ಯಕ್ಷಗಾನಕ್ಕೆ ಸಿಗುತ್ತಿರುವ ಪ್ರಾದಾನ್ಯತೆ ಬಯಲಾಟಕ್ಕಿಲ್ಲ

KannadaprabhaNewsNetwork | Published : Sep 13, 2024 1:33 AM

ಸಾರಾಂಶ

ಯಕ್ಷಗಾನಕ್ಕೆ ಸಿಗುತ್ತಿರುವ ಪ್ರಾದಾನ್ಯತೆ ಬಯಲಾಟಕ್ಕಿಲ್ಲ. ಬಯಲಾಟ ಕುರಿತು ಬರೆಯುವ ಹಾಗೂ ಮಾತನಾಡುವವರ ಸಂಖ್ಯೆ ವಿರಳವಾಗುತ್ತಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ದುರ್ಗಾದಾಸ್ ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಯಕ್ಷಗಾನಕ್ಕೆ ಸಿಗುತ್ತಿರುವ ಪ್ರಾದಾನ್ಯತೆ ಬಯಲಾಟಕ್ಕಿಲ್ಲ. ಬಯಲಾಟ ಕುರಿತು ಬರೆಯುವ ಹಾಗೂ ಮಾತನಾಡುವವರ ಸಂಖ್ಯೆ ವಿರಳವಾಗುತ್ತಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ದುರ್ಗಾದಾಸ್ ವಿಷಾದ ವ್ಯಕ್ತಪಡಿಸಿದರು.ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಬಾಲಭವನದಲ್ಲಿ ಗುರುವಾರ ಬಯಲಾಟ ಕಲಾವಿದರ ಜತೆ ಸಂವಾದ ನಡೆಸಿ ಮಾತನಾಡಿದ ಅವರು, ಬಯಲಾಟ ಅತ್ಯಂತ ಪ್ರಾಚೀನ ರಂಗಕಲೆ. ಯಕ್ಷಗಾನ ಕರಾವಳಿಗೆ ಸೀಮಿತವಾಗಿದೆ. ಬಯಲಾಟಕ್ಕಿಂತ ಯಕ್ಷಗಾನ ಭಿನ್ನವಾದುದು. ಬಯಲಾಟ ಮತ್ತು ಯಕ್ಷಗಾನದಲ್ಲಿನ ವಾದ್ಯಗಳೆ ಬೇರೆ ಎಂದರು.ಬಯಲಿನಲ್ಲಿ, ಜನ ಇರುವ ಕಡೆ ಪ್ರದರ್ಶನವಾಗುವುದಕ್ಕೆ ಬಯಲಾಟ ಎಂಬ ಹೆಸರು ಬಂದಿದೆ. ಸಾಮಾಜಿಕ ಪುರಾಣದ ತಿಳುವಳಿಕೆ, ಸಂಗೀತ, ಕುಣಿತ, ವಿನಯ, ಶೃಂಗಾರವನ್ನು ಬಯಲಾಟ ಕಲಿಸುತ್ತದೆ. ಬಯಲಾಟ, ಕಲಾವಿದರನ್ನು ಎತ್ತಿನಿಲ್ಲಿಸಿದೆಯಾದರೂ ಬಯಲಾಟ ಕುರಿತು ಬರೆಯುವ ಮಾತನಾಡುವ ವಿದ್ವಾಂಸರು ಕಡಿಮೆಯಾಗಿದ್ದಾರೆ. ಹಾಗಾಗಿ ಬಯಲಾಟ ಕಲಾವಿದರ ಬದುಕು ಸುಧಾರಣೆ, ಸಾಧಕ ಬಾಧಕಗಳ ಕುರಿತು ಚರ್ಚಿಸಿ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಸಂವಾದ ನಡೆಸುತ್ತಿರುವುದಾಗಿ ದುರ್ಗಾದಾಸ್ ಹೇಳಿದರು.ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಮಾತನಾಡಿ, ಬಯಲಾಟ ಕಲಾವಿದರು ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಭಾವಿಸಿಕೊಳ್ಳುವಂತಿಲ್ಲ. ಸ್ವಾಭಿಮಾನದ ಬದುಕು ನಿಮ್ಮದಾಗಿದ್ದು, ಸರ್ಕಾರ ಕೂಡ ನಿಮ್ಮ ಕಲೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಪ್ರೋತ್ಸಾಹ ನೀಡುತ್ತಿದೆ. ಬಯಲಾಟ ಎನ್ನುವುದು ಪ್ರಾಚೀನ ಕಲೆಯಾಗಿರುವುದರಿಂದ ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ಯಶೋಧ ಡಾ.ಬಿ. ರಾಜಶೇಖರಪ್ಪ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ನಾನು ಕಲಾವಿದೆಯಲ್ಲದಿದ್ದರೂ ಏಕಪಾತ್ರಾಭಿಯನ ಪ್ರದರ್ಶಿಸಿದ್ದೇನೆ. ಬಯಲಾಟ ಕಲಾವಿದರು ತಮ್ಮ ಹಿರಿಯರಿಂದ ಬಂದ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಸರ್ಕಾರ ಇಂತಹ ಕಲೆಯನ್ನು ಉಳಿಸಿ, ಕಲಾವಿದರಿಗೆ ಶಕ್ತಿ ತುಂಬಬೇಕಿದೆ ಎಂದು ಸಲಹೆ ನೀಡಿದರು.

