ವಿಶ್ವಕ್ಕೆ ಭಾರತ ಕೊಡ್ಡ ದೊಡ್ಡ ಕೊಡುಗೆ ಯೋಗ

KannadaprabhaNewsNetwork | Published : Dec 13, 2024 12:50 AM

ಸಾರಾಂಶ

ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಕೊಡುಗೆ ಯೋಗ. ಭಾಷೆ, ಗಡಿ ಮೀರಿದ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಕೊಡುಗೆ ಯೋಗ. ಭಾಷೆ, ಗಡಿ ಮೀರಿದ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಯೋಗಾಸನ ಭಾರತ, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐದನೇ ರಾಷ್ಟ್ರೀಯ ಹಿರಿಯರ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಇತರೆ ಕ್ರೀಡೆಗಳಂತೆ ಯೋಗವೂ ದೇಶದ ಎಲ್ಲಾ ರಾಜ್ಯದ ಕ್ರೀಡಾಪಟುಗಳನ್ನು ಒಗ್ಗೂಡಿಸಿ, ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಉಂಟು ಮಾಡುತ್ತಿದೆ ಎಂದರು.ಅಲ್ಲದೆ ಬೇರೆ ಸಾಧನೆಗಳಿಗೆ ಪೂರಕವಾಗಿ ಯೋಗ ಕೆಲಸ ಮಾಡುತ್ತದೆ.ಯಾವುದೇ ರೀತಿಯ ಕ್ರೀಡಾ ಚಟುವಟಿಕೆ ಮಾಡುತ್ತಿದ್ದರು,ಯೋಗಾಸನ ಮಾಡಿದರೆ, ತಾನು ಆರಿಸಿಕೊಂಡ ಕ್ಷೇತ್ರದಲ್ಲಿ ಎತ್ತರಕ್ಕೆ ಎರಲು ಸಹಕಾರಿಯಾಗುತ್ತದೆದೇಹವನ್ನು ಆತ್ಮದ ಅರಮನೆಯಾಗಿ ಮಾಡಿಕೊಳ್ಳಲು ಯೋಗದಿಂದ ಸಾಧ್ಯ ಎಂದರು.ಇಂದು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವ ಸ್ಪರ್ಧಾಳುಗಳು ಮುಂಬರುವ ಏಷ್ಯನ್ ಗೇಮ್ಸ್ ಮತ್ತು ಒಲಂಪಿಕ್ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಲು ತಯಾರಾಗುವಂತೆ ಶುಭ ಹಾರೈಸಿದರು.ಸಾನಿಧ್ಯ ವಹಿಸಿದ್ದ ಬಂಜಾರ ಗುರುಪೀಠದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ವಿವೇಕಾನಂದ ಸಧೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರಲು ಸಾಧ್ಯ ಎಂಬ ಮಾತನ್ನು ಯೋಗದಿಂದ ಸಕಾರಗೊಳಿಸಲು ಸಾಧ್ಯ. ನಮ್ಮ ಆರೋಗ್ಯ ಮತ್ತು ಆಲೋಚನೆ ಎರಡು ಚನ್ನಾಗಿರಬೇಕೆಂದರೆ ನಾವೊಬ್ಬ ಯೋಗಪಟುವಾಗಬೇಕು ಎಂದರು.ಯೋಗಾಸನ ಭಾರತ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಹರಿಯಾಣ ಯೋಗ ಆಯೋಗದ ಅಧ್ಯಕ್ಷ ಡಾ.ಜೈದೀಪ ಆರ್ಯ ಮಾತನಾಡಿ, ಶಿಸ್ತು ಬದ್ದ ಮತ್ತು ಆರೋಗ್ಯ ವಂತ ಜೀವನಕ್ಕೆ ಯೋಗ ಅತಿ ಅಗತ್ಯವಾಗಿದೆ.ಇಂತಹ ಯೋಗಾಸನ ಕ್ರೀಡೆಗಳಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಪಠ್ಯಕ್ಕೆ ಒಳಪಡಸುವ ಸಿಬಿಎಸ್ಸಿ ಸಿಲಬಸ್ ವಿದ್ಯಾರ್ಥಿಗಳು,ಇಂಡಿಯನ್ ರೈಲ್ವೆ, ಇಂಡಿಯನ್ ಆರ್ಮಿ ಸೇರಿದಂತೆ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವ ವಿವಿಧ ವಿಭಾಗಗಳ ಕ್ರೀಡಾಪಟುಗಳು ಏಷ್ಯಾ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಐದನೇ ರಾಷ್ಟ್ರೀಯ ಹಿರಿಯರ ಯೋಗಾಸನ ಸ್ಪರ್ಧೆಯಲ್ಲಿ ದೇಶದ 29 ರಾಜ್ಯಗಳ ಕ್ರೀಡಾಪಟುಗಳ ಜೊತೆಗೆ ಆಲ್ ಇಂಡಿಯಾ ಪೊಲೀಸ್ ಸೆಲೆಕ್ಷನ್ ಬೋರ್ಡ್‌ನ ತಂಡವು ಭಾಗವಹಿಸಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಯೋಗಾಸನ ಪಟುಗಳನ್ನು 2025ರ ಜನವರಿ 28 ರಿಂದ ಫೆಬ್ರವರಿ 14ರವರೆಗೆ ನಡೆಯುವ ಏಷ್ಯಾ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ. ಹಾಗಾಗಿ ಎಲ್ಲಾ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುವಂತೆ ಡಾ.ಜೈದೀಪ್ ಆರ್ಯ ಸಲಹೆ ನೀಡಿದರು.ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಯೋಗಾಸನ ಅಸೊಸಿಯೇಷನ್‌ನ ಕಾರ್ಯದರ್ಶಿ ಡಾ.ಎಂ.ನಿರಂಜನಮೂರ್ತಿ,ನನ್ನ ಬಹುದಿನದ ಕನಸು ನನಸಾಗಿದೆ.ಓರ್ವ ಯೋಗಾಸನ ಕ್ರೀಡಾಪಟುವಾಗಿ ನನ್ನೂರಿನಲ್ಲಿ ಇಂತಹದೊಂದು ಸ್ಪರ್ಧೆ ಆಯೋಜಿಸಬೇಕೆಂಬ ಕನಸು, ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗಸ್ವಾಮೀಜಿ,ಮಾಜಿ ಸಚಿವರಾದ ಸೊಗಡು ಶಿವಣ್ಣ ಹಾಗೂ ಹಲವಾರು ಹಿರಿಯರ ಸಹಕಾರದಿಂದ ನನಸಾಗಿದೆ.ಇದಕ್ಕೆ ಅವಕಾಶ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ವೇದಿಕೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ,ಯೋಗಾಸನ ಭಾರತ್ ನ ಖಜಾಂಚಿ ರಚಿತ್ ಕೌಶಿಕ್, ಜಯಂತಿ, ದಯಾನಿಧಿ, ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ಇಸ್ಮಾಯಿಲ್, ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರೋಹಿತ್ ಗಂಗಾಧರ್, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೊಸಿಯೇಷನ್ ಪದಾಧಿಕಾರಿಗಳು, ಉಪಸ್ಥಿತರಿದ್ದರು.ಪಂಜಾಬ, ತ್ರಿಪುರ, ಜಮ್ಮು,ಕಾಶ್ಮೀರ, ದೆಹಲಿ, ಹಿಮಾಚಲ ಪ್ರದೇಶ, ತೆಲಂಗಾಣ, ಬಿಹಾರ, ಗೋವಾ, ಆಂಧ್ರಪ್ರದೇಶ, ಹರಿಯಾಣ, ಅಂಡಮಾನ್‌ ನಿಕೋಬಾರ್‌, ಮಹಾರಾಷ್ಟ್ರ, ಉತ್ತರ ಪ್ರದೇಶ, ಲಡಾಕ್, ಚಂಡಿಗಡ, ಚತ್ತೀಸ್‌ಘಡ, ಡಯ್ಯು, ಡಾಮನ್, ಮಧ್ಯಪ್ರದೇಶ್, ಪುದಚರಿ, ಜಾರ್ಖಾಂಡ್, ಒಡಿಸಾ, ರಾಜ್ಯಸ್ಥಾನ, ಉತ್ತರಾಕಾಂಡ, ಪಶ್ಚಿಮ ಬಂಗಾಳ, ಮಣಿಪುರ, ಮೇಘಾಲಯ,ಗುಜರಾತ್, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಅತಿಥೆಯ ಕರ್ನಾಟಕದ ಯೋಗಾಸನ ಪಟುಗಳು ಪಾಲ್ಗೊಂಡಿದ್ದರು.

ಕೋಟ್‌..

ಯೋಗವನ್ನು ಕೇವಲ ಸ್ಪರ್ಧೆಗಾಗಿ ಕಲಿಯುವುದಲ್ಲ. ಇದರಿಂದ ಮನುಷ್ಯನ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯ.ಇದರಿಂದ ಪ್ರಧಾನಿಯವರ ಫಿಟ್ ಇಂಡಿಯಾ ಕನಸನ್ನು ನನಸು ಮಾಡಬಹುದು - ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠ ತುಮಕೂರು

Share this article