಾನವಾಗಿದೆ. 21ನೇ ಶತಮಾನದಲ್ಲಿ ಕಲೆ ನಶಿಸುತ್ತಿರುವ ಈ ಸಂದರ್ಭದಲ್ಲಿ ಕಲೆಯನ್ನು ಉಳಿಸಲು ಯಕ್ಷಸಿರಿ ನಾಟ್ಯ ವೃಂದದ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.ಹಿರಿಯ ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ಯಕ್ಷ ಸಿರಿ ನಾಟ್ಯ ವೃಂದದವರ ವಾರ್ಷಿಕ ಗೌರವ ಸ್ವೀಕರಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಸ್ವಚ್ಛವಾಗಿ ಕಲಿಯುವುದರ ಜತೆಗೆ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಅದು ಯಕ್ಷಗಾನ ಕಲಿಕೆಯಿಂದ ಮಾತ್ರ ಸಾಧ್ಯ. ಭಾಷೆ ಶುದ್ಧತೆಯ ಯಕ್ಷಗಾನ ಭಾವ ಶುದ್ಧಿಗೂ ಪ್ರೇರಣೆ ನೀಡುತ್ತದೆ. ಚಿಕ್ಕಮಗಳೂರಿನ ಹವ್ಯಾಸಿ ಕಲಾವಿದರುಗಳು ವೃತ್ತಿಪರರಿಗೆ ಬೆರಗು ಮೂಡಿಸುವಂತೆ ಕಲಾವಿದರಾಗಿ ರೂಪುಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಹಿಮ್ಮೇಳನದಲ್ಲಿ ಶಾಲಿನಿ ಹೆಬ್ಬಾಳ್, ಮುರಾರಿ ಕಡಂಬಳಿತ್ತಾಯ, ವರುಣ್ ಹೆಬ್ಬಾರ್, ಮಹೇಶ್ ಕಾಕತ್ಕರ್, ಮುಮ್ಮೇಳದಲ್ಲಿ ಪರಮೇಶ್ವರ್, ಶೋಭಾ, ಅಶ್ವತ್ಥ್ಕುಲಾಲ್, ರೇಖಾ ನಾಗರಾಜರಾವ್, ಸುರೇಶ್ ಭಟ್, ಅನುರುದ್ಧ ಎಮ್. ಕಾಕತ್ಕರ್, ರವಿಶಂಕರ ಭಟ್, ವೈಷ್ಣವಿ ಎನ್.ರಾವ್, ಅಪೂರ್ವ ವೆಂಕಟೇಶ್, ಪೂರ್ಣಿಮಾ, ಶ್ರೀವತ್ಸ, ರಮ್ಯ, ಸುರಭಿ, ಹಿಮಗಿರಿ, ಸೌಮ್ಯ ವಿರೇಂದ್ರ ಭಾಗವಹಿಸಿದ್ದರು.ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ಎನ್. ಕುಮಾರ್, ಮಾಜಿ ಅಧ್ಯಕ್ಷ ಜಿ.ರಮೇಶ್, ಗಾಯಕ ಮಲ್ಲಿಗೆ ಸುಧೀರ್, ಡಾ. ಸಿ.ಕೆ. ಸುಬ್ರಾಯ, ನಾಗರಾಜ್ ರಾವ್ ಕಲ್ಕಟ್ಟೆ, ರಮೇಶ್ ಬೇಗಾರ್, ಅಣ್ಣಾವೇಲು ವೆಂಕಟೇಶ್, ಗೋಪಿಕೃಷ್ಣ, ಯಕ್ಷಗಾನ ಅಭಿಮಾನಿ ಬಳಗದ ಸುರೇಂದ್ರ ಶೆಟ್ಟಿ, ಗಾಯಕ ಎಂ.ಎಸ್.ಸುಧೀರ್ ಹಾಜರಿದ್ದರು.