ಕನ್ನಡಪ್ರಭ ವಾರ್ತೆ ಚಿತ್ರದುರ್ಗಯೋಗ ಮತ್ತು ಧ್ಯಾನ ಮನಸ್ಸಿನ ಆಂತರಿಕ ಶಕ್ತಿಗಳನ್ನು ಜಾಗೃತಿಗೊಳಿಸುವ ಕ್ರಿಯೆಯಾಗಿದೆ. ಧ್ಯಾನ ದೇಹ, ಮನಸ್ಸು ಆತ್ಮಗಳನ್ನು ಒಟ್ಟುಗೂಡಿಸಿ ಆತ್ಮಾನಂದವನ್ನು ನೀಡುವುದು. ಇದು ನಮ್ಮ ಮೆದುಳಿನಲ್ಲಿ ಸುಳಿದಾಡುವ ಅನಾವಶ್ಯಕ ಆಲೋಚನೆಯನ್ನು ನಿಗ್ರಹಿಸುವುದರ ಜೊತೆಗೆ ಮನಸ್ಸಿನ ದುರಾಲೋಚನೆಗಳನ್ನು ನಿರ್ಬಂಧಿಸುತ್ತದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಹೇಳಿದರು.ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ಶ್ರೀ ಪ್ರಸನ್ನವೆಂಕಟೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಯೋಗೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದ್ರಿಯಗಳು ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವ ಕೌಶಲ್ಯಪೂರ್ಣ ವಿಜ್ಞಾನವೇ ಯೋಗವಾಗಿದೆ. ಇಂತಹ ಅದ್ಭುತ ಕಲೆಯನ್ನು ನಮಗಾಗಿ ಮತ್ತು ಸಮಾಜದ ಆರೋಗ್ಯಕ್ಕಾಗಿ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಒತ್ತಡ ಮತ್ತು ಕಲುಷಿತ ವಾತಾವರಣ, ರಾಸಾಯನಿಕ ಯುಕ್ತ ಆಹಾರದಿಂದಾಗಿ ಅನಾರೋಗ್ಯದ ಸುಳಿಯಲ್ಲಿ ಸಿಲುಕುತ್ತಿರುವ ನಮ್ಮ ಬದುಕಿಗೆ ಯೋಗದ ಅಭ್ಯಾಸವು ಕ್ಷೇಮ ಮತ್ತು ನೆಮ್ಮದಿಯ ದಾರಿದೀಪವಾಗಿ ಹೊರಹೊಮ್ಮಿದೆ ಎಂದರು.ಹಿರಿಯ ಯೋಗ ಶಿಕ್ಷಕ ಭರಮಸಾಗರ ತಿಪ್ಪೇಸ್ವಾಮಿ ಮಾತನಾಡಿ, ನಾವು ನಮ್ಮ ಆರೋಗ್ಯ ಮಾತ್ರ ಚೆನ್ನಾಗಿಟ್ಟುಕೊಂಡರೆ ಸಾಲದು, ನಮ್ಮ ಕುಟುಂಬದ ಸದಸ್ಯರು ನಮ್ಮ ಮನೆಯ ಅಕ್ಕಪಕ್ಕದವರ ಆರೋಗ್ಯ ಮತ್ತು ಇಡೀ ಸಮಾಜ ಜನರು ಆರೋಗ್ಯದಿಂದಿರುವಂತೆ ನೋಡಿಕೊಳ್ಳಬೇಕು. ನಮ್ಮ ದೇಶ ಸದೃಢವಾಗಿರಲು ನಾವೆಲ್ಲರೂ ರೋಗಮುಕ್ತ ಮತ್ತು ಔಷಧಮುಕ್ತ ಜೀವನ ನಡೆಸಬೇಕು ಅದಕ್ಕಾಗಿ ಎಲ್ಲರೂ ಪ್ರತಿದಿನ ಒಂದುಗಂಟೆ ಯೋಗಭ್ಯಾಸ ಮಾಡಬೇಕು ಎಂದರು.
ಈ ವೇಳೆ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್ ಮಾತನಾಡಿದರು. ಯೋಗ ಸಾಧಕರಾದ ವನಜಾಕ್ಷಮ್ಮ, ನಿರ್ಮಲಾ, ತಿಪ್ಪಮ್ಮ, ನಳಿನಾ, ರೂಪ, ರೇಣುಕಾ, ಅನಸೂಯ, ಅಂಬುಜಾಕ್ಷಿ, ಅನಿತ ಭಾಗ್ಯಲಕ್ಷ್ಮಿ, ದೀಪಾ ಶೈಲಜಾರೆಡ್ಡಿ, ಸುಜಾತ, ಸುಧಾ, ಚೈತ್ರಾ, ಚಿತ್ರಾ, ಮಂಜುಳಾ, ವಸಂತಲಕ್ಷ್ಮಿ, ಮಲ್ಲಿಕಾರ್ಜುನಚಾರ್, ಶಿವಪ್ರಸಾದ್ ಇದ್ದರು.