ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಸಾಮಾನ್ಯ ಟಿಕೆಟ್‌ ಪಡೆದು ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸಬಹುದು!

KannadaprabhaNewsNetwork | Published : Apr 6, 2025 1:47 AM

ಸಾರಾಂಶ

ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಮಾನ್ಯ ದರ್ಜೆ ಟಿಕೆಟ್‌ ಪಡೆದು, ಹೊಸಪೇಟೆಯಿಂದ ಹುಬ್ಬಳ್ಳಿಗೆ ಹಾಗೂ ಹುಬ್ಬಳ್ಳಿಯಿಂದ ಹೊಸಪೇಟೆಗೆ ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಬಹುದು ಎಂದು ನೈಋತ್ಯ ವಲಯ ತಿಳಿಸಿದೆ.

ಹೊಸಪೇಟೆ: ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಮಾನ್ಯ ದರ್ಜೆ ಟಿಕೆಟ್‌ ಪಡೆದು, ಹೊಸಪೇಟೆಯಿಂದ ಹುಬ್ಬಳ್ಳಿಗೆ ಹಾಗೂ ಹುಬ್ಬಳ್ಳಿಯಿಂದ ಹೊಸಪೇಟೆಗೆ ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಬಹುದು ಎಂದು ನೈಋತ್ಯ ವಲಯ ತಿಳಿಸಿದೆ.

ಸಾಮಾನ್ಯ ದರ್ಜೆಯ ರೈಲು ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯವನ್ನು ಕಲ್ಪಿಸುವ ದೃಷ್ಟಿಯಿಂದ ಈ ವರ್ಗದವರಿಗೆ ಹೊಸಪೇಟೆಯಿಂದ ಹುಬ್ಬಳ್ಳಿ ವರೆಗೆ ಹೆಚ್ಚುವರಿ ಶುಲ್ಕ ನೀಡದೇ ಸ್ಲೀಪರ್ ದರ್ಜೆ ಕೋಚ್‌ಗಳಲ್ಲಿ ಪ್ರಯಾಣಿಸುವ ಅವಕಾಶ ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿತ್ತು.

ಈ ಆದೇಶ ಜಾರಿಯಲ್ಲಿದ್ದರೂ ಕಳೆದ ಒಂದು ವರ್ಷದಿಂದ ಸಾಮಾನ್ಯ ದರ್ಜೆಯ ಪ್ರಯಾಣಿಕರು ಈ ಸೌಲಭ್ಯ ಬಳಸಿಕೊಳ್ಳದಂತೆ ಆಕ್ಷೇಪಿಸಿ, ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಕಿರುಕುಳ ನೀಡಿ, ಟಿಕೆಟ್ ಪರಿವೀಕ್ಷಕರು (ಟಿಸಿಗಳು) ಹೆಚ್ಚುವರಿ ಶುಲ್ಕ ದಂಡ ವಿಧಿಸುತ್ತಿದ್ದರು. ಟಿಕೆಟ್ ಪರಿವೀಕ್ಷಕರ ಈ ಕ್ರಮದ ವಿರುದ್ಧ ನೈಋತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ ಹಾಗೂ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪ್ರಧಾನ ವ್ಯವಸ್ಥಾಪಕರಿಗೆ ಸೌಲಭ್ಯ ಮುಂದುವರಿಸುವಂತೆ ಮನವಿ ಸಲ್ಲಿಸಿದ್ದರು.

ಬೇಡಿಕೆಗೆ ಸ್ಪಂದಿಸಿರುವ ಪ್ರಧಾನ ವ್ಯವಸ್ಥಾಪಕರು ಪರಿಷ್ಕೃತ ಆದೇಶವನ್ನು ಹೊರಡಿಸಿದ್ದು, ಈ ಹಿಂದೆ ಜಾರಿಯಲ್ಲಿದ್ದ ಸೌಲಭ್ಯ ಯಥಾಸ್ಥಿತಿ ಮುಂದುವರಿಸಲಾಗಿದೆ. ಅದರಂತೆ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸುವ ಮೈಸೂರು-ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಮಾನ್ಯ ದರ್ಜೆ ಟಿಕೆಟ್ ಪಡೆದು ಹೊಸಪೇಟೆಯಿದ ಹುಬ್ಬಳ್ಳಿಗೆ ಹೆಚ್ಚುವರಿ ಶುಲ್ಕ ನೀಡದೇ ಎಸ್‌ 8 ಮತ್ತು ಎಸ್‌ 9 ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ. ಅದರಂತೆ ಹುಬ್ಬಳ್ಳಿಯಿಂದ ಪ್ರತಿದಿನ ಸಂಜೆ 6.30ಕ್ಕೆ ನಿರ್ಗಮಿಸುವ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್‌ ರೈಲಲ್ಲಿ ಸಾಮಾನ್ಯ ದರ್ಜೆ ಟಿಕೆಟ್ ಪಡೆದು ಎಸ್‌5, ಎಸ್‌6 ಮತ್ತು ಎಸ್‌7 ಈ ಸ್ಲೀಪರ್ ಕೋಚ್‌ಗಳಲ್ಲಿ ಹೊಸಪೇಟೆ ವರೆಗೆ ಮಾತ್ರ ಪ್ರಯಾಣಿಸಬಹುದಾಗಿದೆ. ಅದರಂತೆ ಪ್ರತಿದಿನ ಮಧ್ಯಾಹ್ನ ಒಂದು ಗಂಟೆಗೆ ಹುಬ್ಬಳ್ಳಿಯಿಂದ ನಿರ್ಗಮಿಸುವ ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್ ಪಡೆದು ಎಸ್‌8 ಮತ್ತು ಎಸ್‌9 ಸ್ಲೀಪರ್ ಕೋಚ್‌ಗಳಲ್ಲಿ ಬಳ್ಳಾರಿ ವರೆಗೆ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಇದೇ ರೈಲಿನಲ್ಲಿ ಬಳ್ಳಾರಿಯಿಂದ ಹುಬ್ಬಳ್ಳಿ ವರೆಗೆ ಈ ಸೌಲಭ್ಯ ಇಲ್ಲ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರಣ್ ಮಾತೂರ್ ಹಾಗೂ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅರವಿಂದ ಹರ್ಲೇಕರ್ ತಿಳಿಸಿದ್ದಾರೆ.

Share this article