ಎಚ್ಪಿಸಿಎಲ್ ಎಡವಟ್ಟಿನಿಂದಾಗಿ ಸಿಲಿಂಡರ್ ಸಿಗದೆ ಸಾರ್ವಜನಿಕರ ಪರದಾಟ
ಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ ಮುಂಡಗೋಡಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ನವರ ಎಡವಟ್ಟಿನಿಂದಾಗಿ ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್ ಸಿಗದೆ ಗ್ರಾಹಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಪಟ್ಟಣವನ್ನು ಗ್ರಾಮೀಣ ವ್ಯಾಪ್ತಿಗೆ ಸೇರಿಸಿರುವ ಪರಿಣಾಮ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಮುಂಚೆ ೨೫ ದಿನಕ್ಕೊಮ್ಮೆ ಸಿಗುತ್ತಿದ್ದ ಸಿಲಿಂಡರ್ ಈಗ ೪೫ ದಿನ ಕಾಯಬೇಕಾಗಿದೆ.
ಕಳೆದ ಸುಮಾರು ೬ ತಿಂಗಳಿನಿಂದ ಇಲ್ಲಿಯ ಜನ ಅಡುಗೆ ಅನಿಲಕ್ಕಾಗಿ ಅನುಭವಿಸುತ್ತಿರುವ ಪಾಡು ಅಷ್ಟಿಷ್ಟಲ್ಲ. ೨-೩ ತಿಂಗಳ ಕಾಲ ಇರಾನ್-ಅಮೆರಿಕಾ ನಡುವಿನ ಯುದ್ದದ ಪರಿಣಾಮ ಸಿಲಿಂಡರ್ ಕೊರತೆಯಿಂದ ಸಿಲಿಂಡರ್ ಸಿಗದೆ ಪರದಾಡಬೇಕಾಯಿತು. ಇದೀಗ ಪಟ್ಟಣಕ್ಕೆ ೨೫ ದಿನ ಹಾಗೂ ಗ್ರಾಮಿಣ ಪ್ರದೇಶಕ್ಕೆ ೪೫ ದಿನಕ್ಕೆ ಒಂದು ಸಿಲಿಂಡರ್ ನೀಡುವ ಹೊಸ ನಿಯಮ ಜಾರಿ ಮಾಡಲಾಗಿದ್ದು, ಅದರಂತೆ ೧೯೯೬ರ ಪೂರ್ವದ ಆದೇಶವನ್ನಾಧರಿಸಿ ಮುಂಡಗೋಡ ಪಟ್ಟಣವು ಗ್ರಾಮೀಣ ಪ್ರದೇಶಕ್ಕೆ ಸೇರ್ಪಡೆಯಾಗಿದ್ದರಿಂದ ಸಿಲಿಂಡರ್ ಬುಕಿಂಗ್ ಆಗಬೇಕಾದರೆ ಕನಿಷ್ಠ ೪೫ ದಿನ ಕಾಯಬೇಕಾಗಿದೆ.
ಗೃಹಬಳಕೆಯ ಸಿಲಿಂಡರ್ ದೊರೆಯದ ಹಿನ್ನೆಲೆ ಕೆಲವರು ಅನಿವಾರ್ಯವಾಗಿ ಸುಮಾರು ₹೩ ಸಾವಿರ ನೀಡಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ ಅಡುಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಮರ್ಷಿಯಲ್ ಸಿಲಿಂಡರ್ ದರ ಹೆಚ್ಚಿರುವುದರಿಂದ ಸಾಮಾನ್ಯ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಿಲಿಂಡರ್ ಸಮಸ್ಯೆ ಮತ್ತಷ್ಟು ಸಂಕಷ್ಟ ತಂದಿದೆ.
ಸುತ್ತಮುತ್ತ ಸಾಕಷ್ಟು ಅರಣ್ಯವಿದ್ದರೂ ಉರುವಲು ಕಟ್ಟಿಗೆ ತರುವಂತಿಲ್ಲ. ಪಡಿತರ ಅಂಗಡಿಯಲ್ಲಿ ಸೀಮೆ ಎಣ್ಣೆ ನೀಡುವುದನ್ನು ಕೂಡ ಸ್ಥಗಿತಗೊಳಿಸಿದ್ದರಿಂದ ಶೇ. ೯೯ರಷ್ಟು ಜನ ಅಡುಗೆ ಅನಿಲವನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಈಗ ಅಡುಗೆ ಅನಿಲವಿಲ್ಲದೆ ಅಡುಗೆಯೇ ಆಗುವುದಿಲ್ಲ ಎಂಬ ಸ್ಥಿತಿಗೆ ಜನ ಬಂದಂತಾಗಿದೆ. ಇಂತಹ ಸಂದರ್ಭದಲ್ಲಿ ಸಿಲಿಂಡರ್ ಸಿಗದೆ ಇರುವುದರಿಂದ ಜನರಿಗೆ ದಿಕ್ಕೇ ತೋಚದಂತಾಗಿದೆ.೧೯೯೫-೯೬ ಪೂರ್ವದ ಜನಸಂಖ್ಯೆಯಂತೆ ಮುಂಡಗೋಡ ಗ್ರಾಮೀಣ ಪ್ರದೇಶವಾಗಿತ್ತು. ಅದೇ ಆದೇಶ ಮುಂದುವರೆದ ಪರಿಣಾಮ ಈ ಸಮಸ್ಯೆ ಎದುರಾಗಿದೆ. ಹಾಲಿ ಜನಸಂಖ್ಯೆ ಹಾಗೂ ಪಟ್ಟಣ ಪ್ರದೇಶವಾದ ಬಗ್ಗೆ ಪಪಂನಿಂದ ದಾಖಲೆ ಪಡೆದು ಮೊದಲಿನಂತೆ ೨೫ ದಿನಕ್ಕೊಂದು ಸಿಲಿಂಡರ್ ಪೂರೈಸುವ ಬಗ್ಗೆ ಎಚ್ಪಿಸಿಎಲ್ಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಅನಿಲ ವಿತರಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಓಶಿಮಠ.