ಸರಿಯಾದ ಉಸಿರಾಟದಿಂದ ಶರೀರ, ಮನಸ್ಸಿಗೆ ಸಮಾಧಾನ
ಕನ್ನಡಪ್ರಭ ವಾರ್ತೆ ಗೋಕರ್ಣ
ಅಶೋಕೆಯ ಮೂಲ ಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಮಂಗಳವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಉಸಿರಾಟದ ಸೂಕ್ಷ್ಮಗಳ ಕುರಿತಾಗಿ ಪ್ರವಚನವನ್ನು ಅನುಗ್ರಹಿಸುತ್ತಾ, ಸರಿಯಾದ ಉಸಿರಾಟವು ಮೂಲಾಧಾರ ಚಕ್ರದವರೆಗೆ ಸಂಚರಿಸಬೇಕು. ಉಸಿರಾಡುವಾಗ ಶ್ವಾಸಕೋಶದವರೆಗೆ ಗಾಳಿರೂಪದಲ್ಲಿ ಸಂಚರಿಸಿದರೆ, ಮುಂದೆ ಮೂಲಾಧಾರ ಚಕ್ರದವರೆಗೆ ಶ್ವಾಸವು ಚೈತನ್ಯದ ರೂಪದಲ್ಲಿ ಸಂಚರಿಸುತ್ತದೆ. ಉಸಿರಾಟದ ಗತಿಯು ಹಂಸದಂತೆ ಧಾವಂತ ಇಲ್ಲದೇ ಸರಾಗವಾಗಿ ಆದಾಗ ಸಮಾಧಾನವನ್ನು ಸಾಧಿಸಿಕೊಳ್ಳಲು ಸಾಧ್ಯ. ಸಮಾಧಾನದಿಂದ ಶರೀರ, ಮನಸ್ಸು, ಜೀವನಕ್ಕೆ ಅಪಾರವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ನಿವೃತ್ತ ರಾಜ್ಯ ಪೋಲಿಸ್ ಮಹಾನಿರ್ದೇಶಕರು ಹಾಗೂ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್ ದಂಪತಿ ಶ್ರೀಗಳಿಂದ ಆಶೀರ್ವಾದ ಪಡೆದರು. ಮುಳ್ಳೇರಿಯಾ ಹವ್ಯಕ ಮಂಡಲದ ಗುತ್ತಿಗಾರು, ಎಣ್ಮಕಜೆ, ಗುಂಪೆ, ಸುಳ್ಯ, ಕಾಸರಗೊಡು, ಕೊಡಗು ಹವ್ಯಕ ವಲಯಗಳ ಪರವಾಗಿ ಶಿವರಾಮಚಂದ್ರ ಶಿವಾಲ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ವಿನೋದ್ ಹೆಗಡೆ, ನಂದನ್ ಹೆಗಡೆ, ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಕೃಷ್ಣಮೂರ್ತಿ ಮಾಡಾವು, ಕೃಷ್ಣಪ್ರಮೋದ, ಕೇಶವ ಪ್ರಕಾಶ ಗುಂಪೆ, ದಿನಪ್ರಧಾನರಾಗಿ ಶಿರಸಿ ಲಕ್ಷ್ಮಣ ಶಾನಭಾಗ ದಂಪತಿಗಳು ಉಪಸ್ಥಿತರಿದ್ದರು.