ಕನ್ನಡಪ್ರಭ ವಾರ್ತೆ ಪುತ್ತೂರು
ಆಸ್ಟ್ರೇಲಿಯಾದ ಕ್ಲೀನ್ ಬ್ಯಾಂಡ್ನಲ್ಲಿ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ನಲ್ಲಿ ಪ್ರತ್ತೂರು ಅಕ್ವೆಟಿಕ್ ಕ್ಲಬ್ನ ಈಜುಪಟುಗಳಾದ ಸ್ವೀಕೃತ್ ಆನಂದ್, ಅನ್ವಿತ್ ರೈ ಬಾರಿಕೆ, ದಿಗಂತ್ ವಿ.ಎಸ್. ಹಾಗೂ ಧನ್ವಿತ್ ಭಾರತ ದೇಶದ ತಂಡವನ್ನು ಪ್ರತಿನಿಧಿಸಲಿದ್ದಾರೆ.ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯಿಂದ ನಡೆದ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಇವರು ಭಾಗವಹಿಸಿ ಭಾರತದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸ್ವೀಕೃತ್ ಆನಂದ್ ಅವರು ಬೊಳುವಾರಿನ ಆಸ್ಟರ್ ಆನಂದ್ ಮತ್ತು ಸೆನೋರಿಟಾ ಆನಂದ್ ದಂಪತಿ ಪುತ್ರ. ಅನ್ವಿತ್ ರೈ ಬಾರಿಕೆ ದರ್ಬೆ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಪರ್ಪುಂಜ ಬಾರಿಕೆ ಅನಿಲ್ ಕುಮಾರ್ ರೈ ಮತ್ತು ದಿವ್ಯಾ ಅನಿಲ್ ರೈ ದಂಪತಿ ಪುತ್ರ. ದಿಗಂತ್ ವಿ.ಎಸ್ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಎಸ್ಸಿಡಿಸಿಸಿ ಬ್ಯಾಂಕ್ ಕುಂಬ್ರ ಶಾಖಾ ವ್ಯವಸ್ಥಾಪಕ ಕೂರ್ನಡ್ಕದ ವಿಶ್ವನಾಥ ಎಸ್. ಮತ್ತು ಪುತ್ತೂರು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಹಿರಿಯ ವ್ಯವಸ್ಥಾಪಕಿ ವೀಣಾ ಕುಮಾರಿ ಕೆ. ದಂಪತಿ ಪುತ್ರ. ಧನ್ಸಿತ್ ಅಂಬಿಕಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಕೆಮ್ಮಿಂಜೆ ಪ್ರಗತಿ ಬಡಾವಣೆಯಲ್ಲಿನ ನಿವಾಸಿ ಎಸ್ಸಿಡಿಸಿಸಿ ಬ್ಯಾಂಕ್ ದರ್ಬೆ ಶಾಖಾ ವ್ಯವಸ್ಥಾಪಕ ಶೇಣವ ಕುಮಾರ್ ಮತ್ತು ಎಸ್ಸಿಡಿಸಿಸಿ ಬ್ಯಾಂಕ್ ಕಲ್ಲಡ್ಕ ಶಾಖಾ ವ್ಯವಸ್ಥಾಪಕಿ ಮೀನಾಕ್ಷಿ ದಂಪತಿ ಪುತ್ರ.ಮಂಗಳೂರಿನ ಅಲೋಷಿಯಸ್ ಈಜುಕೊಳ ಹಾಗೂ ಪರ್ಲಡ್ಕ ಬಾಲವನದ ಈಜುಕೊಳದಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್ನ ಹಿರಿಯ ತರಬೇತುದಾರರಾಗಿರುವ ಪಾರ್ಥ ವಾರಣಾಸಿ, ನಿರೂಪ್ ಜಿ.ಆರ್. ರೋಹಿತ್ ಪಿ. ಹಾಗೂ ದೀಕ್ಷಿತ್ ಮಾರ್ಗದರ್ಶನದಲ್ಲಿ ಇವರೆಲ್ಲರೂ ತರಬೇತಿ ಪಡೆಯುತ್ತಿದ್ದಾರೆ.