ಸಾಮಾಜಿಕ ಸ್ವಾಸ್ಥ್ಯಕ್ಕೆ ಯೋಗ ಸಹಕಾರಿ: ಶ್ರೀ ವರಸದ್ಯೋಜಾತ ಸ್ವಾಮೀಜಿ

KannadaprabhaNewsNetwork |  
Published : Jun 22, 2026, 02:30 AM IST
ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಹಾಗೂ ಆಸ್ಪತ್ರೆಯು ಎಸ್‍ಸಿಎಸ್ ಕಾಲೇಜ್ ಆಫ್ ಪಾರ‍್ಮಸಿ ಸಹಯೋಗದಲ್ಲಿ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ವರಸದ್ಯೋಜಾತ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಯೋಗ ವಿಶ್ವಕ್ಕೆ ಭಾರತ ನೀಡಿದ ಅತಿದೊಡ್ಡ ಕೊಡುಗೆ.

ಹರಪನಹಳ್ಳಿ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಮನುಕುಲ ಆರೋಗ್ಯವಂತ ಜೀವನ ಸಾಧಿಸುವ ನಿಟ್ಟಿನಲ್ಲಿ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತೆಗ್ಗಿನಮಠ ಮಠದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಆಶಿಸಿದರು.ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಹಾಗೂ ಆಸ್ಪತ್ರೆಯು ಎಸ್‍ಸಿಎಸ್ ಕಾಲೇಜ್ ಆಫ್ ಫಾರ‍್ಮಸಿ ಸಹಯೋಗದಲ್ಲಿ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಯೋಗ ವಿಶ್ವಕ್ಕೆ ಭಾರತ ನೀಡಿದ ಅತಿದೊಡ್ಡ ಕೊಡುಗೆ. ಭಾರತೀಯ ಸಂಸ್ಕೃತಿಯಲ್ಲಿ ಯೋಗಕ್ಕೆ ವಿಶಿಷ್ಟ ಸ್ಥಾನವಿದೆ. ಯೋಗ ಎನ್ನುವುದು ಕೇವಲ ದೈಹಿಕ ವ್ಯಾಯಾಮವಲ್ಲ. ಅದು ದೇಹ ಮತ್ತು ಮನಸ್ಸನ್ನು, ವಿಸ್ತೃತವಾಗಿ ಆತ್ಮ ಮತ್ತು ಪರಮಾತ್ಮನನ್ನು ಬೆಸೆಯುವ ಸಾಧನ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಹೀಗೆ ಅಷ್ಟಾಂಗ ಯೋಗದ ಮೂಲಕ ಜೀವನ ಸಾಕ್ಷಾತ್ಕಾರ ಸಾಧ್ಯ ಎನ್ನುವುದನ್ನು ನಮ್ಮ ಋಷಿ ಪರಂಪರೆ ತೋರಿಸಿಕೊಟ್ಟಿದೆ ಎಂದು ಬಣ್ಣಿಸಿದರು.

ಆಧ್ಯಾತ್ಮಿಕತೆಯ ತವರು ಎನಿಸಿದ ಭಾರತ ಇಂದು ವಿಶ್ವಕ್ಕೆ ಯೋಗದ ಮಹತ್ವವನ್ನು ತೋರಿಸಿಕೊಟ್ಟಿದೆ. ವಿಶ್ವಾದ್ಯಂತ 2500 ಕಡೆಗಳಲ್ಲಿ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯೋಗ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಇದರ ನೇತೃತ್ವ ವಹಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇದು ಯೋಗಕ್ಕೆ ನೀಡಿದ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು.

ನಮ್ಮ ಬದುಕಿನ ನಕಾರಾತ್ಮಕ ಅಂಶಗಳನ್ನು ತೊಡೆದು ಹಾಕಿ ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸುವಲ್ಲಿ ಯೋಗ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸ್ವಾಮೀಜಿ ವಿಶ್ಲೇಷಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಟಿಎಂಎಇ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಟಿ.ಎಂ..ಚಂದ್ರಶೇಖರಯ್ಯ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಋಷಿ ಮುನಿಗಳ ಕೊಡುಗೆ ಅಪಾರ. ಯೋಗದ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ವೈದ್ಯಪದ್ಧತಿಯನ್ನು ಭಾರತ ವಿಶ್ವಕ್ಕೆ ಪರಿಚಯಿಸಿದೆ. ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗದ ಕೊಡುಗೆ ಅಪಾರ ಎಂದು ಹೇಳಿದರು.

ಜನನಿ ಸಂಸ್ಥೆಯ ಸಾರ್ವಜನಿಕ ಸಂಪಕಾಧಿಕಾರಿ ಉದಯಶಂಕರ ಭಟ್ ಮಾತನಾಡಿದರು.

ಹೂವಿನಹಡಗಲಿಯ ವೀರರಾಣಿ ಕಿತ್ತೂರು ಚೆನ್ನಮ್ಮ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಯೋಗ ಶಿಬಿರದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಈಶ್ವರ್ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ವಿನುತಾ ಈಶ್ವರ್, ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಉದಯಶಂಕರ ಭಟ್, ವೈದ್ಯರಾದ ಡಾ.ಅಂಬಿಕಾ, ಡಾ.ಅನುಷಾ ಶೆಟ್ಟಿ ಉಪಸ್ಥಿತರಿದ್ದರು.

ಸಾಯಿ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್‌ ಮತ್ತು ಪ್ಯಾರಾ ಮೆಡಿಕಲ್‌ನಲ್ಲಿ ಡಾ.ಯಶಸ್ವಿನಿ ನೇತೃತ್ವದಲ್ಲಿ ಯೋಗ ತರಬೇತಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಡಾ.ಶಿವನಗೌಡ, ನೂತನ ಅಧ್ಯಕ್ಷ ಶಿವಪ್ಪ ವಾದಿ, ಪ್ರಾಚಾರ್ಯ ಸಂಗೀತಾ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಗೆ ಯಾವುದೇ ಮಿತಿ ಇರುವುದಿಲ್ಲ: ತಹಸೀಲ್ದಾರ
ಬ್ಯಾಂಕ್ ಖಾತೆಯ ಹಣಕ್ಕಿಂತ ಆರೋಗ್ಯವೇ ನಿಜವಾದ ಆಸ್ತಿ: ಎಡಿಸಿ ಬಾಲಕೃಷ್ಣ