ಕರ್ನಾಟಕ ಯಕ್ಷಗಾನ, ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಡಾ. ಬಿ.ಎಂ. ಗುರುನಾಥ್ ಮಾತನಾಡಿ. ಕರಾವಳಿ ಪ್ರದೇಶದಲ್ಲಿರುವ ಯಕ್ಷಗಾನ ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ನಮ್ಮ ಭಾಗದ ಬಯಲಾಟ ಇನ್ನು ಆ ಮಟ್ಟಕ್ಕೆ ತಲುಪಿಲ್ಲ. ಹಾಗಾಗಿ ವಾದ್ಯಗಾರರು, ವಿದ್ವಾಂಸರು, ಕಲಾವಿದರು ಒಟ್ಟಿಗೆ ಸೇರಿ ಬಯಲಾಟವನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಬಯಲಾಟವನ್ನು ರಾತ್ರಿಯಿಡಿ ಗ್ರಾಮಗಳಲ್ಲಿ ಕುಳಿತು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಬಯಲಾಟವನ್ನು ಮಾರ್ಪಾಡುಗೊಳಿಸಿಕೊಳ್ಳುವ ಅಗತ್ಯವಿದೆ. ಅಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿದಾಗ ಮಾತ್ರ ಬಯಲಾಟ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬಹುದು ಎಂದು ಹೇಳಿದರು. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾದ ನಿಂಗಪ್ಪ, ಬಿ. ಮಾರನಾಯಕ, ಜಾನಪದ ವಿದ್ವಾಂಸ ಮೈಲಹಳ್ಳಿ ರೇವಣ್ಣ ವೇದಿಕೆಯಲ್ಲಿದ್ದರು. ರೈತ ಮುಖಂಡ ಕೆ.ಪಿ. ಭೂತಯ್ಯ ಸೇರಿದಂತೆ ದಾವಣಗೆರೆ, ಜಗಳೂರು, ಕೂಡ್ಲಿಗಿ, ಮೊಳಕಾಲ್ಮುರು, ನಾಯಕನಹಟ್ಟಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಬಯಲಾಟ ಕಲಾವಿದರು ಸಂವಾದದಲ್ಲಿ ಪಾಲ್ಗೊಂಡು ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಿದರು. ಜಾನಪದ ವಿದ್ವಾಂಸ ಡಾ. ಚಿಕ್ಕಣ್ಣ ಎಣ್ಣೆಕಟ್ಟೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

Share this article