;Resize=(412,232))
ಜಗದ್ಗುರು ಮೌನೇಶ್ವರ ಮಹೋತ್ಸವ
ಮತ್ತೊಬ್ಬರ ಸಹಾಯ ಬಯಸದೇ ನಿಮ್ಮ ಬದುಕಿನ ಉದ್ಧಾರಕ್ಕೆ ನೀವೇ ಶಿಲ್ಪಿಯಾಗುವ ಮೂಲಕ ಸ್ವಾವಲಂಬಿಗಳಾಗಿ ಜೀವನ ಸಾಗಿಸಿ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ನುಡಿದರು.
ನಗರದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಮೌನೇಶ್ವರ ಕಮಿಟಿ, ವಿಶ್ವಕರ್ಮ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ, ಕಾಳಿಕಾ ಮಹಿಳಾ ಮಂಡಳ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ನೌಕರರ ಕ್ಷೇಮಾಭಿವೃದ್ಧಿ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಗದ್ಗುರು ಮೌನೇಶ್ವರ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪ್ರತಿಯೊಬ್ಬರಲ್ಲೂ ವಿಶೇಷ ಜ್ಞಾನವಿದೆ. ಕರ್ಮಕೌಶಲ, ಸಂಸ್ಕಾರದ ಜತೆಗೆ ಸತತ ಪ್ರಯತ್ನ, ದೈವಿ ಕೃಪೆಯಿಂದ ಅಭಿವೃದ್ಧಿ ಸಾಧ್ಯ. ಮನಸ್ಸಿನ ಏಕಾಗ್ರತೆಗೆ ಉಪನಯನ ಅವಶ್ಯಕ. ಮನುಷ್ಯ ಋಷಿ ಪರಂಪರೆ ಹೊಂದಿದ ದೀಕ್ಷೆಯ ಜಪದಿಂದ ಮೇಧಾವಿಯಾಗುತ್ತಾನೆ. ಅದನ್ನು ಪ್ರತಿಯೊಬ್ಬರೂ ಪಾಲಿಸಿ. ತಂದೆ-ತಾಯಿ ಮತ್ತು ಗುರುಗಳು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರ ಸಾಧನೆಗೆ ಪ್ರೋತ್ಸಾಹಿಸಬೇಕು. ಕಷ್ಟದಿಂದ ಪಡೆದ ಸುಖದ ಅನುಭವವನ್ನು ಮಕ್ಕಳಿಗೆ ಉಣ ಬಡಿಸಿದಾಗ ಮಾತ್ರ ಭವಿಷ್ಯದಲ್ಲಿ ಗುರಿ ಸಾಧನೆ ತಲುಪಲು ಸಾಧ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿದರು.