‘ಪಕ್ಷ ಟಾಸ್ಕ್‌ ನೀಡಿದರೆ ಜೆಡಿಎಸ್‌ ಶಾಸಕರನ್ನು ಕರೆತರುವೆ : ಕೈನಲ್ಲಿ ಯೋಗಿ ಹೇಳಿಕೆ ಸಂಚಲನ

KannadaprabhaNewsNetwork |  
Published : Nov 26, 2024, 12:47 AM ISTUpdated : Nov 26, 2024, 05:11 AM IST
CP Yogeshwar

ಸಾರಾಂಶ

 ಜೆಡಿಎಸ್‌ ಶಾಸಕರನ್ನು ಒಡೆದು ಕಾಂಗ್ರೆಸ್‌ಗೆ ತರುತ್ತೇನೆ’ ಎಂಬ ಚನ್ನಪಟ್ಟಣ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ್‌ ಹೇಳಿಕೆಯು ಕಾಂಗ್ರೆಸ್‌ ವಲಯದಲ್ಲಿ ತೀವ್ರ ಗುಲ್ಲೆಬ್ಬಿಸಿದ್ದು, ‘ಅಂತಹ ಯಾವುದೇ ಪ್ರಸ್ತಾವನೆಯಿಲ್ಲ. ಅದರ ಅಗತ್ಯವೂ ನಮಗಿಲ್ಲ’ ಎಂದು ಬಹುತೇಕ ಕಾಂಗ್ರೆಸ್‌ ನಾಯಕರು ಸ್ಪಷ್ಟಪಡಿಸಿದ್ದಾರೆ.

 ಬೆಂಗಳೂರು : ‘ಪಕ್ಷ ಟಾಸ್ಕ್‌ ನೀಡಿದರೆ ಜೆಡಿಎಸ್‌ ಶಾಸಕರನ್ನು ಒಡೆದು ಕಾಂಗ್ರೆಸ್‌ಗೆ ತರುತ್ತೇನೆ’ ಎಂಬ ಚನ್ನಪಟ್ಟಣ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ್‌ ಹೇಳಿಕೆಯು ಕಾಂಗ್ರೆಸ್‌ ವಲಯದಲ್ಲಿ ತೀವ್ರ ಗುಲ್ಲೆಬ್ಬಿಸಿದ್ದು, ‘ಅಂತಹ ಯಾವುದೇ ಪ್ರಸ್ತಾವನೆಯಿಲ್ಲ. ಅದರ ಅಗತ್ಯವೂ ನಮಗಿಲ್ಲ’ ಎಂದು ಬಹುತೇಕ ಕಾಂಗ್ರೆಸ್‌ ನಾಯಕರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ತಮಗೆ ಟಾಸ್ಕ್ ನೀಡಿದರೆ ಒಂದು ತಿಂಗಳೊಳಗೆ ಜೆಡಿಎಸ್‌ ವಿಭಜಿಸಿ ಕಾಂಗ್ರೆಸ್‌ನೊಳಗೆ ಸೇರುವಂತೆ ಮಾಡುತ್ತೇನೆ. ಆ ಸಾಮರ್ಥ್ಯ ತಮಗಿದೆ ಎಂದು ಯೋಗೇಶ್ವರ್‌ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರು, ಜೆಡಿಎಸ್ ಶಾಸಕರು ಕಾಂಗ್ರೆಸ್‌ ಬರುವ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಲ್ಲ ಎಂದಿದ್ದಾರೆ.

ಇನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಕಾಂಗ್ರೆಸ್‌ ಅಂತಹ ಅಗತ್ಯವಿಲ್ಲ ಎಂದು ಹೇಳಿದ್ದರೆ ನಮಗೆ ಅಂತಹ ದುರ್ಗತಿ ಬಂದಿಲ್ಲ ಎಂದು ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ನಿಷ್ಠುರವಾಗಿ ಮಾತನಾಡಿದ್ದಾರೆ.

ಜಿ.ಟಿ. ದೇವೇಗೌಡರಿಗೆ ಕರೆದಿದ್ದೆ- ಡಿಕೆಶಿ: ಈ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್‌ ಕರೆತರುವ ಕುರಿತ ಯೋಗೇಶ್ವರ್‌ ಹೇಳಿಕೆ ಗೊತ್ತಿಲ್ಲ. ಜಿ.ಟಿ ದೇವೇಗೌಡ ಹಿರಿಯ ನಾಯಕರು. ಅವರ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ. ನಾವು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಒಮ್ಮೆ ಆಹ್ವಾನ ನೀಡಿದ್ದೆವು. ಆದರೆ ಅವರು ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ನಮ್ಮ ಆಹ್ವಾನ ತಿರಸ್ಕರಿಸಿದರು. ಈಗ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅವರು ನೊಂದಿದ್ದಾರೆ ಎಂದು ಹೇಳಿದರು.

ಜೆಡಿಎಸ್ ನೊಂದ ಶಾಸಕರು ಕಾಂಗ್ರೆಸ್ ಸೇರುತ್ತಾರಾ ಎಂದು ಕೇಳಿದಾಗ, ಈ ವಿಚಾರವಾಗಿ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ ಎಂದಷ್ಟೇ ಹೇಳಿದರು.

