ಕನ್ನಡಪ್ರಭ ವಾರ್ತೆ ಚಿತ್ರದುರ್ಗ
2025ರ ಫೆ.20 ರಿಂದ 26ರವರೆಗೆ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯಲಿರುವ 95ನೇ ಶಿವನಾಮ ಸಪ್ತಾಹ ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ಧಪಡಿಸುವ ಹಿನ್ನಲೆಯಲ್ಲಿ ಕರೆದಿದ್ದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ ವಿವಿಧ ರೀತಿಯ ಸಲಹೆಯನ್ನು ನೀಡಿದರು.
ಶ್ರೀಗುರು ಕಬೀರಾನಂದಾಶ್ರಮದ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್ ಪ್ರಸ್ತಾವಿಕವಾಗಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಶಿವರಾತ್ರಿ ಮಹೋತ್ಸವ ಅದ್ಧೂರಿಯಾಗಿ ಅಚರಣೆಯಾಗುತ್ತಿದೆ. ಇದರಲ್ಲಿ ಎಲ್ಲರ ಸಹಕಾರ ಸಹಾಯ ದೊರೆತ್ತಿದೆ. ಕಳೆದ ವರ್ಷದ ಶಿವರಾತ್ರಿ ಮಹೋತ್ಸವದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಇದರಿಂದ ಮಠದ ಮೇಲೆ ಹೆಚ್ಚಿನ ಹೊರೆಯಾಗಿದೆ, 94ನೇ ಶಿವರಾತ್ರಿ ಮಹೋತ್ಸವದಲ್ಲಿ ಆದ ಖರ್ಚು 24 ಲಕ್ಷ ರು. ಭಕ್ತಾಧಿಗಳಿಂದ ಬಂದ ಹಣ 14 ಲಕ್ಷ ರು.ಮಾತ್ರ. 10,27,272 ರು. ಮಠಕ್ಕೆ ಹೊರೆಯಾಗಿದೆ. ಈ ಬಾರಿ ಖರ್ಚಿನ ಹೊರೆ ಕಡಿಮೆ ಮಾಡುವ ಕಾರ್ಯ ಭಕ್ತಾಧಿಗಳಿಂದ ಆಗಬೇಕಿದೆ. ಭಕ್ತಾಧಿಗಳು ತಾವು ಮಾತ್ರವಲ್ಲದೆ ಬೇರೆಯವರಿಂದ ಕೂಡ ಕಾಣಿಕೆ ಕೊಡಿಸುವಂತ ಕಾರ್ಯವಾಗಬೇಕಿದೆ ಎಂದರು.ಜೆಡಿಎಸ್ನ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಮಠಾಧೀಶರು, ಕಲಾವಿದರನ್ನು ಕರೆಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕಿದೆ. ಹಣಕಾಸು ವಿಷಯದಲ್ಲಿ ಸಮಿತಿ ರಚನೆ ಮಾಡುವುದರ ಮೂಲಕ ಈ ಭಾರಿ ಅತಿ ಹೆಚ್ಚಿನ ವಸೂಲಾತಿಯನ್ನು ಮಾಡಬೇಕಿದೆ ಕಬೀರಾನಂದಾಶ್ರಮ ಜಾತ್ಯಾತೀತವಾಗಿ ಇದೆ ಇಲ್ಲಿ ಎಲ್ಲಾ ಜನಾಂಗದವರು ಬರುತ್ತಾರೆ ಶ್ರೀಗಳ ಆರ್ಶೀವಾದವನ್ನು ಪಡೆಯುತ್ತಾರೆ ಇಂತಹ ಗುರುಗಳು ನಮಗೆ ಸಿಗುವುದು ಕಡಿಮೆ ಭಕ್ತರು ಸಹಕಾರ ಇದ್ದರೆ ಆಶ್ರಮಕ್ಕೆ ಹೊರೆಯಾಗುವುದಿಲ್ಲ ಎಂದರು.
ಸಾನ್ನಿಧ್ಯ ವಹಿಸಿದ್ದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ಚಿತ್ರದುರ್ಗ ಬೃಹನ್ಮಠದಲ್ಲಿ ನಡೆಯುವ ಶರಣಸಂಸ್ಕೃತಿ ಉತ್ಸವ, ಸಿರಿಗೆರೆ ಮಠದಿಂದ ನಡೆಯುವ ತರಳಬಾಳು ಉತ್ಸವದ ರೀತಿಯಲ್ಲಿ ಕಬೀರಾನಂದಾಶ್ರಮದಲ್ಲಿ ನಡೆಯುವ ಶಿವರಾತ್ರಿ ಮಹೋತ್ಸವ ಮಧ್ಯ ಕರ್ನಾಟಕದ ನಾಡಹಬ್ಬವಾಗಿ ಮಾಡಬೇಕಾದ ಚಿಂತನೆಯನ್ನು ಮಾಡಬೇಕಿದೆ. ಈ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಶಿವಲಿಂಗಾನಂದ ಶ್ರೀಗಳು ಉತ್ಸವಮೂರ್ತಿಯಾಗಬೇಕಿದೆ. ಇಲ್ಲಿ ನಾವುಗಳು ಎಲ್ಲಾ ಸೇರಿ ಈ ಕಾರ್ಯಕ್ರಮವನ್ನು ಮಾಡಬೇಕಿದೆ. ಇದಕ್ಕಾಗಿ ಭಕ್ತರು ಸಹಾಯ ಮತ್ತು ಸಹಕಾರ ನೀಡಬೇಕಿದೆ ಎಂದರು.
ನಗರಾಭೀವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ಪೀರ್ ಮಾತನಾಡಿದರು. ಮದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಉಜ್ಜನಪ್ಪ, ಮಂಜುನಾಥ ಗುಪ್ತ, ನಗರಸಭಾ ಸದಸ್ಯರಾದ ವೆಂಕಟೇಶ್, ನಗರಾಭೀವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀಮತಿ ರೇಖಾ, ವರ್ತಕರಾದ ವೆಂಕಟೇಶ್, ರಾಮಮೂರ್ತಿ ಶಿವರಾತ್ರಿ ಮಹೋತ್ಸವಕ್ಕೆ ವಿವಿಧ ರೀತಿಯ ಸಲಹೆಯನ್ನು ನೀಡಿದರು. ಸಮಾರಂಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷರಾದ ರಘುನಾಥ್, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ತಿಪ್ಪೇಶಯ್ಯ, ಧರ್ಮ ಪ್ರಸಾದ್, ಸುರೇಂದ್ರ ಭಾಗವಹಿಸಿದ್ದರು.