ಬ್ರಹ್ಮಾವರ: ಯಕ್ಷಗಾನ ಸರ್ವಾಂಗ ಸುಂದರ ಕಲೆ. ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಶಗಳೂ ಪೂರ್ಣ ಪ್ರಮಾಣದಲ್ಲಿ ವಿಕಾಸ ಹೊಂದಿರುವ ಏಕೈಕ ಕಲಾಪ್ರಕಾರ ಯಕ್ಷಗಾನ. ಹಿಂದೆ ಶಾಲೆಗೇ ಹೋಗದ ಕಲಾವಿದರು ಸಮಾಜ ತಿದ್ದುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಯಕ್ಷಶಿಕ್ಷಣ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಕೆ. ರಘುಪತಿ ಭಟ್ ಅವರು ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭಿಸಲು ಕಾರಣವಾದ ಸಂಗತಿ, ಅದರ ಪ್ರಯೋಜನ ವಿವರಿಸಿ ಈ ಅಭಿಯಾನದ ಯಶಸ್ಸಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಕೊಡುಗೆ ಅಗಾಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಮಹೇಶ್ವರೀ, ಲಾಸ್ಯ, ದಿಗ್ಗಜ್ ಡಿ. ಶೆಟ್ಟಿ, ನವ್ಯಾ ಹಾವಂಜೆ, ತನುಶ್ರೀ ಯಕ್ಷಶಿಕ್ಷಣದಿಂದ ತಮಗಾದ ಧನಾನತ್ಮಕ ಪ್ರಯೋಜನ ಮತ್ತು ಸ್ಮರಣೀಯ ಅನುಭವ ಹಂಚಿಕೊಂಡರು. ಪ್ರಸಾಧನ ತಂಡದ ನೇತೃತ್ವ ವಹಿಸಿದ ಕೃಷ್ಣಸ್ವಾಮಿ ಜೋಶಿ ಮತ್ತು ಮಿಥುನ ನಾಯಕ್ರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಅಭ್ಯಾಗತರಾಗಿ ದಿನಕರ ಹೇರೂರು, ರಾಜು ಕುಲಾಲ, ಬೈಕಾಡಿ ಸುಪ್ರಸಾದ ಶೆಟ್ಟಿ, ಎಂ. ಗಂಗಾಧರ ರಾವ್, ಸತೀಶ್ ಶೆಟ್ಟಿ, ಚಂದ್ರಶೇಖರ ಎಂ. ನಾಯರಿ, ಶ್ರೀಧರ್ ಬಿ. ಶೆಟ್ಟಿ, ದಿನೇಶ್ ನಾಯರಿ, ಗುರುರಾಜ ರಾವ್ ಉಪಸ್ಥಿತರಿದ್ದರು.ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಇದರ ಯಶಸ್ಸಿನಲ್ಲಿ ಬ್ರಹ್ಮಾವರದ ಸಂಘಟನಾ ಸಮಿತಿಯ ಶ್ರಮವನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಸಂಘಟನಾ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.ಸಂಘಟನಾ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಪೂಜಾರಿ ವಂದಿಸಿದರು. ಟ್ರಸ್ಟಿನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.