ಕನ್ನಡಪ್ರಭ ವಾರ್ತೆ ಶಹಾಪುರ
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ. ಕಳೆದ 30 ವರ್ಷಗಳಿಂದ ಯೋಗಾಚಾರ್ಯ ನರಸಿಂಹ ವೈದ್ಯ ಅವರು ನಗರ ಸೇರಿ ಹಲವೆಡೆ ಉಚಿತ ಯೋಗ ತರಬೇತಿ ನಿಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವಕರ ತಂಡ ಕಟ್ಟಿಕೊಂಡು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ತಿಳಿಸಿದರು.ಗರದ ಫಕೀರೇಶ್ವರ ಮಠದ ಆವರಣದಲ್ಲಿ ಜ್ಞಾನಾಮೃತ ಸೇವಾ ಶಿಕ್ಷಣ ಟ್ರಸ್ಟ್, ಪತಂಜಲಿ ಯೋಗ ವಿಜ್ಞಾನ ತರಬೇತಿ ಕೇಂದ್ರ, ವೈದ್ಯಶ್ರೀ ಸಮಗ್ರ ಆರೋಗ್ಯ ಕೇಂದ್ರ ಮತ್ತು ಸೇಡಂನ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯಿಂದ ನಡೆದ ಏಳು ದಿನಗಳ ಕಾಲ ಉಚಿತ ಯೋಗ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಪ್ರತಿನಿತ್ಯ ಯೋಗ ಮಾಡುವವರಿಗೆ ಕೋವಿಡ್ ಹೆಚ್ಚಾಗಿ ಬಾಧಿಸಿಲ್ಲ. ಇದು ನನ್ನ ವೈಯಕ್ತಿಕ ಅನುಭವವೂ ಆಗಿದೆ. ಯೋಗಾಚಾರ್ಯ ನರಸಿಂಹ ವೈದ್ಯರು 7 ದಿನಗಳ ಕಾಲ ಕಲಿಸಿದ ಯೋಗವನ್ನು ತಪ್ಪದೆ ಕಲಿತು ನಿತ್ಯ ಪರಿಪಾಠವನ್ನು ಹಾಕಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಬೇಕು ಎಂದರು.ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ. ಶರಣು ಬಿ. ಗದ್ದುಗೆ ಮತ್ತು ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿ, ಯೋಗಾಚಾರ್ಯ ನರಸಿಂಹ ವೈದ್ಯ ಅವರು ಹಲವಾರು ವರ್ಷಗಳಿಂದ ಶಹಾಪುರದಲ್ಲಿ ಉಚಿತವಾಗಿ ಯೋಗ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನ ಘೋಷಣೆಯಾಗುವ ಸುಮಾರು 10 ವರ್ಷಗಳ ಮೊದಲೇ ಅವರು ನಗರದಲ್ಲಿ ಯುವಕರಿಗೆ, ಮಹಿಳೆಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಯೋಗ ಕಲಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಜನರು ಆರೋಗ್ಯಕರ ಬದುಕು ಕಟ್ಟಿಕೊಳ್ಳಲಿ ಎಂಬ ಮಹಾದಾಸೆಯಿಂದ ಸೇವಾ ಮನೋಭಾವದಿಂದ ಅವರು ಕೆಲಸ ಮಾಡುತ್ತಿದ್ದು, ಸರ್ವರ ಸಹಭಾಗಿತ್ವ ಅಗತ್ಯವಿದೆ ಎಂದರು.
ಡಾ. ಮಹೇಶ ಪಾಟೀಲ್ ಮಾತನಾಡಿದರು. ಹಿರಿಯ ವಕೀಲರಾದ ರಾಯಣ್ಣ ಹೊನ್ನಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿಪರ ರೈತ ಅಮರೇಶಗೌಡ ಪಾಟೀಲ್ ಇದ್ದರು. ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಸಂಗೀತ ಸೇವೆ ನೀಡಿದರು. ವೀರೇಶ ಉಳ್ಳಿ ನಿರೂಪಿಸಿದರು. ಸಾಂಸ್ಕೃತಿಕ ಸಂಘಟಕ ಸಂಗನಗೌಡ ಪಾಟೀಲ್ ಅನವಾರ ವಂದಿಸಿದರು.