ಹುಬ್ಬಳ್ಳಿ:
ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಅವಧಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈಗಿನ ಪತ್ರಿಕಾ ವೃತ್ತಿ ಬದಲಾಗಿದೆ. ಹಿಂದಿನ ಆಸಕ್ತಿ ಈಗಿಲ್ಲ. ದೆಹಲಿ ಅಂದ ತಕ್ಷಣ ಯುವಕರು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಅವಕಾಶ ಸಿಕ್ಕರೆ ಮೊದಲು ಅದನ್ನು ಒಪ್ಪಿಕೊಳ್ಳಬೇಕು. ಅಲ್ಲಿ ಯುವಕರಿಗೆ ಕಲಿಕೆಗೆ ಹೆಚ್ಚು ಅವಕಾಶ ಸಿಗಲಿದೆ. ಯುವ ಪತ್ರಕರ್ತರು ಪತ್ರಿಕೆಗಳನ್ನು ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಎಐನಂತಹ ಹೊಸ ಸಾಫ್ಟ್ವೇರ್ಗಳು ಉದ್ಯೋಗ ಕಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಸವಾಲುಗಳ ನಡುವೆ ಯುವ ಪತ್ರಕರ್ತರು ಸತ್ಯ, ಪ್ರಾಮಾಣಿಕತೆ, ಆತ್ಮಸಾಕ್ಷಿಯಿಂದ ಮುಂದೆ ಸಾಗಬೇಕು. ವಾಟ್ಸ್ಆ್ಯಪ್ ಯುನಿವರ್ಸಿಟಿಯಿಂದ ಬಂದ ಪ್ರಶ್ನೆಗಳಿಗೆ ನಿಜವಾದ ಉತ್ತರವನ್ನು ಪತ್ರಕರ್ತರೇ ಅರಿಯಬೇಕಾಗಿದೆ. ಸತ್ಯ ಹೇಳುವುದನ್ನು, ಆಳುವವರನ್ನು ಪ್ರಶ್ನಿಸುವುದನ್ನು ಎಂದಿಗೂ ಮರೆಯಬಾರದು ಎಂದರು.
ಬೆಟ್ಟದಷ್ಟು ಸುಳ್ಳು ಹೇಳುವವರ ನಡುವೆ ಸತ್ಯ ಹೇಳಲು ಹಿಂಜರಿಯಬಾರದು. ಇಂದು ನಾವು ಭೂಮಿಗೆ ಭಾರವಾಗುತ್ತಿದ್ದೇವೆ. ನಿರ್ಲಕ್ಷ್ಯ, ನಿಷ್ಕ್ರಿಯತೆಯಿಂದ ಸಾವಿನ ನಿದ್ದೆಯಲ್ಲಿ ನಡೆಯುತ್ತಿದ್ದೇವೆ. ಈಗಲಾದರೂ ನಾವು ಬದುಕುವ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಸನತಕುಮಾರ್ ಬೆಳಗಲಿ ಮಾತನಾಡಿ, ಇಂದು ಮಾಧ್ಯಮದ ಸ್ವರೂಪ ಬದಲಾಗಿದೆ. ಈ ಹಿಂದೆ ಪತ್ರಿಕೆಯೇ ಮಾಧ್ಯಮವಾಗಿತ್ತು. ಆದರೆ, ಈಗ ಟಿವಿ, ಡಿಜಿಟಲ್ ಮಾಧ್ಯಮ ಬಂದಿವೆ. ಹೊಸ ಸವಾಲನ್ನು ಎದುರಿಸುತ್ತಿದ್ದೇವೆ. ಹಿಂದೆ ಕಷ್ಟದ ದಿನಗಳಿದ್ದರೂ ಸಹ ವಿಶ್ವಾಸಾರ್ಹತೆ ಗೌರವವಿತ್ತು. ಆದರೆ, ಈಗ ಪತ್ರಿಕೋದ್ಯಮದಲ್ಲಿ ಹೊಸ-ಹೊಸ ತಂತ್ರಜ್ಞಾನ, ಆವಿಷ್ಕಾರಗಳು ಬಂದಿದ್ದು, ವಿಶ್ವಾಸಾರ್ಹತೆ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಹಿತ ಕಾಯುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ₹ 1.36 ಕೋಟಿ ಇರುವ ಇಡಿಗಂಟನ್ನು ₹ 2 ಕೋಟಿ ದಾಟಿಸುವ ಗುರಿ ಹೊಂದಲಾಗಿದೆ. ವೃತ್ತಿ ಜತೆಗೆ ಪತ್ರಕರ್ತರು ತಮ್ಮ ಕುಟುಂಬದ ಕಾಳಜಿ ವಹಿಸಬೇಕು ಎಂದರು.ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗಾಗಿ, ಕಾಳಜಿ ಪೂರ್ವಕವಾಗಿ, ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕಾರ್ಯ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹಲವಾರು ಯೋಜನೆ ಹಮ್ಮಿಕೊಳ್ಳುತ್ತಿದ್ದು, ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿದರು. ಇದೇ ವೇಳೆ ನೂತನ ಪದಾಧಿಕಾರಿಗಳು, ಕಾರ್ಯಕಾರಣಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ ಸೇರಿದಂತೆ ಹಲವರಿದ್ದರು. ಈರಪ್ಪ ನಾಯ್ಕರ್ ಪ್ರಾರ್ಥಿಸಿದರು. ಶಾಹೀನ್ ಮೊಕಾಶಿ ನಿರೂಪಿಸಿದರು.