ವಿದ್ಯುತ್ ಸಮಸ್ಯೆಯಿಂದ ರೈತರ ಯಮಯಾತನೆ-ಸಂಗಣ್ಣ ಕರಡಿ

KannadaprabhaNewsNetwork | Published : Oct 28, 2023 1:15 AM

ಸಾರಾಂಶ

ಕರೆಂಟ್ ಉಚಿತ ಕೊಡುವುದಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ, ದೇಶಕ್ಕೆ ಅನ್ನ ಹಾಕುವ ರೈತರಿಗೆ ಕೊಡುವ ವಿದ್ಯುತ್ ಕಡಿತ ಮಾಡಿದ್ದು ಏಕೆ? ವಿದ್ಯುತ್ ಸಮಸ್ಯೆಯಿಂದ ರೈತರು ಯಮಯಾತನೆ ಅನುಭವಿಸುವಂತಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಕಿಡಿಕಾರಿದ್ದಾರೆ.

ಕೊಪ್ಪಳ: ಕರೆಂಟ್ ಉಚಿತ ಕೊಡುವುದಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ, ದೇಶಕ್ಕೆ ಅನ್ನ ಹಾಕುವ ರೈತರಿಗೆ ಕೊಡುವ ವಿದ್ಯುತ್ ಕಡಿತ ಮಾಡಿದ್ದು ಏಕೆ? ವಿದ್ಯುತ್ ಸಮಸ್ಯೆಯಿಂದ ರೈತರು ಯಮಯಾತನೆ ಅನುಭವಿಸುವಂತಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಕಿಡಿಕಾರಿದ್ದಾರೆ.

ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಆತ್ಮ ನಿರ್ಭರ ನಿಧಿಯ ಬೀದಿ ಬದಿ ವ್ಯಾಪಾರಿಗಳ ಕಿರುಸಾಲ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯಾದ್ಯಂತ ರೈತರು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೂ ಸರ್ಕಾರ ಗಮನ ಹರಿಸುತ್ತಲೇ ಇಲ್ಲ. ಇದರಿಂದ ಆಗುವ ಪರಿಣಾಮ ಅಷ್ಟಿಷ್ಟಲ್ಲ. ರಾಜ್ಯದ ಉತ್ಪಾದನೆಯಲ್ಲಿಯೇ ಭಾರಿ ಕುಸಿತವಾಗಲಿದೆ ಎನ್ನುವ ಅರಿವು ಸರ್ಕಾರಕ್ಕೆ ಇದ್ದಂತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಏನಾದರೂ ಮಾಡಲಿ, ಮೊದಲು ರೈತರಿಗೆ ವಿದ್ಯುತ್ ಪೂರೈಕೆ ಮಾಡಲಿ ಎಂದು ಆಗ್ರಹಿಸಿದರು.

ದೂರದೃಷ್ಟಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಹತ್ತಾರು ಯೋಜನೆಗಳು ದೇಶವನ್ನು ವಿಶ್ವದಲ್ಲಿಯೇ ತಲೆ ಎತ್ತಿ ನಿಲ್ಲುವಂತೆ ಮಾಡಿವೆ. ಈಗ ವಿಶ್ವ ಕರ್ಮ ಯೋಜನೆ ಸೇರಿದಂತೆ ಸ್ವನಿಧಿ ಯೋಜನೆಗಳು ಯುವಕರು ಉದ್ಯೋಗ ಮಾಡುವಂತೆ ಮಾಡುತ್ತಿವೆ. ಇದರಿಂದ ಉತ್ಪಾದನೆಯೂ ಹೆಚ್ಚಳವಾಗುತ್ತದೆ. ಬಡತನ ನಿವಾರಣೆಯಾಗುತ್ತದೆ. ಯುವಕರಿಗೂ ಉದ್ಯೋಗ ದೊರೆಯುತ್ತದೆ ಎಂದರು.

ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಿದ್ದು ನಾವು, ಇಂಥ ಯೋಜನೆಗಳ ಜಾರಿಯಿಂದ ಮಾತ್ರ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದರು.ಪಿಎಂ ಸ್ವ-ನಿಧಿಯ ರಾಜ್ಯ ಸಂಚಾಲಕ, ಮಾಜಿ ಸಚಿವ, ಎಸ್.ಎ.ರಾಮದಾಸ್ ಮಾತನಾಡಿ, ಪ್ರಧಾನಿ ಮೋದಿ ಶ್ರಮಿಕರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಬಡ ಜನರ ಕಲ್ಯಾಣವೇ ಈ ಯೋಜನೆಯ ಉದ್ದೇಶವಾಗಿದೆ ಎಂದರು.ಬೀದಿ ಬದಿ ವ್ಯಾಪಾರಿಗಳು, ಪತ್ರಿಕೆ ಹಂಚುವವರು ಸೇರಿದಂತೆ ಸಣ್ಣಪುಟ್ಟ ಕಾಯಕ ಮಾಡುವವರಿಗೆ ಆರ್ಥಿಕ ಸೌಲತ್ತು ನೀಡುವುದಕ್ಕಾಗಿಯೇ ಕಿರು ಸಾಲ ಯೋಜನೆ ಜಾರಿಗೆ ತರಲಾಗಿದೆ. ವಿಶ್ವಕರ್ಮ ಸೇರಿದಂತೆ ಎಲ್ಲ ವರ್ಗಗಳಿಗೆ ಅನುಕೂಲ ಕಲ್ಪಿಸುವ ದಿಶೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಯೋಜನೆ ಕೈಗೊಂಡಿದ್ದಾರೆ ಎಂದರು.

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಪೌರಾಯುಕ್ತ ಗಣಪತಿ ಸೇರಿ ಇತರರು ಇದ್ದರು.

Share this article