ಕಾಂಗ್ರೆಸ್‌ಗೆ ಅಷ್ಟು ದುರ್ಗತಿ ಬಂದಿಲ್ಲ: ಹರಿಪ್ರಸಾದ್

ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಕಾಂಗ್ರೆಸ್‌ಗೆ ಅಷ್ಟು ದುರ್ಗತಿ ಬಂದಿಲ್ಲ. ಬಿಜೆಪಿ ಮಾಡಿದ ತಪ್ಪು ನಾವು ಮಾಡಲ್ಲ ಎಂದು ಹೇಳಿದರು.ನಾವು ಬಿಜೆಪಿ ರೀತಿಯಲ್ಲಿಯೇ ನಡೆದರೆ ಅದಕ್ಕೆ ಅರ್ಥವಿದೆಯೇ? ನಮಗೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಬೇಡ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರೋರು ಅವರ ಪಕ್ಷದಲ್ಲೇ ಇದ್ದುಕೊಂಡು ಹೋರಾಟ ಮಾಡಲಿ ಎಂದರು.

ಜೆಡಿಎಸ್‌ನವರನ್ನು ಸೇರಿಸಿಕೊಳ್ಳುವುದಿಲ್ಲವೇ? ಎಂಬ ಪ್ರಶ್ನೆಗೆ, ಅದನ್ನು ಇಬ್ಬರು ಮಹಾನ್ ನಾಯಕರು ತೀರ್ಮಾನ ಮಾಡ್ತಾರೆ. ಅವರು ಯಾರು ಅನ್ನೋದು ವಿಶ್ವಕ್ಕೇ ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅದರ ಅಗತ್ಯ ನಮಗಿಲ್ಲ- ಪರಮೇಶ್ವರ್:

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಜೆಡಿಎಸ್‌ ಶಾಸಕರನ್ನು ಕರೆತರುವ ಅಗತ್ಯ ನಮಗೆ ಇಲ್ಲ. ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಬಿಜೆಪಿಯವರು ಮಾಡಿದ ಹಾಗೆ ಆಪರೇಷನ್ ಕಮಲ ಮಾಡಲ್ಲ. ಈಗ ಯೋಗೇಶ್ವರ್ ಆ ಮಾತು ಹೇಳಿದ್ದರೆ, ಅದರ ಅಗತ್ಯತೆ ನಮಗೆ ಇಲ್ಲ. 138 ಜನ ಶಾಸಕರಿದ್ದೇವೆ. ಸರ್ಕಾರ ಸುಭದ್ರವಾಗಿದೆ ಎಂದರು.

ಜೆಡಿಎಸ್‌ ಸಿದ್ಧಾಂತ ರಹಿತ ರಾಜಕಾರಣ ಕಾರಣ:

ಸಚಿವ ದಿನೇಶ್ ಗುಂಡೂರಾವ್‌ ಮಾತನಾಡಿ, ಯೋಗೇಶ್ವರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತ ನಾನು ವಿಶ್ಲೇಷಣೆ ಮಾಡೋಕೆ ಹೋಗಲ್ಲ. ಆದ್ರೆ ಜೆಡಿಎಸ್‌ನ ಸಿದ್ಧಾಂತ ರಹಿತ ರಾಜಕಾರಣ ಇದಕ್ಕೆಲ್ಲಾ ಕಾರಣ. ಪಕ್ಷ ಅವರ ಕುಟುಂಬಕ್ಕೆ ಮಾತ್ರ ಎಲ್ಲಾ ಸೀಮಿತ ಆಗಿದೆ. ಇದರಿಂದ ಎಲ್ಲಾ ನಾಯಕರೂ ನೊಂದಿದ್ದಾರೆ. ರಾಜಕೀಯ ಭವಿಷ್ಯಕ್ಕಾಗಿ ಹೊರಬರಲು ಯತ್ನಿಸುತ್ತಿದ್ದಾರೆ ಎಂದರು.

ಯೋಗಿ ಹೇಳಿದ್ದೇನು?

ನಾನು ಮನಸ್ಸು ಮಾಡಿದರೆ, ಪಾರ್ಟಿ ಟಾಸ್ಕ್‌ ಕೊಟ್ಟರೆ ಜೆಡಿಎಸ್‌ ಶಾಸಕರನ್ನು ಒಡೆದು ಕಾಂಗ್ರೆಸ್‌ಗೆ ಕರೆ ತರುವೆ. ನಾಳೆ ಬೆಳಗ್ಗೆಯಿಂದಲೇ ಕೆಲಸ ಶುರು ಮಾಡುವೆ. ಇದು ಸವಾಲು ಅಂತ ನನಗೆ ಅನ್ನಿಸಲ್ಲ.

-ಯೋಗೇಶ್ವರ್‌, ಚನ್ನಪಟ್ಟಣ ಕಾಂಗ್ರೆಸ್‌ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಸ್ ಮ್ಯಾಗ್ನೆಟ್ ಯೋಜನೆ: ಬಟ್ಟಲಕಟ್ಟೆಯಲ್ಲಿ ಪ್ರತಿಭಟನೆ
ಹನೂರು ಚನ್ನಪ್ಪ ಕೃತಿ ಗಟ್ಟಿತನದಿಂದ ಕೂಡಿದೆ: ವಿ. ಮನೋಹರ್‌