ಕನ್ನಡಪ್ರಭ ವಾರ್ತೆ ವಿಜಯಪುರ
ಅಖಂಡ ಜಿಲ್ಲೆಯಲ್ಲಿ ಜನಸಂಘದ ಕಾಲದಿಂದಲೂ ಅಸ್ತಿತ್ವವಿಟ್ಟುಕೊಂಡು ಹೋರಾಟ ಮಾಡುತ್ತಿದ್ದ ಹಿರಿಯರ ತಂಡವಿತ್ತು. ಅದರಲ್ಲಿ ಸಂಸ್ಥಾಪಕ ಸದಸ್ಯರಾದ ಡಾ.ಮಹೀಂದ್ರಕರ, ಜ್ಯೋತಿಪ್ರಕಾಶ ಸಾಳುಂಕೆ, ಗಣಪತರಾವ ಕಾಂಬಳೆ, ಮಾಲಗಾರ ಮಾಸ್ತರ, ಗಣಪತರಾವ ಕಾಂಬಳೆ, ಗುಳೇದಗುಡ್ಡದ ರಾಠಿ ಮುಂತಾದ ಹಿರಿಯರ ತಂಡವಿತ್ತು. ಯಡಿಯೂರಪ್ಪನವರ ನೇತೃತ್ವದಲ್ಲಿ ಅಖಂಡ ಜಿಲ್ಲೆಯಲ್ಲಿ ಬಸನಗೌಡ ಪಾಟೀಲ, ಪಿ.ಹೆಚ್.ಪೂಜಾರ, ಭಾಂಡಗೆ, ಸಿದ್ಧಲಿಂಗ ಹಂಜಗಿ, ಸಿಂದಗಿಯ ಎಂ.ಎಸ್.ಮಠ, ಬೀಳಗಿಯ ಡಾ.ದೇಶಪಾಂಡೆ, ಮುಧೋಳದ ಟಂಕಸಾಲಿ ಬಂಧುಗಳು ಮುಂತಾದ ನೂರಾರು ನಾಯಕರು ಪಕ್ಷಕ್ಕಾಗಿ ತಮ್ಮ ಸಮಯ ಮೀಸಲಿಟ್ಟಿದ್ದರು ಎಂಬುವುದನ್ನು ಸ್ಮರಿಸಬೇಕಾಗುತ್ತದೆ ಎಂದರು.
ಅಖಂಡ ವಿಜಯಪುರ ಜಿಲ್ಲೆಗೂ ಯಡಿಯೂರಪ್ಪನವರಿಗೂ ಒಂದು ಅವಿನಾಭಾವ ಸಂಬಂಧವಿದೆ. ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ಹಳ್ಳಿಹಳ್ಳಿಗೆ ಪ್ರವಾಸ ಮಾಡಿ, ರೈತರನ್ನು ಬಡಿದೆಬ್ಬಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ರೈತರ ಸಾಲ ಮನ್ನಾಕ್ಕಾಗಿ ಆಗ್ರಹಿಸಿ ಬಸವನ ಬಾಗೇವಾಡಿ, ಬನವಾಸಿ ಹಾಗೂ ಬೀದರಗಳಿಂದ 3 ಬಾರಿ ರೈತಸಾಲ ಮನ್ನಾಕ್ಕಾಗಿ ಅವರು ಮಾಡಿದ ರೈತಯಾತ್ರೆ ಮರೆಯಲಿಕ್ಕಾಗದು. ಪ್ರತಿಯೊಬ್ಬರಿಗೆ ರಾಜಕೀಯದಲ್ಲಿ ಒಬ್ಬ ಗುರು ಅಂತ ಇರುತ್ತಾರೆ. ಆದರೆ, ನನಗೆ ಇಬ್ಬರು ಗುರುಗಳು. ಒಬ್ಬರು ಯಡಿಯೂರಪ್ಪ ಇನ್ನೊಬ್ಬರು ಅನಂತಕುಮಾರ. ನನ್ನನ್ನು ಹಂತ ಹಂತವಾಗಿ ಬೆಳೆಸಿ ಶಾಸಕನನ್ನಾಗಿ ಮಾಡಿದ್ದು ಯಡಿಯೂರಪ್ಪನವರೇ ಎಂದು ನಾನು ಅಭಿಮಾನದಿಂದ ಹೇಳುತ್ತೇನೆ ಎಂದರು.ಸಂಘಟನೆಗಾಗಿ ಅವರು ನಮ್ಮ ಅಖಂಡ ಜಿಲ್ಲೆಯಲ್ಲಿ ಶಿವಮೊಗ್ಗಕ್ಕಿಂತ ಹೆಚ್ಚು ಪ್ರವಾಸ ಮಾಡಿ 2008ರ ವಿಧಾನಸಭೆ ಚುನಾವಣೆಯಲ್ಲಿ 15 ರಲ್ಲಿ 12 ಸ್ಥಾನದಲ್ಲಿ ನಾವೇ ಗೆದ್ದಿರುವುದು. ಅದಕ್ಕೆ ಕಾರಣೀಕರ್ತರು ಯಡಿಯೂರಪ್ಪ ಮತ್ತು ಅನಂತಕುಮಾರ ಎಂದರು.
-ಶ್ರೀಕಾಂತ ಕುಲಕರ್ಣಿ, ಮಾಜಿ ಶಾಸಕರು, ಜಮಖಂಡಿ ಮತಕ್ಷೇತ್ರ.